ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದ ಡಿವೈಎಸ್ಪಿ ಆತ್ಮಹತ್ಯೆಗೆ ಶರಣು
ಬೆಂಗಳೂರು, ಡಿ. 27: ಸಿಐಡಿ ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ ಕಣ್ಮುಂದೆ ಇರುವಾಗಲೇ ಬೆಂಗಳೂರಿನಲ್ಲಿ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ವಿಜಯನಗರದ ಎಂ.ಸಿ ಲೇಔಟ್ ನಿವಾಸಿ ಮಾಜಿ ಡಿವೈಎಸ್ಪಿ ಹನುಮಂತಪ್ಪ ಅವರು ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಮಾಜಿ ಡಿವೈಎಸ್ಪಿ ಹನುಮಂತಪ್ಪ ಅವರು ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಿವೃತ್ತ ಡಿವೈಎಸ್ಪಿಯಾಗಿದ್ದ ಹನುಮಂತಪ್ಪ ಅವರು ಮಾಗಡಿರಸ್ತೆ, ಬ್ಯಾಟರಾಯನಪುರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ವಿಜಯನಗರ ಉಪವಿಭಾಗದಲ್ಲಿ ಎಸಿಪಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹನುಮಂತಪ್ಪನವರು ಡಿಸೆಂಬರ್ 28ರಿಂದ ಕೀಮೋಥೆರಪಿ ಚಿಕಿತ್ಸೆಗೆ ಒಳಪಡಬೇಕಿತ್ತು. ಆದರೆ, ಚಿಕಿತ್ಸೆ ಬಗ್ಗೆ ಹೆದರಿದ್ದ ಹನುಮಂತಪ್ಪ ಅವರು ಇದೇ ಕಾರಣಕ್ಕೆ ನಿವೃತ್ತ ಡಿವೈಎಸ್ಪಿ ಖಿನ್ನತೆಗೆ ಒಳಗಾಗಿದ್ದರೆಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಕುಡಿತದ ಚಟಕ್ಕೆ ಬಿದ್ದು ಕೌಟುಂಬಿಕ ಜೀವನ ಹಾಳು ಮಾಡಿಕೊಂಡಿದ್ದ ಮಹಿಳಾ ಡಿವೈಎಸ್ಪಿ ಲಕ್ಷ್ಮಿ ಎಂಬುವರು ಸ್ನೇಹಿತೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ಡಿಸೆಂಬರ್ ತಿಂಗಳಲ್ಲೇ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.











Click it and Unblock the Notifications