ಆರ್ ಟಿಐ ಕಾರ್ಯಕರ್ತ ಲಿಂಗರಾಜ್ ಕೊಲೆ: 12 ಮಂದಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು, ಅ. 29: ಭಾರಿ ಸಂಚಲನ ಮೂಡಿಸಿದ್ದ ಪತ್ರಕರ್ತ,ಆರ್ ಟಿಐ ಕಾರ್ಯಕರ್ತ ಲಿಂಗರಾಜ್ ಕೊಲೆ ಪ್ರಕರಣದ ಅಂತಿಮ ಆದೇಶ ಇಂದು ಹೊರಬಂದಿದೆ. ಈ ಪ್ರಕರಣದ ಎಲ್ಲಾ ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಮಾಜಿ ಕಾರ್ಪೋರೇಟರ್ ಗೌರಮ್ಮ, ಪತಿ ಗೋವಿಂದ ರಾಜು ಸೇರಿದಂತೆ 12 ಮಂದಿ ಆರೋಪಿಗಳನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಬುಧವಾರ(ಅ.28) ಆದೇಶ ಸಿಸಿಹೆಚ್ 59 ರ ನ್ಯಾ. ಲಕ್ಷ್ಮೀನಾರಾಯಣ ಅವರು ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಒಟ್ಟು 12 ಮಂದಿಗೆ ಜೀವಾವಧಿ ಶಿಕ್ಷೆಯಾಗಿದ್ದು, ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಚಾಮರಾಜಪೇಟೆಯ ಬಿಎಂಕೆ ಲೇ ಔಟ್ ವಿಠ್ಠಲ್ ನಗರ ನಿವಾಸಿ, ಆರ್ಟಿಐ ಕಾರ್ಯಕರ್ತ ಲಿಂಗರಾಜು ಅವರನ್ನು 2012 ನವೆಂಬರ್ 20 ರಂದು ಮನೆ ಎದುರಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ರಂಗಸ್ವಾಮಿ , ಆರ್ ಶಂಕರ್, ರಾಘವೇಂದ್ರ ಅಲಿಯಾಸ್ ರಘು, ಚಂದ್ರ, ಶಂಕರ್ ಅಲಿಯಾಸ್ ಗುಂಡ, ಉಮಾಶಂಕರ ಅಲಿಯಾಸ್ ಭವಾನಿ, ವೇಲು, ಸಿ ಗೋವಿಂದರಾಜು, ಲೋಗನಾಥ, ಜಹೀರ್, ಸುರೇಶ್ ಅಲಿಯಾಸ್ ಸೂರಿ, ಶ್ರೀಮತಿ ಗೌರಮ್ಮ (ಮಾಜಿ ಕಾರ್ಪೊರೇಟರ್) ಎಲ್ಲರಿಗೂ ಜೀವಾವಧಿ ಶಿಕ್ಷೆಯಾಗಿದೆ.
ನಗರ ಜಂಟಿ ಪೊಲೀಸ್ ಆಯುಕ್ತ ಪ್ರಣವ್ ಮೊಹಾಂತಿ ಹಾಗೂ ಸಿಐಡಿ ಎಸ್.ಪಿ. ಅಬ್ದುಲ್ ಅಹದ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು ಅಜಾದ್ ನಗರ ಕಾರ್ಪೋರೇಟರ್ ಗೌರಮ್ಮ, ಪತಿ ಗೋವಿಂದರಾಜು ಅವರು ಲಿಂಗರಾಜು ಹತ್ಯೆಗೆ ಸುಪಾರಿ ನೀಡಿದ್ದನ್ನು ಬಯಲಿಗೆಳೆದಿದ್ದರು. ರೌಡಿ ಶೀಟರ್ ಗೋರಿಪಾಳ್ಯದ ಚಂದ್ರು ಮತ್ತು ಆತನ ಸಹಚರರು ನ. 20, 2012 ರಂದು ಲಿಂಗರಾಜು ಅವರನ್ನು ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.












Click it and Unblock the Notifications