ರಮೆಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದ ತನಿಖೆಗೆ ಚೆಕ್ಮೇಟ್ !
ಬೆಂಗಳೂರು, ಮಾರ್ಚ್ 14: ಅಶ್ಲೀಲ ಸಿಡಿ ಬಿಡುಗಡೆ ಮೂಲಕ ನನ್ನ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ನಡೆಸಲಾಗಿದೆ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಕಾನೂನು ಸಮರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದು ಹೆಜ್ಜೆ ಮುಂದಿಟ್ಟಿದ್ದರು. ಇದೀಗ ಸಂತ್ರಸ್ತ ಎನ್ನಲಾದ ಯುವತಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಸಮರಕ್ಕೆ ಚೆಕ್ ಮೇಟ್ ನೀಡಿದ್ದಾಳೆ.
ತನಿಖೆ ಹೆಸರಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟರೂ, ಯುವತಿಯೇ ಅಖಾಡಕ್ಕೆ ಇಳಿದು ದೂರು ಕೊಡಲಿದ್ದಾರೆ ಎಂಬ ಪರೋಕ್ಷ ಸಂದೇಶ ಈ ಮೂಲಕ ಜಾರಕಿಹೊಳಿ ಅವರಿಗೆ ರವಾನಿಸಲಾಗಿದೆ. ಒಂದು ವೇಳೆ ಯುವತಿ ಬಂದು ದೂರು ನೀಡಿದರೆ ಮುಂದೆ ಏನಾಗಲಿದೆ. ಕಾನೂನು ಸಂಘರ್ಷ ಯಾವ ರೀತಿ ಆರಂಭವಾಗಲಿದೆ ಎಂಬ ಸಮಗ್ರ ವಿವರ ಇಲ್ಲಿದೆ.

ಜಾರಕಿಹೊಳಿ ಅಬ್ಬರ ಮತ್ತು ಯುವತಿ ಮೌನ
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವ ಕ್ಷಣದಲ್ಲಿ ರಮೇಶ್ ಜಾರಕಿಹೊಳಿ ಯುವತಿ ಜತೆ ಏಕಾಂತವಾಗಿ ಕಳೆದಿರುವ ವಿಡಿಯೋ ಸ್ಪೋಟಗೊಂಡಿತ್ತು. ದಿನೇಶ್ ಕಲ್ಲಹಳ್ಳಿ ಎಂಬಾತ ದೂರು ನೀಡಿದ್ದ. ದೂರು ನೀಡಿದ್ದು ಸಿಡಿ ಸ್ಫೋಟದ ಒಂದು ಭಾಗವಾಗಿತ್ತು ಎಂಬ ಸಂಶಯ ಉಂಟಾಗಿತ್ತು. ಇದರ ನಡುವೆ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರು. ಸಂತ್ರಸ್ತೆ ಎನ್ನಲಾದ ಯುವತಿ ಈವರೆಗೂ ಕಾಣಿಸಿಕೊಂಡಿರಲಿಲ್ಲ. ದಿನೇಶ್ ಕಲ್ಲಹಳ್ಳಿ ಯು ಟರ್ನ್ ಹೊಡೆದು ದೂರನ್ನೇ ವಾಪಸು ಪಡೆದರು. ಎಲ್ಲಾ ಬೆಳವಣಿಗೆ ನೋಡಿ ಇದೊಂದು ರಾಜಕೀಯ ಷಡ್ಯಂತ್ರ, ನನ್ನ ರಾಜಕೀಯ ಭವಿಷ್ಯ ಮುಗಿಸುವ ಹುನ್ನಾರ ನಡೆದಿದೆ. 2+3+4 ಮಂದಿ ಶಾಮೀಲಾಗಿದ್ದಾರೆ. ಇದೊಂದು ನಕಲಿ ಸಿಡಿ ಎಂದು ರಮೇಶ್ ಜಾರಕಿಹೊಳಿ ಅಬ್ಬರಿಸಿದರು. ಮಹಾನಾಯಕ ಕೈವಾಡವಿದೆ ಎಂದು ಆರೋಪಿಸಿದ್ದರು. ಇಷ್ಟಕ್ಕೆ ನಿಲ್ಲಲಿಲ್ಲ, ವಿಶೇಷ ತನಿಖಾ ತಂಡ ರಚನೆ ಮೂಲಕ ಸಿಡಿ ಸ್ಪೋಟದ ರಹಸ್ಯ ಬಯಲಿಗೆ ಎಳೆಯಲು ಮುಂದಾದರು.

ವಿಶೇಷ ತನಿಖಾ ತಂಡ ಕಾರ್ಯಾಚರಣೆ
ಸಿಡಿ ಹಂಚಿಕೆ, ಸಿಡಿ ಎಡಿಟಿಂಗ್ನಲ್ಲಿ ಶಾಮೀಲಾಗಿದ್ದಾರೆ ಎಂಬುವರ ತಲಾಷೆಗೆ ಎಸ್ಐಟಿ ಮುಂದಾಯಿತು. ಅಶ್ಲೀಲ ದೃಶ್ಯದಲ್ಲಿರುವ ಯುವತಿ ಹಾಗೂ ಇದರಲ್ಲಿ ಶಾಮೀಲಾಗಿರುವ ಪ್ರಮುಖ ವ್ಯಕ್ತಿಗಳ ಶೋಧ ಕಾರ್ಯಾಚರಣೆಗೆ ಎಸ್ಐಟಿ ಮುಂದಾಯಿತು. ವಿಚಾರಣೆಗೆ ಸೀಮಿತಗೊಳಿಸಿದ್ದ ಎಸ್ಐಟಿ ಎಫ್ಐಆರ್ ಇಲ್ಲದೇ ತನಿಖೆ ನಡೆಸಲು ಮುಂದಾಗಿ ಸಿಡಿ ಷಡ್ಯಂತ್ರದ ಮೂಲಕ್ಕೆ ಕೈ ಹಾಕಿತು. ಎಸ್ಐಟಿ ತನಿಖೆಗೆ ಪ್ರಕರಣ ಸಂಬಂಧ ಎಫ್ಐಆರ್ ಬೇಕಿತ್ತು. ರಮೇಶ್ ಜಾರಕಿಹೊಳಿ ಕೈ ಬರಹವುಳ್ಳ ದೂರನ್ನು ತನ್ನ ಆಪ್ತ ಮಾಜಿ ಶಾಸಕ ಮೂಲಕ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಅಲ್ಲಿಗೆ ಜಾರಕಿಹೊಳಿ ಸಾರಿದ್ದ ಸಮರ ಸುಗಮವಾಗಿ ಸಾಗಿತ್ತು. ದೂರು ಆಧರಿಸಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಸಂತ್ರಸ್ತೆ ಎನ್ನಲಾದ ಯುವತಿ ಒಂದು ಸಣ್ಣ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರ ಹಿಂದೆ ಬಹುದೊಡ್ಡ ಬೆಳವಣಿಗೆ ಮುನ್ಸೂಚನೆ ಕಾಣುತ್ತಿದೆ.

ಯುವತಿ ಹೇಳಿಕೆ ಮತ್ತು ಅದರ ಹಿಂದಿನ ಮರ್ಮ ಏನು ?
ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ. ಅದನ್ನು ಮಾಡಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೊಡಿ. ನನ್ನ ತಂದೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಮರ್ಯಾದೆ ಕಳೆದುಕೊಂಡಿದ್ದೇನೆ ಎಂದು ಸಂತ್ರಸ್ತೆ ಎನ್ನಲಾದ ಯುವತಿ ಸಾಮಾಜಿಕ ಜಾಲ ತಾಣದಲ್ಲಿಯೇ ಬಿಡುಗಡೆ ಮಾಡಿದ್ದಾಳೆ. ವಿಡಿಯೋ ಹೇಳಿಕೆ ಹಿಂದೆ ಬಹುದೊಡ್ಡ ಮರ್ಮ ಅಡಗಿದೆ. ಮಾತ್ರವಲ್ಲ ಜಾರಕಿಹೊಳಿ ಆರೋಪ ಮುಕ್ತನಾಗಲು, ಇದೊಂದು ಷಡ್ಯಂತ್ರ ಎಂದು ಸಾಬೀತು ಮಾಡಲು ಇಟ್ಟಿದ್ದ ತನಿಖೆ ಹೆಜ್ಜೆಗಳಿಗೆ ಚೆಕ್ ಮೇಟ್ ನೀಡಿದಂತೆ ಬಾಸವಾಗುತ್ತಿದೆ. ನೀವು ದೂರು ನೀಡಿ ನಮ್ಮ ಬಂಧನದ ವರೆಗೂ ಬಂದರೆ, ನಿನ್ನ ವಿರುದ್ಧ ಕೂಡ ನಾನು ದೂರು ನೀಡುತ್ತೇನೆ. ಅಮೇಲೆ ಕಾನೂನು ಪ್ರಕ್ರಿಯೆ ಏನಾಗಬಹುದು ಆಲೋಚಿಸಿ ಎಂಬ ಪರೋಕ್ಷ ಸಂದೇಶವೂ ಅಡಗಿದೆ ಎಂಬ ಅನುಮಾನವೂ ಮೂಡಿಸುತ್ತಿದೆ. ಇದು ಜಾರಕಿಹೊಳಿ ತನಿಖಾ ಹಾದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನಕಲಿ ಸಿಡಿ ಅಲ್ಲ ನಕಲಿ ಕಥೆ
ಸಂತ್ರಸ್ತ ಯುವತಿ ನೀಡಿರುವ ಹೇಳಿಕೆ ನೋಡುವುದಾದರೆ ಸಿಡಿ ನಕಲಿ ಅಲ್ಲ ಅಸಲಿ ಎಂಬುದು ಅಷ್ಟೇ ವಾಸ್ತವ. ತನ್ನ ಕುಟುಂಬ ಮತ್ತು ಆಪ್ತ ವರ್ಗದಲ್ಲಿ ಕನಿಷ್ಠ ಮರ್ಯಾದೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾರಕಿಹೊಳಿ ಕಟ್ಟಿದ್ದ "ನಕಲಿ ಸಿಡಿ" ಅಸಲಿ ಎಂಬ ಸತ್ಯ ಯುವತಿ ಹೇಳಿಕೆಯಿಂದ ಹೊರ ಬಿದ್ದಿದೆ. ಬಹುಶಃ ಸಿಡಿ ಸತ್ಯ ಎಂಬುದು ಜಾರಕಿಹೊಳಿ ಆಪ್ತರು, ಬೆಂಬಲಿಗರು ಅರಗಿಸಿಕೊಂಡರೂ, ಕೌಟುಂಬ ಅದು ಅರಗಿಸಿಕೊಳ್ಳಲಾಗದ ಸಂಗತಿ. ಹೀಗಾಗಿ ಜಾರಕಿಹೊಳಿ ನಕಲಿ ಸಿಡಿ ಸ್ಟೋರಿ ಯುವತಿಯ ಒಂದು ಹೇಳಿಕೆ ಮೂಲಕ ಸಮಾಧಿ ಮಾಡಿದಂತಾಗಿದೆ. ಇದೀಗ ಸಿಡಿ ಅಸಲಿ ಎಂಬುದೇ ಜಾರಕಿಹೊಳಿ ಪಾಲಿಗೆ ಅರಗಿಸಿಕೊಳ್ಳಲಾರದ ಸಂಗತಿ.
ಎಸ್ಐಟಿ ತನಿಖೆ ಚುರುಕಾಗುತ್ತಿದ್ದಂತೆ ಸಂತ್ರಸ್ತ ಯುವತಿ ಪೊಲೀಸರ ರಕ್ಷಣೆ ಪಡೆದು, ನನಗೆ ಅನ್ಯಾಯ ಆಗಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದರು. ನನ್ನನ್ನು ಲೈಂಗಿಕವಾಗಿ ಬಳಿಸಿಕೊಂಡರು ಎಂದು ದೂರು ನೀಡಿದ್ದೇ ಆದಲ್ಲಿ, ಅದನ್ನು ಪೊಲೀಸರು ದಾಖಲಿಸಲೇಬೇಕು. ನಿರಾಕರಿಸಿದರೆ ಸಂತ್ರಸ್ತೆ ಎನ್ನಲಾದ ಯುವತಿ ಕಾನೂನು ಮೊರೆ ಹೋದರೆ, ತನಿಖೆಗೆ ಆದೇಶಿಸಬಹುದು. ಷಡ್ಯಂತ್ರವಾಗಿದ್ದರೂ, ವಿವಾಹಿತ ಮಹಿಳೆ ಹೊಂದಿದ ಬಳಿಕ ಅಕ್ರಮ ಸಂಬಂಧ, ಮೋಸ, ವಂಚನೆ, ಅಧಿಕಾರ ದುರುಪಯೋಗ ಎಂಬ ನಾನಾ ಆರೋಪಗಳು ಜಾರಕಿಹೊಳಿ ಎದುರಿಸಬೇಕಾಗುತ್ತದೆ. ಇದನ್ನೇ ಪರೋಕ್ಷವಾಗಿ ಯುವತಿ ಸಂದೇಶ ರವಾನಿಸಿದರೇ ?

ಇನ್ನು ಏನೇನು ಮಾತಾಡಿದ್ದಾರೋ
ಇನ್ನು ಸಂತ್ರಸ್ತೆ ಎನ್ನಲಾದ ಯುವತಿ ಜತೆ ಜಾರಕಿಹೊಳಿ ಮಾತನಾಡಿರುವ ಎರಡು ಸಂಗತಿಗಳು ಸಿಡಿ ಸ್ಫೋಟ ವೇಳೆ ರಾಜಕೀಯ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿತ್ತು. ಯಡಿಯೂರಪ್ಪ ಭ್ರಷ್ಟ ಅನ್ನುವುದು, ಸಿದ್ದರಾಮಯ್ಯ ತುಂಬಾ ಒಳ್ಳೆಯವರು ಐದು ಪೈಸೆ ಕರೆಪ್ಷನ್ ಮಾಡಲ್ಲ. ನಾನು ಮುಖ್ಯಮಂತ್ರಿಯಾಗಿಯೇ ತೀರುತ್ತೇನೆ ಎಂಬ ಸಂಗತಿ. ಇದು ರಾಜ್ಯ ನಾಯಕರಿಗೆ ಸಂಬಂಧಿಸಿದ ಹೇಳಿಕೆಗಳು. ಯುವತಿ ಜತೆ ಮಾತನಾಡುವಾಗ ಮೈ ಮರೆತು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಬಗ್ಗೆ ಏನಾದರೂ ಕೆಟ್ಟ ಪದಗಳಿಂದ ಬೈದಿದ್ದೇ ಆದಲ್ಲಿ, ಎರಡನೇ ಹಂತದಲ್ಲಿ ಆ ಅಡಿಯೋ, ವಿಡಿಯೋಗಳು ಏನಾದರೂ ಇದ್ದು ಬಿಡುಗಡೆಯಾದರೆ ಜಾರಕಿಹೊಳಿ ಪರಿಸ್ಥಿತಿ ಏನಾಗಬಹುದು ಎಂದು ಊಹೆ ಮಾಡಲು ಸಾಧ್ಯವಿಲ್ಲ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
Recommended Video

ಇದು ಅಂತ್ಯವಲ್ಲ ಆರಂಭ
ಇನ್ನು ಸಿಡಿ ಸ್ಫೋಟ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಬಿರುಸಿನ ತನಿಖೆ ನಡೆಸುತ್ತಿದೆ. ರಚನೆಯಾದ ಒಂದೇ ದಿನದಲ್ಲಿ ಐವರನ್ನು ವಿಚಾರಣೆ ನಡೆಸಿ ಕೆಲವು ಮಹತ್ವದ ಸಂಗತಿ ಕಲೆಹಾಕಿದೆ. ಜಾರಕಿಹೊಳಿ ಎಫ್ಐಆರ್ ದಾಖಲಿಸುತ್ತಿದ್ದಂತೆ ಯುವತಿ ಎಂಟ್ರಿ ಕೊಟ್ಟಿದ್ದಾಳೆ. ಸಿಡಿ ಸ್ಫೋಟ, ಷಡ್ಯಂತ್ರ, ನಕಲಿ- ಅಸಲಿಯ ಕಥೆಗಳು ಅಂತ್ಯವಾಗಿವೆ. ಷಡ್ಯಂತ್ರದ ವಿರುದ್ಧ ಜಾರಕಿಹೊಳಿ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಇನ್ನೊಂದಡೆ ಸಂತ್ರಸ್ತ ಯುವತಿ ತಾನೂ ಕಾಳಗಕ್ಕೆ ಇಳಿಯುವ ಸಂದೇಶ ರವಾನಿಸಿದ್ದಾಳೆ. ಇಲ್ಲಿವರೆಗೂ ನಡೆದ ಶೀತಲ ಸಮರ ಮುಕ್ತಾಯವಾಗಿದ್ದು ಇನ್ನೇನಿದ್ದರೂ ಕಾನೂನು ಸಮರ ಸಿದ್ಧವಾಗಲಿದೆ. ಇಲ್ಲಿ ಸಂತ್ರಸ್ತೆ ಎನ್ನಲಾದ ಯುವತಿ ಜತೆ ಏಕಾಂತ ಕ್ಷಣ ಕಳೆದಿರುವುದು ವಾಸ್ತವ, ಆದರೆ ಅದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಸಂಪೂರ್ಣ ಸತ್ಯ ಒಪ್ಪಿಕೊಂಡು ಕಾನೂನು ಸಮರ ಸಾರುತ್ತಾರೋ ? ಇದೊಂದು ನಕಲಿ ಸಿಡಿ ರಚನೆ ಮಾಡಿ ನನ್ನ ತೇಜೋವಧೆಗೆ ಷಡ್ಯಂತ್ರ ಮಾಡಿದರು ಎಂಬ ಕಥೆ ಕಟ್ಟಿ ಸಮರ ಮುಂದುವರೆಸುತ್ತಾರೋ ಕಾದು ನೋಡಬೇಕು. ಯುವತಿ ಏನಾದರೂ ಅಖಾಡಕ್ಕೆ ಇಳಿದರೆ, ಸುಳ್ಳಿನ ಮೇಲೆಂತೂ ಜಾರಕಿಹೊಳಿ ಜಯ ಸಾಧಿಸಲು ಸಾಧ್ಯವೇ ಇಲ್ಲ ಎಂಬುದು ಸಾಮಾನ್ಯ ಕಾನೂನು ಅರಿವು ಇರುವ ಎಲ್ಲರಿಗೂ ಗೊತ್ತಾಗುತ್ತದೆ.












Click it and Unblock the Notifications