ಎಲ್ಲಾ ಧರ್ಮ ಗೌರವಿಸಿದ್ರೆ ಮಾತ್ರ ಸಮಾನತೆ ಸಾಧ್ಯ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಜು.10: ''ಇತರೆ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯವನ್ನು ಸಾಧಿಸಬೇಕಿದೆ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಭಾವವನ್ನು ತರಲು ಸಾಧ್ಯ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ನಿವೃತ್ತ ಇಂಜಿನಿಯರ್ ಇನ್ ಚೀಫ್ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡಾ. ಎಲ್.ಶಿವಲಿಂಗಯ್ಯನವರ 'ನುಡಿ-ನಮನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ. ಎಲ್.ಶಿವಲಿಂಗಯ್ಯ ಅವರ ಮನೆಗೆ ತೆರಳಿ ಹಲವಾರು ಭೇಟಿಯಾಗಿದ್ದೇನೆ. ಅವರು ನಮ್ಮ ತಂದೆಯವರ ಒಡನಾಟ, ಆತ್ಮೀಯತೆ, ರಾಜ್ಯ ಪ್ರಗತಿಪಥದಲ್ಲಿ ನಡೆಯಿತು ಎಂಬ ಬಗ್ಗೆ ಅತ್ಯಂತ ರೋಚಕವಾಗಿ ಹೇಳುತ್ತಿದ್ದರು. ಉನ್ನತ ಚಿಂತನೆಯ ವ್ಯಕ್ತಿತ್ವ ಅವರದು. ಹಲವಾರು ನೀರಾವರಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಬೆಂಗಳೂರಿನಲ್ಲಿ ವಿಕ್ಟೊರಿಯಾ, ನಿಮ್ಹಾನ್ಸ್ ಸೇರಿದಂತೆ ಹಲವಾರು ಆಸ್ಪತ್ರೆಗಳ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಡಾ.ಬಿ.ಆರ್. ಅಂಬೇಡ್ಕರ್ ಸಂಸ್ಥೆಗಳು ಅವರ ದೂರದೃಷ್ಟಿಯ ಫಲವಾಗಿದೆ. ಅವರ ಹಾದಿಯಲ್ಲಿ ನಡೆದು ಕೆಲಸ ಮಾಡಿದಾಗ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಯುವಕರಿಗೆ ಪ್ರೇರಣೆ:
ಡಾ. ಎಲ್.ಶಿವಲಿಂಗಯ್ಯ ಅವರು ಶ್ರಮಜೀವಿಗಳು. ಅತ್ಯಂತ ಕ್ರಿಯಾಶೀಲರಾಗಿದ್ದ ಅವರು ಯುವಕರಿಗೆ ಪ್ರೇರಣೆಯಾಗಿದ್ದರು. ಭಾರತೀಯ ಜನತಾ ಪಕ್ಷದ ದಲಿತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಡಾ. ಎಲ್.ಶಿವಲಿಂಗಯ್ಯ ಅವರ ಕಾರ್ಯಸಾಧನೆಗಳನ್ನು ಯುವಪೀಳಿಗೆಗೆ ಪ್ರಚುರಪಡಿಸುವ ಉದ್ದೇಶದಿಂದ ಅವರ ಸುಪುತ್ರರಾದ ಡಾ.ರವಿಪ್ರಕಾಶ್ ಅವರು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.

ಮಗುವಿನ ಮುಗ್ಧತೆಯ ಡಾ.ಎಲ್.ಶಿವಲಿಂಗಯ್ಯ:
ಮನುಷ್ಯನಿಗೆ ತನ್ನ ಜೀವನದ ಉದ್ದೇಶ ತಿಳಿದಿದ್ದರೆ ಒಂದು ಸಂಸ್ಥೆಯಾಗಿ ಬೆಳೆಯಬಲ್ಲ ಎಂಬುದನ್ನು ಡಾ. ಎಲ್.ಶಿವಲಿಂಗಯ್ಯ ಅವರು ನಿರೂಪಿಸಿದ್ದಾರೆ. ನಾವು ಬದುಕನ್ನು ನಿಭಾಯಿಸುವ ರೀತಿ ಬಹಳ ಮುಖ್ಯ. ಮಗುವಿನ ಮುಗ್ಧತೆ ಹಾಗೂ ಆತ್ಮಸಾಕ್ಷಿಯನ್ನು ಕಾಯ್ದುಕೊಂಡು ಜೀವನ ನಡೆಸಿದವರು. ನಮ್ಮ ದೇಶಕ್ಕೆ ದೊಡ್ಡ ಚರಿತ್ರೆ ಇದ್ದು, ಚಾರಿತ್ರ್ಯ ಬೆಳೆಸಬೇಕಿದೆ. ಒಳ್ಳೆಯದನ್ನು ಪ್ರೋತ್ಸಾಹಿಸಬೇಕು ಎಂದರು.
ಸಾವಿನ ನಂತರವೂ ಬದುಕಿದ ಸಾಧಕ:
ಪೂಜ್ಯ ಬಸವಣ್ಣ, ಬುದ್ಧರ ಕಾಲದಲ್ಲಿ ನೈಸರ್ಗಿಕ ಕಾನೂನಿತ್ತು. ನೈಸರ್ಗಿಕ ಕಾನೂನು ಎಲ್ಲರನ್ನು ಪ್ರೀತಿಸುವುದನ್ನು ಹಾಗೂ ಗೌರವಿಸುವುದನ್ನು, ಸತ್ಯ, ಧರ್ಮಗಳ ಹಾದಿಯಲ್ಲಿ ನಡೆಯುವುದನ್ನು ಬೋಧಿಸುತ್ತದೆ. ಮಾನವ ನಿರ್ಮಿತ ಕಾನೂನು ಇತರರಲ್ಲಿ ದ್ವೇಷ, ಅಸತ್ಯ, ಅಧರ್ಮ ತೋರಿದರೆ ಶಿಕ್ಷೆ ಎಂದು ತಿಳಿಸುತ್ತದೆ.
ನೈಸರ್ಗಿಕ ಕಾನೂನು ಪುರಸ್ಕಾರಕ್ಕೆ ಪೂರಕವಾಗಿದ್ದರೆ, ಮಾನವ ಕಾನೂನು ಶಿಕ್ಷೆಗೆ ಪೂರಕವಾಗಿದೆ. ಆದ್ದರಿಂದ ನಮ್ಮಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸಿಕೊಂಡಾಗ ಇವೆರಡೂ ಕಾನೂನಿನಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. ಆಗ ಮಾತ್ರ ಜೀವನ ನಡೆಸಲು ಉತ್ತಮ ವಾತಾವರಣವನ್ನು ಸೃಜಿಸಿದಂತಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.












Click it and Unblock the Notifications