ಜಾರಕಿಹೊಳಿ ಸಿಡಿ ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿ ವಿಚಾರಣೆ
ಬೆಂಗಳೂರು, ಮಾರ್ಚ್ 04, ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಜಾಡು ಹಿಡಿದು ಕಬ್ಬನ್ ಪಾರ್ಕ್ ಮಹಿಳಾ ಪೊಲೀಸರು ಆರ್.ಟಿ. ನಗರ ಸುತ್ತ ಮುತ್ತ ಎಲ್ಲಾ ಪಿ.ಜಿಗಳನ್ನು ಜಾಲಾಡಿದರೂ ಆಕೆಯ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಬಗ್ಗೆ ಅಗತ್ಯ ವಿವರ ನೀಡುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದೂರುದಾರ ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ದಿನೇಶ್ ವಿಚಾರಣೆಗೆ ಹಾಜರಾಗುತ್ತಾರಾ? ಪಲ್ಲಂಗ ಆಟದ ಸಂತ್ರಸ್ತ ಯುವತಿ ವಿವರ ಬಹಿರಂಗ ಪಡಿಸುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಕೆಲಸದ ಅಮಿಶೆ ಒಡ್ಡಿ ಲೈಂಗಿಕ ದೌಜನ್ಯ ಎಸಗಿರುವ ಆರೋಪ ಸಂಬಂಧ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು. ದೂರು ಕುರಿತು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕಾದರೆ ಸಂತ್ರಸ್ತ ಯುವತಿಯೇ ದೂರು ನೀಡಬೇಕು. ಮೂರನೇ ವ್ಯಕ್ತಿ ದೂರು ಆಧರಿಸಿ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ಸಾಧ್ಯವಿಲ್ಲ. ಹೀಗಾಗಿ ಖುದ್ದು ಸಂತ್ರಸ್ತ ಯುವತಿ ಘಟನೆ ಬಗ್ಗೆ ವಿವರ ನೀಡಬೇಕು. ಹೀಗಾಗಿ ದೂರುದಾರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತ ಯುವತಿ ಹೇಳಿಕೆ ಈ ಪ್ರಕರಣದಲ್ಲಿ ಬಹು ಮುಖ್ಯವಾಗುತ್ತದೆ.
ಯುವತಿ ಎಲ್ಲಿ ಇದ್ದಾರೆ. ಯುವತಿ ಪರ ಯಾರು ಸಂಪರ್ಕ ಮಾಡಿದ್ದರು. ಯುವತಿ ಪರವಾಗಿ ಸಂಪರ್ಕಿಸಿ ವ್ಯಕ್ತಿಯ ವಿವರಗಳನ್ನಾದರೂ ನೀಡುವಂತೆ ಪೊಲೀಸರು ಕೇಳಲಿದ್ದಾರೆ. ದಿನೇಶ್ ಯುವತಿ ಬಗ್ಗೆ ಮಾಹಿತಿ ನೀಡದಿದ್ದರೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ಪೊಲೀಸರಿಗೆ ಅಸಾಧ್ಯ. ಹೀಗಾಗಿ ದಿನೇಶ್ ಹೇಳಿಕೆ ಆಧರಿಸಿ ಪೊಲೀಸರು ಮುಂದಿನ ಹೆಜ್ಜೆ ಇಡಲಿದ್ದಾರೆ.

ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ವಕೀಲರನ್ನು ಭೇಟಿ ಮಾಡಿ ದಿನೇಶ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಯುವತಿ ಬಗ್ಗೆ ದೂರು ನೀಡಿದ್ದೇನೆ. ಸಂತ್ರಸ್ತ ಯುವತಿ ವಿವರಗಳನ್ನು ಪೊಲೀಸರು ಕೇಳಿದ್ದಾರೆ. ಒಂದು ವೇಳೆ ಗೊತ್ತಿದ್ದೂ ಕೊಡದಿದ್ದರೆ ದೂರುದಾರನಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ವಕೀಲರ ಜತೆ ಚರ್ಚೆ ನಡೆಸಿದ್ದಾರೆ. ಅವರ ಸಲಹೆ ಪಡೆದು ವಿಚಾರಣೆಗೆ ಆಗಮಿಸಲಿದ್ದಾರೆ.

ಯುವತಿ ಆರ್.ಟಿ.ನಗರದ ಪಿಜಿಯಲ್ಲಿದ್ದವಳು ಎಂಬ ಸಂಗತಿ ಸಿಡಿಯಲ್ಲಿ ಬಹಿರಂಗ ಗೊಂಡ ಹಿನ್ನೆಲೆಯಲ್ಲಿ ಆರ್. ಟಿ. ನಗರ ಸುತ್ತಮುತ್ತ ಎಲ್ಲಾ ಪಿಜಿಗಳಲ್ಲಿ ಸಂತ್ರಸ್ತ ಯುವತಿಗಾಗಿ ಕಬ್ಬನ್ ಪಾರ್ಕ್ ಮಹಿಳಾ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಈವರೆಗೂ ಆಕೆಯ ಸುಳಿವು ಸಿಕ್ಕಿಲ್ಲ. ದಿನೇಶ್ ವಿಚಾರಣೆ ಬಳಿಕ ಪೊಲೀಸರು ಯಾವ ಮಾರ್ಗ ಅನುಸರಿಸುತ್ತಿದ್ದಾರೆ ಎಂಬುದು ಕಾದು ನೋಡಬೇಕಿದೆ.












Click it and Unblock the Notifications