ದಿನಸಿ ತರಲು ಹೋದ ಮಹಿಳೆಯನ್ನು ಚುಡಾಯಿಸಿದವ ಅಂದರ್!
ಬೆಂಗಳೂರು, ಜೂನ್ 22: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪಿಯನ್ನು ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ನಿನ್ನೆ ಮಧ್ಯಾಹ್ನ 12-10 ಗಂಟೆ ಸಮಯದಲ್ಲಿ ಆರ್.ಟಿ. ನಗರ ಪೊಲೀಸ್ ಠಾಣಾ ಸರಹದ್ದಿನ ಗಿಡ್ಡಪ್ಪ ಬ್ಲಾಕ್, ಧೃವ ಅಪಾರ್ಮೆಂಟ್ ಹತ್ತಿರ ರಸ್ತೆಯಲ್ಲಿ ಸುಮಾರು 40 ವರ್ಷದ ಮಹಿಳೆ ತಮ್ಮ ಮನೆಗೆ ದಿನಸಿ ತರಲು ನಡೆದುಕೊಂಡು ಹೋಗುತ್ತಿದ್ದರು. ಆಗ ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಸದರಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆ (ಪಿರ್ಯಾದಿ) ನೀಡಿದ ದೂರಿನ ಮೇರೆಗೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಆರೋಪಿಯಾದ ಸಂತೋಷ್, ಲಕ್ಷ್ಮಯ್ಯ ಬ್ಲಾಕ್, ಗಂಗಾನಗರ, ಆರ್.ಟಿ.ನಗರದ ನಿವಾಸಿ ಎಂದು ತಿಳಿದು ಬಂದಿದೆ. ಈತನನ್ನು ದಸ್ತಗಿರಿ ಮಾಡುವಲ್ಲಿ ಆರ್.ಟಿ.ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಎಸಿಪಿ, ಜೆ.ಸಿ.ನಗರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ವಿ.ಜೆ.ವಿಥುನ್ ಶಿಲ್ಪಿ, ಪೊಲೀಸ್ ಇನ್ಸ್ಪೆಕ್ಟರ್, ಆರ್.ಟಿ.ನಗರ, ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.