ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!
Recommended Video

ಬೆಂಗಳೂರು, ಮೇ 31 : ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್ನ ಮುನಿರತ್ನ ಅವರು ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ, ಮತ್ತೊಮ್ಮೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಮೇ 11ರಂದು ಮುಂದೂಡಲಾಗಿತ್ತು. ಅಂತಿಮವಾಗಿ ಮೇ 28ರಂದು ಚುನಾವಣೆ ನಡೆದು ಇಂದು ಫಲಿತಾಂಶ ಪ್ರಕಟವಾಗಿದೆ.
ಮೇ 6ರಂದು ಆರ್.ಆರ್.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ 95 ಲಕ್ಷ ರೂ. ಹಣ ಟ್ರಕ್ನಲ್ಲಿ ಪತ್ತೆಯಾಗಿತ್ತು. ಜಾಲಹಳ್ಳಿ ಸಮೀಪದ ಎಸ್ಎಲ್ವಿ ಅಪಾರ್ಟ್ಮೆಂಟ್ನಲ್ಲಿ 9,746 ವೋಟರ್ ಐಡಿಗಳು ಪತ್ತೆಯಾಗಿದ್ದವು ಇದರಿಂದಾಗಿ ಚುನಾವಣೆಯನ್ನು ಆಯೋಗ ಮುಂದೂಡಿತ್ತು.
ಕಾಂಗ್ರೆಸ್ನಿಂದ ಮುನಿರತ್ನ, ಬಿಜೆಪಿಯಿಂದ ಮುನಿರಾಜು ಗೌಡ, ಜೆಡಿಎಸ್ನಿಂದ ಜಿ.ಎಚ್.ರಾಮಚಂದ್ರ, ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಸೇರಿ 14 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನಡೆ ಆಗಿದ್ದು, ಮುನಿರತ್ನ ಗೆಲುವು ಸಾಧಿಸಿದ್ದಾರೆ.

ಸ್ಥಳೀಯರ ಕಡೆಗಣನೆ
ರಾಜರಾಜೇಶ್ವರಿ ನಗರದ ಟಿಕೆಟ್ ಹಂಚಿಕೆ ಮಾಡುವಾಗ ಬಿಜೆಪಿ ಸ್ಥಳೀಯರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ನ ಮುನಿರತ್ನ ಗೆಲುವು ಸಾಧಿಸಿದ್ದಾರೆ.
'ಗ್ರಾಮ ಪಂಚಾಯಿತಿ ಚುನಾವಣೆಯಿಂದಲೂ ನಾನು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ ಯಾರನ್ನೋ ಓಲೈಕೆ ಮಾಡಲು ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಮುನಿರಾಜು ಗೌಡ ಅವರು ನನ್ನ ವಿರುದ್ಧ ಷಡ್ಯಂತ್ರ ಮಾಡಿ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದಾರೆ' ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಎಚ್.ರಾಮಚಂದ್ರ ಆರೋಪಿಸಿದ್ದರು. ಅವರು ಬಳಿಕ ಜೆಡಿಎಸ್ ಸೇರಿ, ಚುನಾವಣೆಗೆ ಸ್ಪರ್ಧಿಸಿದ್ದರು.

ತಡವಾಗಿ ಅಭ್ಯರ್ಥಿ ಘೋಷಣೆ
ರಾಜರಾಜೇಶ್ವರಿ ನಗರದ ಕ್ಷೇತ್ರದ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿತ್ತು. ಆರ್.ಅಶೋಕ್ ಅವರ ಕಟ್ಟಾ ಬೆಂಬಲಿಗರಾದ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರಪ್ಪ ಅವರು ಆಕಾಂಕ್ಷಿಯಾಗಿದ್ದರು. ತುಳಸಿ ಮುನಿರಾಜು ಗೌಡ, ಶಿಲ್ಪಾ ಗಣೇಶ್ ಹೆಸರು ಕೇಳಿಬಂದಿತ್ತು.
ಅಂತಿಮವಾಗಿ ಮುನಿರಾಜು ಗೌಡ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಪಿ.ಎಂ.ಮುನಿರಾಜು ಗೌಡ ಅವರು ಬಿಜೆಪಿಯ ರಾಜ್ಯ ಕಾರ್ಯದರ್ಶಿ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ ಅವರ ಆಪ್ತರು.

ಮುನಿರತ್ನ ಅವರ ಕೆಲಸ
2013ರ ಚುನಾವಣೆಯಲ್ಲಿಯೂ ಮುನಿರತ್ನ ಅವರು 71,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಸಿದ್ದರಾಮಯ್ಯ ಅವರ ಆಪ್ತರಾದ ಅವರು ಕ್ಷೇತ್ರಕ್ಕೆ ಅನುದಾನ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದಾಗಿ ಈ ಬಾರಿ ಚುನಾವಣೆಯಲ್ಲಿಯೂ ಅವರು ಗೆದ್ದಿದ್ದಾರೆ.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಚುನಾವಣೆಯ ಹೊಣೆ ಹೊತ್ತುಕೊಂಡಿದ್ದರು. ಅವರು ರೂಪಿಸಿದ ತಂತ್ರಗಳು ಸಹ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿವೆ.

ರಾಜ್ಯ ಸರ್ಕಾರದ ಪ್ರಭಾವ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುತ್ತಿರುವ ಚುನಾವಣೆ ಇದಾಗಿತ್ತು. ಆದ್ದರಿಂದ, ಸರ್ಕಾರದ ಪ್ರಭಾವವೂ ಚುನಾವಣೆ ಮೇಲೆ ಉಂಟಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಾರೆ.












Click it and Unblock the Notifications