'ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಐಟಿ ಅಧಿಕಾರಿಗಳ ಬಳಿಯೇ ಹೇಳಿದ್ದರು'
ಬೆಂಗಳೂರು, ಅಕ್ಟೋಬರ್ 12: ಮಾಜಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಆದಾಯ ತೆರಿಗೆಯವರೇ ಕಾರಣ ಎಂದು ಆರೋಪಿಸಿರುವ ಅವರ ಕುಟುಂಬದವರು ಐಟಿ ಇಲಾಖೆ ವಿರುದ್ಧ ದೂರು ನೀಡಿದ್ದಾರೆ.
ರಮೇಶ್ ಅವರ ಸಹೋದರಿ ಲಕ್ಷ್ಮೀದೇವಿ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆದಾಯ ತೆರಿಗೆ ಇಲಾಖೆಯವರ ಬಳಿಯೇ ಹೇಳಿದ್ದರು ಎಂಬುದಾಗಿ ರಮೇಶ್ ಪತ್ನಿ ಸೌಮ್ಯಾ ತಿಳಿಸಿದ್ದಾರೆ. ರಮೇಶ್ ಅವರ ಆತ್ಮಹತ್ಯೆಯ ಸುದ್ದಿ ಕೇಳಿ ಅವರ ಸ್ವಂತ ಊರಾದ ರಾಮನಗರದ ಮೆಳೇಹಳ್ಳಿ ಗ್ರಾಮದಲ್ಲಿನ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮಗನ ಸಾವಿನ ಸುದ್ದಿ ತಿಳಿದು ತಂದೆ ಅಸ್ವಸ್ಥರಾಗಿದ್ದಾರೆ.
ಪರಮೇಶ್ವರ್ ಅವರ ಮನೆಯಲ್ಲಿ ಶೋಧ ನಡೆಸಿದ ಬಳಿಕ ರಮೇಶ್ ನಿವಾಸದಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೆ ಮನೆಯಲ್ಲಿ ಯಾವುದೇ ದಾಖಲೆ ಸಿಕ್ಕಿರಲಿಲ್ಲ. ಪರಮೇಶ್ವರ್ ಅವರ ವ್ಯವಹಾರಗಳ ಬಗ್ಗೆ ರಮೇಶ್ಗೆ ಮಾಹಿತಿ ಇದ್ದಿದ್ದರಿಂದ ಅವರನ್ನು ವಿಚಾರಣೆ ನಡೆಸಲಾಗಿತ್ತು ಎನ್ನಲಾಗಿದೆ. ಆದರೆ ಐಟಿ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ದಾಳಿಯಿಂದ ಮರ್ಯಾದೆ ಹೋಗುತ್ತದೆ
ಬೆಳಿಗ್ಗೆ ಅವರೊಂದಿಗೆ ಮಾತನಾಡಿದಾಗ ಐಟಿ ದಾಳಿಯಿಂದ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಹೇಳಿಕೊಂಡಿದ್ದರು. ಆಗ ನಾವು ಈ ಕೆಲಸ ಬಿಟ್ಟುಬಿಡು. ನಿನಗೆ ಬೇರೆ ಕೆಲಸ ಇದೆ ಎಂದಿದ್ದೆವು. ಬಳಿಕ ಸಾಹೇಬರ ಮನೆಗೆ ಹೋಗಿಬರುವುದಾಗಿ ತಿಳಿಸಿ ಬೆಳಿಗ್ಗೆ 9 ಗಂಟೆಗೆ ಹೊರಟರು. ಅವರು ಹೋದ ಐದು ನಿಮಿಷದಲ್ಲಿ ಕರೆ ಮಾಡಿದ್ದೆ. ಆಗ ಅವರ ನಂಬರ್ ಸ್ವಿಚ್ಆಫ್ ಬಂದಿತ್ತು ಎಂದು ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ
ಇಷ್ಟೊಂದು ಕಿರುಕುಳ ನೀಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದು ನನ್ನ ಮರ್ಯಾದೆಯ ವಿಚಾರ. ಕರ್ನಾಟಕದಲ್ಲಿನ ಎಲ್ಲ ಶಾಸಕರೂ ನನಗೆ ಗೊತ್ತು. ಮರ್ಯಾದೆಗೋಸ್ಕರ ಬದುಕುತ್ತಿದ್ದೇನೆ ಎಂದು ಅಧಿಕಾರಿಗಳ ಮುಂದೆ ಅವರು ಹೇಳಿದ್ದರು ಎಂದು ಕಣ್ಣೀರಿಡುತ್ತಾ ಹೇಳಿದರು.

ಅಣ್ಣನಿಗೆ ಹೆದರಿಸಿ ಕಿರುಕುಳ
ರಮೇಶ್ ಹೆಚ್ಚು ಆಸ್ತಿ ಸಂಪಾದಿಸಿದ್ದರು ಎಂಬ ಆರೋಪ ಸತ್ಯಕ್ಕೆ ದೂರ ಎಂದು ಅವರ ಸಹೋದರ ಸತೀಶ್ ಹೇಳಿದರು.
ವಾಹಿನಿಗಳೊಂದಿಗೆ ಮಾತನಾಡಿದ ಸತೀಶ್, ರಮೇಶ್ ಮನೆ ಕಟ್ಟಿಸಿದ್ದಾನೆ, ಆಸ್ತಿ ಸಂಪಾದಿಸಿದ್ದಾನೆ ಎನ್ನುವವರು ನೀವೇ ಬಂದು ನೋಡಿ. ತನಿಖೆ ಮಾಡಿಸಿ. ಎಷ್ಟು ಜಮೀನು ಇದೆ ತಿಳಿದುಕೊಳ್ಳಿ. ಆತನ ಬಳಿ ಯಾವ ಹಣವೂ ಇರಲಿಲ್ಲ. ಆರೋಪ ಎಲ್ಲವೂ ಸುಳ್ಳು. ಆತ ನಿಯತ್ತಾಗಿ ಬದುಕಿದವನು. ಐಟಿಯವರಿಂದಲೇ ಈ ಅನಾಹುತ ನಡೆದಿರುವುದು. ಅವರೇ ಬ್ಲ್ಯಾಕ್ಮೇಲ್ ಮಾಡಿ ಹೆದರಿಸಿದ್ದಾರೆ. ಏನೂ ಇಲ್ಲದೆ ಅಮಾಯಕನಿಗೆ ಏಕೆ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ಯಾವ ಕಾರಣವೂ ಇಲ್ಲದೆ ಅಣ್ಣನಿಗೆ ನೋವುಂಟುಮಾಡಿ ಅವನನ್ನು ಬಲಿ ತೆಗೆದುಕೊಂಡಿದ್ದಾರೆ. ಕಾರ್ನಲ್ಲಿಯೇ ಡೆತ್ ನೋಟ್ ಇದೆ ಎಂದರೂ ಪೊಲೀಸಿನವರು ಇದುವರೆಗೂ ತೋರಿಸಿಲ್ಲ. ಇದರಲ್ಲಿ ಬಿಜೆಪಿಯವರ ಕೈವಾಡ ಇದೆ ಎಂದು ಸತೀಶ್ ಅಳುತ್ತಾ ಹೇಳಿದರು.

ಆಪ್ತರಿಗೆ ಕರೆ ಮಾಡಿದ್ದ ರಮೇಶ್
ಆತ್ಮಹತ್ಯೆಗೂ ಮುನ್ನ ತನ್ನ ಆಪ್ತರಿಗೆ ಕರೆ ಮಾಡಿದ್ದ ರಮೇಶ್, 'ನಾನು ಬಡವ. ನನ್ನ ಮನೆಯ ಮೇಲೆ ಐಟಿ ರೇಡ್ ಮಾಡಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಆಗುವುದಿಲ್ಲ. ನಾನು ಯುನಿವರ್ಸಿಟಿ ಕ್ಯಾಂಪಸ್ನಲ್ಲಿದ್ದೇನೆ. ಅವರ ವಿಚಾರಣೆ ಎದುರಿಸಲು ಆಗುವುದಿಲ್ಲ. ನನ್ನಿಂದ ಇರಲು ಆಗುವುದಿಲ್ಲ' ಎಂದು ಹೇಳಿದ್ದರು ಎನ್ನಲಾಗಿದೆ. ಬಳಿಕ ಅವರು ಶವವಾಗಿ ಪತ್ತೆಯಾಗಿದ್ದಾರೆ.












Click it and Unblock the Notifications