Renukaswamy Phone: ಸಿಗದ ರೇಣುಕಾಸ್ವಾಮಿ ಫೋನ್: ಹೊಸ ಸಿಮ್ ಕಾರ್ಡ್ನಿಂದ ಪೊಲೀಸರ ಪರಿಶೀಲನೆ
ಬೆಂಗಳೂರು ಜೂನ್ 25: ದರ್ಶನ್ ಹಾಗೂ ಅವರ ಗ್ಯಾಂಗ್ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಮೊಬೈಲ್ ಫೋನ್ ಇನ್ನೂ ಕೂಡ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಹೊಸ ಸಿಮ್ ಕಾರ್ಡ್ ತೆಗೆದುಕೊಂಡು ಪರಿಶೀಲನೆಗೆ ಮುಂದಾಗಿದ್ದಾರೆ.
ಕಾಮಾಕ್ಷಿಪಾಳ್ಯದ ಮೋರಿಯಲ್ಲಿ ರೇಣುಕಾಸ್ವಾಮಿ ಅವರ ಫೋನ್ನನ್ನು ಎಸೆಯಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿಕೊಂಡಿದ್ದರು. ಆರೋಪಿಗಳ ಹೇಳಿಕೆಯನ್ನು ಆಧರಿಸಿ ಮೋರಿಯಲ್ಲಿ ರೇಣುಕಾಸ್ವಾಮಿ ಫೋನ್ ಪತ್ತೆ ಕಾರ್ಯ ಹಲವಾರು ಬಾರಿ ನಡೆದಿದೆ. ಆದರೆ ಈವರೆಗೂ ಮೊಬೈಲ್ ಮಾತ್ರ ಸಿಕ್ಕಿಲ್ಲ.

ಹೀಗಾಗಿ ಪೊಲೀಸರು ರೇಣುಕಾಸ್ವಾಮಿ ಅವರ ನಂಬರ್ನ ಹೊಸ ಸಿಮ್ ಕಾರ್ಡ್ ಪಡೆದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಕೊಲೆಯಾದ ದಿನ ರೇಣುಕಾಸ್ವಾಮಿ ಅವರಿಗೆ ಯಾರಿಂದ ಮತ್ತು ಎಲ್ಲಿಂದ ಕರೆ ಬಂತಿತ್ತು? ರೇಣುಕಾಸ್ವಾಮಿ ಅವರು ಯಾರ್ಯಾರಿಗೆ ಕರೆ ಮಾಡಿದ್ದರು? ಯಾರಿಗೆ ಕಾಮೆಂಟ್ ಮಾಡಿದ್ದರು? ಏನೆಂದು ಕಾಮೆಂಟ್ ಮಾಡಿದ್ದರು? ಏನೆಂದು ಮಾತನಾಡಿದ್ದರು? ಇಂತೆಲ್ಲಾ ವಿಚಾರಗಳು ತಿಳಿದು ಬರಲಿದೆ. ಇವು ಕೊಲೆ ಪ್ರಕರಣಕ್ಕೆ ಇರುವ ಬಲವಾದ ಸಾಕ್ಷಿಗಳಾಗಿವೆ.
ಒಂದು ವೇಳೆ ರೇಣುಕಾಸ್ವಾಮಿ ಅವರಿಗೆ ದರ್ಶನ್ ಹಾಗೂ ಅವರ ಗ್ಯಾಂಗ್ನವರಿಂದ ಕರೆ ಬಂದಿದ್ದೇ ಆದರೆ ಹಾಗೂ ಮಾತುಕತೆಯಲ್ಲಿ ಬೆದರಿಕೆ ಹಾಗೂ ಅಪಹರಣದ ಸಂಚು ಕಂಡು ಬಂದಿದ್ದೇ ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಹಾಗೂ ಅವರ ಪ್ರೇಯಸಿ ಅವರದ್ದು ಸಿಂಹ ಪಾಲಿರುವುದು ಖಚಿತವಾಗಲಿದೆ.

ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಲವಾದ ಸಾಕ್ಷಿಗಳ ಜಾಡು ಹಿಡಿದು ಹೊರಟಿದ್ದಾರೆ. ಈಗಾಗಲೇ ದರ್ಶನ್ ಹಾಗೂ ಅವರ ಗ್ಯಾಂಗ್ನ ಎಲ್ಲಾ ಫೋನ್ಗಳನ್ನು ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ರೇಣುಕಾಸ್ವಾಮಿ ಅವರ ಫೋನ್ ಪತ್ತೆಯಾಗದ ಕಾರಣ ಅಂತಿಮ ತೀರ್ಮಾಣಕ್ಕೆ ಬರುವುದು ಕಷ್ಟವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಅವರ ಪ್ರೇಯಸಿ ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಪೊಲೀಸರು ಸಂಗ್ರಹಿಸುತ್ತಿರುವ ಸಾಕ್ಷ್ಯಾಧಾರಗಳು ನಿಜವೆಂದು ಸಾಬೀತಾದರೆ ದಾಸ ಹಾಗೂ ದಾಸಿ ಗ್ಯಾಂಗ್ಗೆ ಸೆರೆಮನೆ ವಾಸ ಪಕ್ಕಾ ಎನ್ನಲಾಗುತ್ತಿದೆ.
ಜೈಲಿನಲ್ಲೂ ದರ್ಶನ್ ಫೇಮಸ್
ಬ್ಯಾರಕ್ ನಂಬರ್ ಮೂರರಲ್ಲಿ ಭದ್ರತಾ ಕೊಠಡಿಯಲ್ಲಿರೋ ದರ್ಶನ್ಗೆ ಜೈಲಿನ ಇನ್ಸ್ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಯಾಕೆಂದರೆ ಜೈಲಿನಲ್ಲೂ ದರ್ಶನ್ ಅಭಿಮಾನಿಗಳಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರುವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ ಮೂರರ ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ಹಾಗೂ ಮಗನ ಜೊತೆಗೆ ಹದಿನೈದು ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ. ದರ್ಶನ್ ಯಾರು ಸಂಪರ್ಕಕ್ಕೂ ಸಿಗದಂತೆ ಜೈಲಾಧಿಕಾರಿಗಳು ಭದ್ರತೆ ವಹಿಸಿದ್ದಾರೆ. ಊಟ, ತಿಂಡಿ ಅಂತಾ ಯಾವುದೇ ಸಮಯದಲ್ಲೂ ಜೈಲಿನ ಕೈದಿಗಳು ದರ್ಶನ್ ಬ್ಯಾರಕ್ ಬಳಿ ಬರದಂತೆ ತಡ ನೀಡಲಾಗಿದೆ.












Click it and Unblock the Notifications