4475 ಡಿ.ಗ್ರೂಪ್ ಹುದ್ದೆಗಳ ಭರ್ತಿಗೆ ಕ್ರಮ: ಪ್ರಭು ಚೌಹಾಣ್
ಬೆಂಗಳೂರು, ಡಿ. 18: ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 4,447 ಡಿ.ಗ್ರೂಪ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು. ಈಗಾಗಲೇ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಕ್ರಮಕೈಗೊಂಡಿದ್ದೇವೆ ಎಂದು ಪಶುಸಂಪಗೋಪನಾ ಇಲಾಖೆ ಸಚಿವ ಪ್ರಭು ಚೌಹಾನ್ ತಿಳಿಸಿದ್ದಾರೆ. ಕಳೆದ ನವೆಂಬರ್ ಅಂತ್ಯದ ವರೆಗೆ ಇಲಾಖೆಯ ಪ್ರಗತಿ ಪರಿಶೀಲನೆಯನ್ನು ಹೆಬ್ಬಾಳದ ಪಶುಪಾಲನಾ ಭವನದಲ್ಲಿ ನಡೆಸಿದ ಬಳಿಕ ಮಾತನಾಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಲಾಖೆಯನ್ನು ವಹಿಸಿಕೊಂಡ ಬಳಿಕ ಕಳೆದ 100 ದಿನಗಳಲ್ಲಿ ಇಲಾಖೆಯಲ್ಲಿ ಆಗಿರುವ ಪ್ರತಿಯೊಂದು ಪ್ರಗತಿಯನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪರಿಶೀಲಿಸಿದರು. ಕೇಂದ್ರ ಸರ್ಕಾರದ ಸಹಯೋಗದಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ (ಎನ್.ಎ.ಡಿ.ಸಿ.ಪಿ) ಮತ್ತು ರಾಷ್ಟ್ರೀಯ ಕೃತಕ ಗರ್ಭಧಾರಣೆ (ಎನ್.ಎ.ಐ.ಪಿ) ನೂತನ ಯೋಜನೆಗಳ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು, ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಮಾರಕ ಕಾಲುಬಾಯಿ ರೋಗದ ವಿರುದ್ಧ 16ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಇದುವರೆಗೆ 29,803 ಹಳ್ಳಿಗಳಲ್ಲಿ 103.51 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಸಚಿವ ಪ್ರಭು ಚೌಹಾನ್ ಮಾಹಿತಿ ಕೊಟ್ಟಿದ್ದಾರೆ.
ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್
ಹಾಲು ಉತ್ಪಾದಕರಿಗೆ 246.24 ಕೋಟಿ ರೂ.ಗಳ ಪ್ರೋತ್ಸಾಹ ಧನ
ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮಾ
ರಾಜ್ಯದ 8.45 ಲಕ್ಷ ಹಾಲು ಉತ್ಪಾದಕರಿಗೆ 246.24 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ ಮುಖಾಂತರ (ಡಿಬಿಟಿ) ಪ್ರಥಮ ಬಾರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ವಿಶೇಷ ಘಟಕ ಯೋಜನೆಯಡಿ ರೂ.162.50 ಕೋಟಿ ಅನುದಾನ ನಿಗದಿಯಾಗಿದ್ದು, 76.98 ಕೋಟಿ ರೂ.ಗಳು ಬಿಡುಗಡೆಯಾಗಿವೆ. 16.65 ಕೋಟಿ ರೂ. ವೆಚ್ಚವಾಗಿರುತ್ತದೆ. ಗಿರಿಜನ ಉಪಯೋಜನೆಯಡಿ 91.95 ಕೋಟಿ ರೂ. ಅನುದಾನ ನಿಗದಿಯಾಗಿದ್ದು, 44.17 ಕೋಟಿ ರೂ. ಬಿಡುಗಡೆಯಾಗಿದ್ದು, 8.05 ಕೋಟಿ ರೂ. ವೆಚ್ಚವಾಗಿದೆ ಎಂದರು.
ವಲಸೆ ಕುರಿಗಾರರಿಗೆ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ನೀಡುವ ಕಾರ್ಯಕ್ರಮದಡಿ 1675 ಬಡ ಸಂಚಾರಿ, ಅರೆ ಸಂಚಾರಿ ಕುರಿಗಾರರಿಗೆ 2.88 ಕೋಟಿ ರೂ.ಗಳ ವೆಚ್ಚದಲ್ಲಿ ಉಚಿತವಾಗಿ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರೈನ್ ಕೋಟ್ ಮತ್ತು ರಬ್ಬರ್ ಫ್ಲೋರ್ ಮ್ಯಾಟ್ಗಳನ್ನು ಹೊಂದಿರುವ ಪರಿಕರಗಳ ಕಿಟ್ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ 707 ನಿರುದ್ಯೋಗ ಯುವಕ, ಯುವತಿಯರಿಗೆ 35 ಲಕ್ಷ ರೂ.ಗಳ ಅನುದಾನದಲ್ಲಿ ಪ್ರತಿ ಫಲಾನುಭವಿಗೆ 38 ಕೋಳಿಗಳಂತೆ ಒಟ್ಟು 26,866 ಅಸೀಲ್ ಕ್ರಾಸ್, ನಾಟಿ ಕೋಳಿ ಮರಿಗಳನ್ನು ವಿತರಿಸಲಾಗಿದೆ.
ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆಗಳ 14798 ಮಾಲೀಕರುಗಳಿಗೆ 15,709 ಕುರಿ ಮತ್ತು ಮೇಕೆಗಳಿಗೆ ರೂ.8.55 ಕೋಟಿ ರೂ.ಗಳ ಪರಹಾರ ಧನ ನೀಡಲಾಗಿದೆ. ಆರ್.ಐ.ಡಿ.ಎಫ್. ಯೋಜನೆಯಡಿ 44.62 ಕೋಟಿ ರೂ.ಗಳ ಅನುದಾನ ನಿಗದಿಯಾಗಿದ್ದು, 22.31 ಕೋಟಿ ರೂ.ಗಳ ಅನುದಾನವನ್ನು ನಿರ್ಮಾಣ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ. ಒಟ್ಟು 337 ಸಂಸ್ಥೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದಿದ್ದಾರೆ.
ಇದಲ್ಲದೆ ಕೆಲ ಜಿಲ್ಲೆಗಳಲ್ಲಿ ಪಶು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಾಣಿಸಿಕೊಂಡಿದ್ದು ಅವುಗಳನ್ನು ತಕ್ಷಣಕ್ಕೆ ನಿಭಾಯಿಸಲು ಆಯುಕ್ತ ನಟೇಶ್ ಅವರಿಗೆ ಸಚಿವ ಚೌಹಾನ್ ಸೂಚಿಸಿದರು. ಇಲಾಖೆ ರೈತಾಪಿ ವರ್ಗದವರಿಗೆ ಅತ್ಯಂತ ಹತ್ತಿರವಾಗಿರುವುದರಿಂದ ಯೋಜನೆಗಳ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಇಲಾಖೆಯಲ್ಲಿ ಅಭಿವೃದ್ಧಿ ಕುಂಟಿತವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಹೊನೆ ಎಂದು ಪ್ರಭು ಚೌಹಾನ್ ಎಚ್ಚರಿಕೆ ನೀಡಿದ್ದಾರೆ. ಇಲಾಖೆಯ ಕಾರ್ಯದರ್ಶೀ ರಷ್ಮಿ ಮಹೇಶ್, ಆಯುಕ್ತ ನಟೇಶ್ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು ಸಭೆಯಲ್ಲಿದ್ದರು.