ಬ್ಯಾಂಕ್ ಗಳಿಂದ ಗ್ರಾಹಕರ ಸುಲಿಗೆ ನಿಲ್ಲಿಸಲು ಆನ್ ಲೈನ್ ಅಭಿಯಾನ
ಬ್ಯಾಂಕ್ ಗಳಲ್ಲಿ ಹಣ ಜಮೆ ಮಾಡುವುದಕ್ಕೆ, ತೆಗೆದುಕೊಳ್ಳುವುದಕ್ಕೆ ಶುಲ್ಕ ವಿಧಿಸುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಆನ್ ಲೈನ್ ಅಭಿಯಾನ ಆರಂಭಿಸಲಾಗಿದೆ
ಬೆಂಗಳೂರು, ಮೇ 22 : ಭಾರತದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳ ಬಗ್ಗೆ ವಿಪರೀತ ನಂಬಿಕೆ, ವಿಶ್ವಾಸ ಎಲ್ಲವೂ ಇದ್ದ ಕಾಲವೊಂದಿತ್ತು. ಆದರೆ ಈಚೆಗೆ ಅಂದರೆ ಅಪನಗದೀಕರಣದ ವ್ಯಾಯಾಮ ಶುರುವಾದ ನಂತರ ಎಲ್ಲವೂ ಬರಿದಾಗಿ ಅಪನಂಬಿಕೆ ಎದ್ದು ಕಾಣುತ್ತಿದೆ.
ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತೇವೆ ಎಂಬ ಆಶ್ವಾಸನೆ ನೀಡಿ, ಎಲ್ಲೆಡೆ ಡೆಬಿಟ್-ಕ್ರೆಡಿಟ್ ಕಾರ್ಡ್ ಬಳಸಿ ಅಂದರು. ಇಂಥ ಮಾತನ್ನೇ ನಂಬಿ, ನೆಲಮಂಗಲದ ವಿಠ್ಠಲ ಎಂಬುವವರು ಪೆಟ್ರೋಲ್ ಬಂಕ್ ನಿಂದ ಹಿಡಿದು, ತಮ್ಮದೇ ಕೆಲಸಕ್ಕೆ ಬರುವವರಿಗೆ ಸಹ ಡೆಬಿಟ್ ಕಾರ್ಡ್ ನಿಂದ ಹಣ ಪಾವತಿಸಿದ್ದಾರೆ. ನೆಟ್ ಟ್ರಾನ್ಸ್ ಫರ್ ಮಾಡಿದ್ದಾರೆ.[ರಾನ್ಸಮ್ವೇರ್ ಭೀತಿಗೆ ಎಟಿಎಂ ವ್ಯವಸ್ಥೆಯಲ್ಲಿ ವ್ಯತ್ಯಯ]

ತಿಂಗಳ ಮಧ್ಯದಲ್ಲಿ ಅಕೌಂಟ್ ಮಾಹಿತಿ ನೋಡೋಣ ಅನ್ನಿಸಿ ಪರಿಶೀಲಿಸಿದರೆ, ಮಧ್ಯೆ ಮಧ್ಯೆ ಹತ್ತು-ಹದಿನೈದು-ಇಪ್ಪತ್ತು ರುಪಾಯಿಯನ್ನು ಬ್ಯಾಂಕ್ ಖಾತೆಯಿಂದ ಕಟಾಯಿಸಲಾಗಿದೆ. ಹೌಹಾರಿ ಬ್ಯಾಂಕ್ ಗೆ ವಿಚಾರಿಸಲು ಹೋದರೆ, ಪ್ಯಾದೆ ನಗೆಯೊಂದನ್ನು ಬಿಸಾಡಿದ ಬ್ಯಾಂಕ್ ಮ್ಯಾನೇಜರ್, ಇದ್ಯಾವಾಗಿನಿಂದಲೋ ಜಾರಿಯಲ್ಲಿದೆ. ನಿಮಗೆ ಗೊತ್ತಿಲ್ಲವೆ ಎಂದು ಮಾತು ಮುಗಿಸಿದ್ದಾರೆ.
ಇನ್ನು ತಿಂಗಳಿಗೆ ನಾಲ್ಕೇ ಬಾರಿ ನಗದು ಜಮೆ-ತೆಗೆದುಕೊಳ್ಳುವ ವ್ಯವಹಾರ ಮಾಡಬಹುದು. ಆ ಮೇಲೆ ಇಂತಿಷ್ಟು ಶುಲ್ಕ ಬೀಳುತ್ತದೆ. ಎಟಿಎಂನಲ್ಲಿ ಇಂತಿಷ್ಟೇ ಬಾರಿ ಹಣ ತೆಗೆಯಬಹುದು. ಆ ಮೇಲೆ ಇಂತಿಷ್ಟು ಶುಲ್ಕ ಪಾವತಿಸಿ. ಇವೆಲ್ಲ ತುಂಬ ಮಾಮೂಲು ಎಂಬಂತೆ ಬ್ಯಾಂಕ್ ಗಳು ಗ್ರಾಹಕರ ಜೇಬಿಗೆ ದೊಡ್ಡ ಸೈಜಿನ ಕತ್ತರಿಯನ್ನೇ ಇಟ್ಟಿವೆ.[ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಇಳಿಕೆ]

ದೇಶದ ಎಲ್ಲರಿಗೂ ಬ್ಯಾಂಕ್ ಖಾತೆ ಇರಲಿ ಎಂದು ಜನ್ ಧನ್ ಯೋಜನೆ ಜಾರಿಗೆ ತಂದಿದ್ದು ಯಾವ ಪುರುಷಾರ್ಥಕ್ಕೆ? ಉಳಿತಾಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಾನೆ? ತರಕಾರಿ ಮಾರುವವರು, ದಿನಗೂಲಿ ನೌಕರರು, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುವ ಬಡಾವಣೆಗಳಲ್ಲಿ ಇರುವವರು...ಒಟ್ಟಾರೆ ತಮ್ಮ ಬಳಿ ಇರುವ ಬದಲು ಬ್ಯಾಂಕ್ ನಲ್ಲಿ ಹಣವಿರಲಿ ಎಂದುಕೊಳ್ಳುವವರು ಹಣ ಹಾಕುವುದು, ತೆಗೆದುಕೊಳ್ಳೋದು ಹೇಗೆ ಸಾಧ್ಯ?
ಇಂಥ ಶುಲ್ಕದ ಮಾಹಿತಿ ಬ್ಯಾಂಕ್ ಗಳಿಂದ ಎಲ್ಲ ಗ್ರಾಹಕರನ್ನೂ ತಲುಪಿದೆಯಾ? ಅದರಲ್ಲೂ ಆಯಾ ರಾಜ್ಯದಲ್ಲಿ ಜನರು ಆಡುವ ಭಾಷೆಯಲ್ಲಿ ಮಾಹಿತಿ ರವಾನೆ ಆಗಿದೆಯಾ? ಅಂದರೆ ಉತ್ತರ 'ಇಲ್ಲ' ಅಂತಲೇ ಬರುತ್ತದೆ. ಜನರು ಹಣವನ್ನು ಬ್ಯಾಂಕ್ ಗೆ ಹಾಕಬಾರದು ಎಂಬುದೇ ಈ ನಿಯಮಗಳ ಉದ್ದೇಶವಾ?

ಇನ್ನು ಡಿಜಿಟಲ್ ಪೇಮಂಟ್ ಬಗ್ಗೆ ಪುಗಸಟ್ಟೆ ಭಾಷಣ ಕೊಡ್ತಾರಲ್ಲ, ಎಷ್ಟು ಕಡೆ ಸ್ವೈಪಿಂಗ್ ಮಷಿನ್ ಗಳು ಬಂದಿವೆ? ಎಷ್ಟು ವ್ಯಾಪಾರಸ್ಥರು ತಮ್ಮ ದೈನಂದಿನ ವ್ಯವಹಾರದಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಗಳನ್ನೋ ಅಥವಾ ಬೇರೆ ವಿಧದ ಡಿಜಿಟಲ್ ಪಾವತಿಯನ್ನು ಪಡೆಯುತ್ತಾರೆ?
ಪ್ರವಾಸಿ ಸ್ಥಳಗಳಲ್ಲಿ ಇರುವ ಹೋಟೆಲ್ ಗಳು, ಮದುವೆ ಛತ್ರಗಳು, ದಿನಸಿ ಮಳಿಗೆಗಳು..ಉಹುಂ, ಇಂಥ ಹಲವರು ನಗದು ಕೊಡಿ ಎಂದು ಮುಲಾಜಿಲ್ಲದೆ ಹೇಳುತ್ತಾರೆ. ಬ್ಯಾಂಕ್ ಗಳ ಇಂಥ ನಿಯಮಗಳಿಂದ ರೋಸತ್ತ ಜನರು, ಬ್ಯಾಂಕ್ ವ್ಯವಹಾರಗಳನ್ನೇ ಮಾಡೋದಿಲ್ಲ ಎಂಬ ಸಿಟ್ಟು ಕೂಡ ವ್ಯಕ್ತಪಡಿಸಿದ್ದರು.[ಉಳಿತಾಯ ಖಾತೆಯಿಂದ ವಿತ್ ಡ್ರಾ: ರಿಸರ್ವ್ ಬ್ಯಾಂಕ್ ಹೊಸ ನಿಯಮ]

ಆದರೆ, ಏನು ಪ್ರಯೋಜನ ಎಟಿಎಂನಲ್ಲಿ ಹಣವಿಲ್ಲ, ಬ್ಯಾಂಕ್ ಗಳಲ್ಲಿ ಹಣವಿಲ್ಲ. ತೀರಾ ಇತ್ತೀಚೆಗೆ ಯಾವಾಗ ಏನೋ ಎಂಬ ಗಾಬರಿಯಲ್ಲಿ ಹಲವೆಡೆ ಕಾರ್ಡ್ ಪೇಮಂಟ್ ತಗೊಳ್ತಿಲ್ಲ. ಇದರ ಜತೆಗೆ ಬ್ಯಾಂಕ್ ನಿಂದ ಇಷ್ಟೇ ವ್ಯವಹಾರ ಮಾಡಬೇಕೆಂಬ ನಿಯಮ. ಅದರ ಮೇಲೆ ಶುಲ್ಕವೆಂಬ ಬರೆ... ನಾವು ಬದುಕೋದು ಹೇಗೆ ಸ್ವಾಮಿ?
ಗ್ರಾಹಕರನ್ನು ದೋಚುವುದನ್ನು ನಿಲ್ಲಿಸಿ ಎಂದು ಸುಚೇತಾ ದಲಾಲ್ ಎಂಬುವವರು ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ. ಹೌದು, ಬ್ಯಾಂಕ್ ಗಳಿಂದ ನಮಗೂ ತೊಂದರೆ ಆಗಿದೆ ಎಂದು ನೀವು ಹೇಳಿಕೊಳ್ಳಬೇಕು ಅನ್ನೋದಾದರೆ ಈ ಅರ್ಜಿಗೆ ಒಪ್ಪಿಗೆ ಸೂಚಿಸಿ
{promotion-urls}











Click it and Unblock the Notifications