ಮಾಜಿ ಪತ್ನಿಗೆ ಮಧ್ಯರಾತ್ರಿ ಕರೆ ಮಾಡಿದವನಿಗೆ ನಮ್ಮೂರ ತಿಂಡಿ ಹೋಟೆಲ್ ಬಳಿ ಆಗಿದ್ದೇ ಬೇರೆ !
ಬೆಂಗಳೂರು, ಮಾ. 26: ಅವನೊಬ್ಬ ರೌಡಿ ಶೀಟರ್. ಮಧ್ಯ ರಾತ್ರಿಯಲ್ಲಿ ತನ್ನ ಪತ್ನಿ ಜತೆ ಎಕಾಂತದಲ್ಲಿ ಕಾಲ ಕಳೆಯುತ್ತಿದ್ದ. ಈ ವೇಳೆ ಆಕೆಯ ಮೊಬೈಲ್ ಗೆ ಕರೆ ಬಂದಿತ್ತು. ಆತ ಬೇರೆ ಯಾರೂ ಅಲ್ಲ. ಈ ಹಿಂದೆ ಆತನ ಜತೆ ಈಕೆ ಲಿವಿಂಗ್ ಟುಗೆದರ್ ಇದ್ದಳು. ಅಮೇಲೆ ನಡೆದಿದ್ದೇ ಬೇರೆ..!
ಮಧ್ಯ ರಾತ್ರಿಯಲ್ಲಿ ತನ್ನ ಪತ್ನಿಗೆ ಕರೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಸಂಚು ಹಾಕಿದ್ದ ರೌಡಿ ಶೀಟರ್ ಮತ್ತು ಅತನ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್ ನಾಯ್ಡು, ಯಶವಂತ್, ಕಾರ್ತಿಕ್ , ವಿಶಾಲ್ ಹಾಗೂ ಸಂಜಯ್ ಬಂಧಿತ ಆರೋಪಿಗಳು. ಶ್ರೀಕಾಂತ್ ನನ್ನು ನಾಗರಬಾವಿ ವೃತ್ತದ ಕಾರ್ ಶೆಡ್ ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಆಕೆ ಹೆಸರು ಮಂಜುಶ್ರೀ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಳು. ಆ ಬಳಿಕ ಪರಿಚಯವಾಗಿದ್ದ ಶ್ರೀಕಾಂತ್ ಎಂಬಾತನ ಜತೆ ಮಂಜುಶ್ರೀ ವಾಸವಾಗಿದ್ದಳು. ಹಲವು ವರ್ಷದಿಂದ ಇಬ್ಬರೂ ಗಂಡ ಹೆಂಡತಿ ತರನೇ ಸಹ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಶ್ರೀಕಾಂತ್ ನನ್ನು ಬಿಟ್ಟು ಮಂಜುಶ್ರೀ ರಾಜಾಜಿನಗರ ಮಾಜಿ ರೌಡಿ ಶೀಟರ್ ಅರುಣ್ ನಾಯ್ಡು ಜತೆ ಗುರುತಿಸಿಕೊಂಡಿದ್ದಳು. ಆತನೊಂದಿಗೆ ಜೀವನ ಸಾಗಿಸುತ್ತಿದ್ದಳು.
ಇತ್ತೀಚೆಗೆ ಶ್ರೀಕಾಂತ್ ಮಧ್ಯ ರಾತ್ರಿ ಮಂಜುಶ್ರೀಗೆ ಕರೆ ಮಾಡಿದ್ದಾನೆ. ತನ್ನ ಪತ್ನಿಗೆ ಕರೆ ಮಾಡಿದ ಎಂಬ ಕಾರಣದಿಂದ ಅರಣ್ ತನ್ನ ಸ್ನೇಹಿತರ ಜತೆಗೂಡಿ ನಾಗರಬಾವಿಯ ನಮ್ಮೂರ ತಿಂಡಿ ಬಳಿ ಕರೆಸಿಕೊಂಡಿದ್ದಾನೆ. ಅಲ್ಲಿನ ಕಾರ್ ವಾಷಿಂಗ್ ಸೆಂಟರ್ ಗೆ ಕರೆದುಕೊಂಡು ಹೋಗಿ ಶ್ರೀಕಾಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ವಿಡಿಯೋ ವೈರಲ್ ಆಗಿದೆ. ಅರುಣ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೂ ಬಿಡದೇ ಹಲ್ಲೆ ಮಾಡಿದ್ದು, ಈ ಕುರಿತು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಶ್ರೀಕಾಂತ್ ಹತ್ಯೆಗೆ ಅರುಣ್ ಸಂಚು ರೂಪಿಸಿದ್ದು, ಮಾಹಿತಿ ಆಧರಿಸಿ ಅರುಣ್ ಕುಮಾರ್ ಮತ್ತು ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ವಿಚಾರವಾಗಿ ನಡೆದ ಜಗಳದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.