ಬಿಬಿಎಂಪಿ ಸದಸ್ಯ ಏಳುಮಲೈ ಸಾವಿಗೆ ಹೊಣೆ ಯಾರು?
ಬೆಂಗಳೂರು, ಡಿಸೆಂಬರ್ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಗಾಯಪುರಂ ವಾರ್ಡ್ ಸದಸ್ಯ ಏಳುಮಲೈ ವಿಧಿವಶರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿ.ಏಳುಮಲೈ (40) ಅವರು ಮೂಗಿನಲ್ಲಿ ಗುಳ್ಳೆ ಆಗಿದೆ ಎಂಬ ಕಾರಣಕ್ಕೆ ಕೋಲ್ಸ್ ಪಾರ್ಕ್ನಲ್ಲಿರುವ ಸಂತೋಷ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ, ಬಳಿಕ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬಿಬಿಎಂಪಿ ಪಕ್ಷೇತರ ಸದಸ್ಯ ಏಳುಮಲೈ ನಿಧನ
28 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಏಳುಮಲೈ ಅವರು ಗುರುವಾರ ಮುಂಜಾನೆ 1.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಏಳುಮಲೈ ಅವರ ಸಂಬಂಧಿಕರು, ಅಭಿಮಾನಿಗಳು ಸಂತೋಷ್ ಆಸ್ಪತ್ರೆ ಮೇಲೆ ದಾಳಿ ಮಾಡುವ ಆತಂಕವಿದ್ದು, ಕೆಎಸ್ಆರ್ಪಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.
ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ ಆರೋಗ್ಯ ಸ್ಥಿತಿ ಗಂಭೀರ
ಬಿಬಿಎಂಪಿ ಸಮಾಜ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಏಳುಮಲೈ ಅವರು ಜನಪರ ಕಾಳಜಿ ಹೊಂದಿದ್ದರು. ಬಿಬಿಎಂಪಿಯ ಸದಸ್ಯರು ಏಳುಮಲೈ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಏಳುಮಲೈ ಅವರ ಸಾವಿಗೆ ಯಾರು ಹೊಣೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು
'ನವೆಂಬರ್ 10ರಂದು ಏಳುಮಲೈ ಅವರನ್ನು ಸಂತೋಷ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಅನಸ್ತೇಷಿಯಾ ಕೊಡುವ ಸಂದರ್ಭದಲ್ಲಿ ಯಡವಟ್ಟಾಗಿ ಅವರಿಗೆ ಹೃದಯಾಘಾತ ಸಂಭವಿಸಿದೆ. ಅನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಯಿತು' ಎಂದು ಅವರ ಸಹೋದರ ಪ್ರಕಾಶ್ ಹೇಳಿದ್ದರು.
ಬಿಬಿಎಂಪಿಯಿಂದ ಚಿಕಿತ್ಸೆಗೆ ನೆರವು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎರಡು ಕಂತುಗಳಲ್ಲಿ 7 ಲಕ್ಷ ಹಣವನ್ನು ಏಳುಮಲೈ ಅವರ ಚಿಕಿತ್ಸೆಗಾಗಿ ಬಿಡುಗಡೆ ಮಾಡಿತ್ತು. ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿಯೂ ಏಳುಮಲೈ ಅವರ ಸಾವಿಗೆ ಸಂತೋಷ್ ಆಸ್ಪತ್ರೆ ವೈದ್ಯರ ಯಡವಟ್ಟು ಕಾರಣ ಎಂದು ಚರ್ಚೆ ನಡೆದಿತ್ತು. ಮೇಯರ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಮೇಯರ್ ಭೇಟಿ
ನವೆಂಬರ್ 13ರಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಏಳುಮಲೈ ಅವರ ಆರೋಗ್ಯ ವಿಚಾರಿಸಿದ್ದರು. 'ಏಳುಮಲೈ ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ' ಹೇಳಿದ್ದರು.
ಜಮೀರ್ ಅಹಮದ್ ಭೇಟಿ
ಸಚಿವ ಜಮೀರ್ ಅಹಮದ್ ಖಾನ್ ಅವರು ಸಹ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ಏಳುಮಲೈ ಅವರ ಆರೋಗ್ಯ ವಿಚಾರಿಸಿದ್ದರು. ಕುಟುಂಬ ಸದಸ್ಯರ ಜೊತೆ ಮಾತನಾಡಿದ್ದರು. ವೈದ್ಯರ ಜೊತೆ ಏಳುಮಲೈ ಆವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.