ವೋಟರ್ ಐಡಿ ಪತ್ತೆ: ಗೃಹ ಇಲಾಖೆ, ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಫೆಬ್ರವರಿ 7: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ನಗರದ ಕ್ಷೇತ್ರದ ವ್ಯಾಪ್ತಿಯ ಮನೆಯೊಂದರಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಮತ್ತು ಜಾಲಹಳ್ಳಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮುನಿರತ್ನ ನಾಯ್ಡು ಅವರನ್ನು ಬಂಧಿಸುವಂತೆ ಬಿಜೆಪಿ ಮುಖಂಡ ತುಳಸಿ ಮುನಿರಾಜು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಮನೆಯೊಂದರಲ್ಲಿ ಪತ್ತೆಯಾಗಿದ್ದವು. ಈ ಕಾರಣದಿಂದ ಕ್ಷೇತ್ರದಲ್ಲಿ ಚುನಾವಣೆಯನ್ನೇ ಮುಂದೂಡಲಾಗಿತ್ತು. ಇಷ್ಟೆಲ್ಲ ಆಗಿದ್ದರೂ ಶಾಸಕ ಮುನಿರತ್ನ ವಿರುದ್ಧ ಜಾಲಹಳ್ಳಿ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಮುನಿರಾಜು ಆರೋಪಿಸಿದ್ದಾರೆ.

ತನಿಖಾಧಿಕಾರಿಯ ವಿರುದ್ಧವೂ ವಿಚಾರಣೆ ನಡೆಸುವಂತೆ ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.
ಮೇ 6ರಂದು ಆರ್.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷ ರೂ. ಹಣ ಟ್ರಕ್ನಲ್ಲಿ ಪತ್ತೆಯಾಗಿತ್ತು. ಜಾಲಹಳ್ಳಿ ಸಮೀಪದ ಎಸ್ಎಲ್ವಿ ಅಪಾರ್ಟ್ಮೆಂಟ್ನಲ್ಲಿ 9,746 ವೋಟರ್ ಐಡಿಗಳು ಪತ್ತೆಯಾಗಿದ್ದವು. ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಿತ್ತು.
ಮುನಿರತ್ನ ನಾಯ್ಡು ಅವರು ಅಕ್ರಮ ಎಸಗಲು ಈ ವೋಟರ್ ಐಡಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ಮುನಿರಾಜು ಆರೋಪಿಸಿದ್ದರು.
ಬಳಿಕ ಮೇ 28ರಂದು ಇಲ್ಲಿ ಚುನಾವಣೆ ನಡೆದು ಮೇ 31ರಂದು ಫಲಿತಾಂಶ ಹೊರಬಂದಿತ್ತು. ಅದರಲ್ಲಿ ಮುನಿರತ್ನ ನಾಯ್ಡು ಜಯಭೇರಿ ಭಾರಿಸಿದ್ದರು.












Click it and Unblock the Notifications