ಡಿವಿಎಸ್ ಖಾತೆ ಬದಲು ಮತ್ತು ವಾಟಾಳ್ ಕರಾಳದಿನ
ಬೆಂಗಳೂರು, ನ 12: ಪ್ರಧಾನಿ ನರೇಂದ್ರ ಮೋದಿ ಸಚಿವ ಸದಾನಂದ ಗೌಡರಿಂದ ಯಾವ ಕಾರಣಕ್ಕಾಗಿ ರೈಲ್ವೆ ಖಾತೆಯನ್ನು ಕಸಿದುಕೊಂಡರು ಎಂದು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ (ನ 12) ಕಪ್ಪು ಬಟ್ಟೆ ಪ್ರದರ್ಶನ ನೀಡಿ ಕರಾಳದಿನ ಆಚರಿಸಿದ ವಾಟಾಳ್, ಏಕಾಏಕಿ ಡಿವಿಎಸ್ ಅವರನ್ನು ರೈಲ್ವೆ ಖಾತೆಯಿಂದ ತೆಗೆದು ಹಾಕಿದ್ದು ತಪ್ಪು, ರಾಜ್ಯದ 19 ಜನ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. (ವಾಟಾಳ್ ಪ್ರತಿಭಟನೆಗೆ ಮರಾಠಿ ಎಮ್ಮೆಗಳ ಹಿಂದೇಟು)
ಕರ್ನಾಟಕ ರಾಜ್ಯದ ಜನರನ್ನು ಗುಲಾಮರನ್ನಾಗಿ ಕಾಣುವುದನ್ನು ನಾವು ಸಹಿಸುವುದಿಲ್ಲ. ಕೇಂದ್ರ ಸರಕಾರ ಮೊದಲಿಂದಲೂ ರಾಜ್ಯವನ್ನು ಕಡೆಗಣಿಸುತ್ತಾ ಬಂದಿದೆ. ಈಗ ಈ ಸಾಲಿಗೆ ನರೇಂದ್ರ ಮೋದಿ ಸರಕಾರ ಕೂಡ ಸೇರಿದೆ ಎಂದು ವಾಟಾಳ್, ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಸದಾನಂದ ಗೌಡ ಅವರಿಂದ ರೈಲ್ವೆ ಖಾತೆಯನ್ನು ಹಿಂದಕ್ಕೆ ಪಡೆದಿದ್ದು ತಪ್ಪು, ರಾಜ್ಯದ ಬಿಜೆಪಿ ಸಂಸದರಲ್ಲದೇ ಎಲ್ಲರೂ ಮೋದಿ ಸರಕಾರದ ಈ ನಡೆಯನ್ನು ವಿರೋಧಿಸಬೇಕು. ಪ್ರಧಾನಿಯವರಿಗೆ ಖಂಡನಾ ಪತ್ರವನ್ನು ಕಳುಹಿಸಬೇಕೆಂದು ವಾಟಾಳ್ ಮನವಿ ಮಾಡಿದ್ದಾರೆ.
ಮೋದಿಯವರ ಈ ಕ್ರಮ ಸರ್ವಾಧಿಕಾರಿ ಧೋರಣೆಯಂತಿದೆ, ಇದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗುತ್ತಿರುವ ಅತಿದೊಡ್ಡ ಪೆಟ್ಟು.
ಸದಾನಂದ ಗೌಡರು ರೈಲ್ವೆ ಸಚಿವರಾದಾಗ ರಾಜ್ಯದ ಬೇಡಿಕೆಗಳು ಈಡೇರಬಹುದು ಎಂದು ರಾಜ್ಯದ ಜನತೆ ಕನಸು ಕಂಡಿದ್ದರು, ಎಂದು ಮೋದಿ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ವಾಟಾಳ್ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಸದಾನಂದ ಗೌಡ ಅವರಿಂದ ರೈಲ್ವೆ ಸಚಿವ ಸ್ಥಾನ ವಾಪಸ್ ಪಡೆದಿದ್ದಕ್ಕೆ ಈಗಾಗಲೇ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ ಎಚ್ ಮುನಿಯಪ್ಪ ಬೇಸರ ವ್ಯಕ್ತ ಪಡಿಸಿದ್ದರು.












Click it and Unblock the Notifications