ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಮೂವರು ಟೆಕ್ಕಿಗಳ ದುರ್ಮರಣ
ಬೆಂಗಳೂರು, ಮೇ 6: ಬೈಕ್ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಮೂವರು ಮೃತಪಟ್ಟಿರುವ ಧಾರುಣ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೈಕ್ನಲ್ಲಿ ಸಂಚರಿಸುವ ವೇಳೆ ಮೂವರು ಹೆಲ್ಮೆಟ್ ಧರಿಸಿರದ ಕಾರಣ ತಕ್ಷಣವೇ ಸಾವನ್ನಪ್ಪಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಎಲ್)ದ ಇಂಜಿನಿಯರ್, ಟಿ.ನರಸೀಪುರ ಮೂಲದ ಕಾರ್ತಿಕ್ (29), ಹೆಚ್ಎಎಲ್ನ ಇಂಜಿನಿಯರ್, ಕುಣಿಗಲ್ ನಿವಾಸಿ ಅನಿಲ್ (28) ಹಾಗೂ ಖಾಸಗಿ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ ಚಿಕ್ಕಬಳ್ಳಾಪುರ ನಿವಾಸಿ ಶ್ರೀನಾಥ್ (29) ಮೃತಪಟ್ಟವರು. ಈ ಮೂವರ ಪೈಕಿ ಒಬ್ಬನ ನಿಶ್ಚಿತಾರ್ಥ ಇದೇ ಗುರುವಾರ ನಡೆಯಬೇಕಿತ್ತು ಆದರೆ ವಿಧಿಯಾಟ ಬೇರೆಯೇ ಇತ್ತು.
ಮೂವರೂ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಹೊಟೇಲ್ ಕಡೆಯಿಂದ ಮಾಗಡಿ ರಸ್ತೆಯ ಕೆ.ಹೆಚ್.ಬಿ. ಕಾಲೋನಿ ಕಡೆ ವೇಗವಾಗಿ ಹೋಗುತ್ತಿದ್ದರು. ಮಾರ್ಗಮಧ್ಯೆ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ವಿದ್ಯುತ್ ಕಂಬಕ್ಕೆ ಗುದ್ದಿ ಕೆಳಗೆ ಬಿದ್ದ ಮೂವರ ತಲೆಗೆ ತೀವ್ರ ಗಾಯಗೊಂಡ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅತಿವೇಗವೇ ಈ ದುರ್ಘಟನೆಗೆ ಕಾರಣವಾಗಿದೆ. ಅವರು ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications