Darshan: ದರ್ಶನ್ ಜೈಲು ಸೇರಲು ವಿಗ್ ಕಾರಣ: ಹೇರ್ ಸ್ಟೈಲ್ ಬದಲಾಯಿಸಿದ್ದರಿಂದಲೇ ಈ ಪರಿಸ್ಥಿತಿ!
ಬೆಂಗಳೂರು, ಜುಲೈ 29: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಕೆಲವರು ದರ್ಶನ್ರ ಜಾತಕ ವಿಶ್ಲೇಷಣೆ ಮಾಡಿದ್ದು, ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ, ದರ್ಶನ್ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಕೂದಲ ವಿನ್ಯಾಸ ಬದಲಿಸಿದ್ದು ಹಾಗೂ ಸಿನಿಮಾ ಟೈಟಲ್ ಕಾರಣ ಎಂದು ನೇರವಾಗಿ ಹೇಳಿದ್ದಾರೆ.
ಟಿವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವುದೋ ಒಂದು ಕಾರ್ಯಕ್ರಮದಲ್ಲಿ ನೋಡಿದಾಗ ದರ್ಶನ್ ತಲೆಗೆ ಕೂದಲು ಮಾಡಿಸಿಕೊಂಡಿದ್ದರು. ಕೆಲವೊಂದೆಲ್ಲಾ ಸೂಚನೆಗಳು ಎನ್ನುತ್ತೇವೆ. ಶಕುನಗಳು ಎನ್ನುತ್ತೇವೆ. ನಮ್ಮ ತಂತ್ರಶಾಸ್ತ್ರದಲ್ಲಿ ಸಾಮಾನ್ಯವಾಗಿ ನೋಡುವುದು ಮಾನವ ಶರೀರದೊಂದಿಗೆ ಶಕುನಗಳನ್ನು ನೋಡುತ್ತೇವೆ. ಆ ಶಕುನಗಳನ್ನು ನೋಡಿದಾಗ ತಾಳೆ ಮಾಡಿದಾಗ, ಕೈ ಮುರಿದಿತ್ತು, ಮತ್ತೆ ಕೂದಲು ಮಾಡಿಸಿಕೊಂಡಿದ್ದಾರೆ. ಇದನೆಲ್ಲಾ ನೋಡಿದಾಗ ಇವರಿಗೆ ಯಾವುದೋ ಕಂಟಕ ಇದೆ ಅಂತಾ ಗೊತ್ತಾಯಿತು. ಆದರೆ ಅವರಿಗೆ ಹೇಳುವುದು ಹೇಗೆ ಅಂತಾ ಗೊತ್ತಾಗಲಿಲ್ಲ ಎಂದರು.

ಸಂಪರ್ಕದಲ್ಲಿದ್ದಾಗ ಹೇಳಬಹುದು, ಆದರೆ ಮೇಲೆ ಬಿದ್ದು ಹೇಳಿದರೆ ತಪ್ಪಾಗುತ್ತದೆ. ಅದು ನನ್ನ ಪ್ರವೃತ್ತಿನೂ ಅಲ್ಲ. ನಮ್ಮ ಗುರುಕುಲದ ಪದ್ಧತಿನೂ ಇಲ್ಲದೇ ಇದ್ದಾಗ ನಾವು ಸುಮ್ಮನಾಗಬೇಕಾಯಿತು. ಪ್ರತಿಯೊಂದು ಹೆಜ್ಜೆಯಲ್ಲೂ ಅವರಿಗೆ ತೊಂದರೆ ಇದೆ ಎನ್ನುವುದು ಗೊತ್ತಾಗುತ್ತಿತ್ತು. ಜನಪ್ರಿಯತೆ ಇರುವವರಿಗೆ ಶನಿ ಪ್ರಭಾವ ತೋರಿಸುವುದು ಎರಡು ರೀತಿಯಲ್ಲಿ, ಒಂದು ತೇಜೋ ವಧೆ ಅಂದರೆ ಹೆಸರು ಹಾಳು ಮಾಡುವುದು. ಇನ್ನೊಂದು ಮೂಳೆ ಮುರಿಯುವುದು.
ಮನುಷ್ಯನ ದೇಹದಲ್ಲಿ ಕೂದಲು ಶನಿಗೆ ಅಧಿಪತ್ಯ ಎಂದು ತೋರಿಸುತ್ತದೆ. ಕೆಲವರು ಜಾತಕ ತೋರಿಸಲು ಬಂದಾಗ ಕೆಲವರ ಹೇರ್ಸ್ಟೈಲ್ ಬದಲಾವಣೆ ಮಾಡಿಸುತ್ತೇವೆ. ದರ್ಶನ್ ಆ ಹೇರ್ಸ್ಟೈಲ್ ಮಾಡಿಸಿಕೊಂಡಿದ್ದು ಕೂಡ ಇಂದಿನ ಪರಿಸ್ಥಿತಿಗೆ ಕಾರಣ ಎಂದು ನಾನು ಘಂಟಾಗೋಷವಾಗಿ ಹೇಳುತ್ತೇನೆ. ಮೊದಲ ಹೇರ್ಸ್ಟೈಲ್ ಇದ್ದಿದ್ದರೆ ಖಂಡಿತಾ ಈ ಕೇಸ್ ಆಗುತ್ತಿರಲಿಲ್ಲ.

ಶನಿ ಮೈಂಡ್ ಅನ್ನು ಬ್ಲಾಕ್ ಮಾಡುತ್ತಾನೆ. ಒಬ್ಬ ಸಾಮಾನ್ಯ ವ್ಯಕ್ತಿಯೇ ಯೋಚನೆ ಇಲ್ಲದೇ ಏನೂ ಮಾಡುವುದಿಲ್ಲ ಅಂದಾಗ, ಇಷ್ಟು ಒಂದು ಒಳ್ಳೆಯ ವ್ಯಕ್ತಿ. ಒಂದು ಹೆಸರಾಂತ ವ್ಯಕ್ತಿಗೆ ಇಂತಹ ದುಡುಕು ಸ್ವಭಾವ ಯಾಕೆ ಬಂತು ಅಂತಾ ಯೋಚಿಸಬೇಕಲ್ಲವೇ?. ಇದಕ್ಕೆ ಶನಿ ಕಾರಣ. ನಾನು ವಾಸ್ತವ ಬಿಟ್ಟು ಬೇರೆ ಮಾತನಾಡುವುದಿಲ್ಲ. ಕೆಲವೊಂದು ಸಿನಿಮಾ ಟೈಟಲ್ ಕೂಡ ಇಂತಹ ದುರಂತವನ್ನು ಮಾಡಿಸುತ್ತದೆ. ಪುಟ್ಟಣ್ಣ ಕಣಗಾಲ್ ಮಸಣದ ಹೂವು ಸಿನಿಮಾ ಮಾಡಿ ಅವರ ಅಂತ್ಯವೇ ಆಯ್ತು ಎಂದು ಹೇಳಿದರು.












Click it and Unblock the Notifications