ಯುವತಿ ಸ್ವ ಇಚ್ಛಾ ಹೇಳಿಕೆ ಬಳಿಕ ಜಾರಕಿಹೊಳಿಗೆ ಎದುರಾಲಿದೆ ಮಹಾ ಕಂಟಕ
ಬೆಂಗಳೂರು, ಮಾರ್ಚ್ 29: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಡಿಲೇಡಿ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ ಸೆಕ್ಷನ್ 164 ಅಡಿ ದಾಖಲಿಸಲಿರುವ ಸ್ವ ಇಚ್ಛಾ ಹೇಳಿಕೆ ಮೇಲೆ ನಿಂತಿದೆ. ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಅವಕಾಶ ಕೋರಿ ಸಿಡಿಲೇಡಿ ಪರ ವಕೀಲರು ನ್ಯಾಯಾಲಯದ ರಿಜಿಸ್ಟ್ರಾರ್ಗೆ ಮನವಿ ನೀಡಿದ್ದಾರೆ. ಸಂತ್ರಸ್ತ ಯುವತಿ ಹೇಳಿಕೆ ದಾಖಲಿಸಬೇಕಾಗಿರುವ ನ್ಯಾಯಾಲಯ ಮತ್ತು ನ್ಯಾಯಾಧೀಶರ ಗುರುತು ಮಾಡುವ ಕಾನೂನು ಪ್ರಕ್ರಿಯೆ ಶುರುವಾಗಿದೆ.
Recommended Video
ಇತ್ತ ಪೋಷಕರು ನನ್ನ ಮಗಳನ್ನು ಒತ್ತಡದಲ್ಲಿದ್ದಾಳೆ. ನಾಲ್ಕು ದಿನ ನಮಗೆ ಒಪ್ಪಿಸಿ, ನನ್ನ ಮಗಳನ್ನು ಒತ್ತೆಯಾಳನ್ನಾಗಿಟ್ಟುಕೊಂಡು ರಾಜಕೀಯ ದಾಳಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪೋಷಕರು ಮನವಿ ಮಾಡಿದ್ದಾರೆ. ಈ ಎಲ್ಲದರ ನಡುವೆ ಕಾನೂನು ಏನು ಹೇಳುತ್ತೆ ? ಯುವತಿಯನ್ನು ನ್ಯಾಯಾಲಯ ಪೋಷಕರ ಮಡಿಲು ಸೇರಿಸುತ್ತಾ ? ಇಲ್ಲವೇ ಸ್ವ ಇಚ್ಛಾ ಹೇಳಿಕೆ ದಾಖಲಿಸಿಕೊಳ್ಳುತ್ತದೆಯಾ ? ಹೇಳಿಕೆ ದಾಖಲಿಸಿಕೊಂಡ ಬಳಿಕ ನಡೆಯುವ ಪ್ರಕ್ರಿಯೆಗಳೇನು ಎಂಬುದಕ್ಕೆ ಉತ್ತರ ಇಲ್ಲಿದೆ.
ಸಿಡಿ ಪ್ರಕರಣ; 4 ದಿನದ ಕಾಲವಕಾಶ ಕೇಳಿದ ಜಾರಕಿಹೊಳಿ!
ಸಿಡಿ ಲೇಡಿಯ ಸ್ವ ಇಚ್ಛಾ ಹೇಳಿಕೆ ಮೇಲೆ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ನಿಂತಿದೆ. ಕಳೆದ ಇಪ್ಪತ್ತೈದು ದಿನಗಳಿಂದ ವಿಡಿಯೋ ಹೇಳಿಕೆ, ಎಸ್ಐಟಿ ಶೋಧ, ರಾಜಕೀಯ ಕೆಸೆರೆರಚಾಟದಿಂದ ಕೂಡಿದ್ದ ಪ್ರಕರಣ ಇದೀಗ ನ್ಯಾಯಾಲಯದ ಕದ ತಟ್ಟಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂಬುದನ್ನು ಸಾಬೀತು ಪಡಿಸಲು ಹೋರಾಟ ನಡೆಸುತ್ತಿರುವ ಜಾರಕಿಹೊಳಿ ಜಯ ಗಳಿಸುತ್ತಾರಾ ? ಇಲ್ಲವೇ ಸಿಡಿಲೇಡಿಯ ಹೇಳಿಕೆ ಆಧಾರದ ಮೇಲೆ ಜಾರಕಿಹೊಳಿ ಜೈಲಿಗೆ ಹೋಗುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಸಾಮಾನ್ಯವಾಗಿ ಸಿಆರ್ಪಿಸಿ ಸೆಕ್ಷನ್ 164 ಅಡಿ ಸಂತ್ರಸ್ತೆಯ, ದೂರುದಾರ ಹೇಳಿಕೆಯನ್ನು ತನಿಖಾಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ದಾಖಲಿಸಿಕೊಳ್ಳುತ್ತಾರೆ. ಆದರೆ ರಾಸಲೀಲೆ ಪ್ರಕರಣದಲ್ಲಿ ಭಿನ್ನ ಸ್ವರೂಪ ಪಡೆದುಕೊಂಡಿದೆ. ಎಸ್ಐಟಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ನ್ಯಾಯಾಧೀಶರ ಮುಂದೆಯೇ ಸಂತ್ರಸ್ತೆ ಎನ್ನಲಾದ ಯುವತಿ ಸ್ವ ಇಚ್ಛಾ ಹೇಳಿಕೆ ದಾಖಲಿಸಲಿದ್ದಾರೆ. ಆರೋಪಿ ಪ್ರಭಾವ ವ್ಯಕ್ತಿಯಾಗಿದ್ದು, ಬೆದರಿಕೆ ಹಾಕುತ್ತಿದ್ದಾರೆ. ಸ್ವ ಇಚ್ಛಾ ಹೇಳಿಕೆಗೆ ಅವಕಾಶ ಕೋರಿ ಸಿಡಿಲೇಡಿ ಪರ ವಕೀಲ ಜಗದೀಶ್ ನ್ಯಾಯಾಲಯದ ರಿಜಿಸ್ಟ್ರಾರ್ ಗೆ ಮನವಿ ನೀಡಿದ್ದಾರೆ. ಮಂಗಳವಾರ ಈ ಕುರಿತ ನಿರ್ಧಾರ ಪ್ರಕಟವಾಗಲಿದೆ. ಇದಕ್ಕೂ ಮೊದಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಿಡಿಲೇಡಿಯೇ ಇಮೇಲ್ ಮೂಲಕ ಪತ್ರ ಬರೆದಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್ಸುಂದರ್ ಮಹತ್ವದ ಹೇಳಿಕೆ
ಕಾನೂನು ಪ್ರಕಾರ ನೋಡುವುದಾದರೆ,ಸಿಆರ್ಪಿಸಿಸೆಕ್ಷನ್ 164 (5)ರ ಪ್ರಕಾರ ಒಬ್ಬ ದೂರುದಾರೆ, ಸಂತ್ರಸ್ತೆ ಬಯಸಿದರೆ ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಅವಕಾಶವಿದೆ. ಆದರೆ, ಸದ್ಯ ಎಸ್ಐಟಿ ತನಿಖೆ ನಡೆಸುತ್ತಿರುವ ಅಧಿಸೂಚಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆ ಪಡೆಯಲು ಸಾಧ್ಯವಿಲ್ಲ. ಬದಲಿಗೆ ಮತ್ತೊಬ್ಬ ನ್ಯಾಯಾಧೀಶರನ್ನು ಅಧಿಸೂಚಿಸಿ ಅವರ ಮುಂದೆ ಯುವತಿ ಹೇಳಿಕೆ ದಾಖಲಿಸಲು ಅವಕಾಶವಿದೆ. ಇನ್ನು ಯುವತಿ ದೂರನ್ನಾಧರಿಸಿ ದಾಖಲಿಸಿರುವ ಐಪಿಸಿ ಸೆಕ್ಷನ್ 376 (c) ಬದಲಾಗಿ 376 ಅಡಿಯಲ್ಲಿ ಕೇಸು ದಾಖಲಿಸಬೇಕಾಗುತ್ತದೆ. ಒಂದು ವೇಳೆ ಯುವತಿ ನನ್ನ ಮೇಲೆ ಬಲತ್ಕಾರವಾಗಿದೆ. ನನಗೆ ಉದ್ಯೋಗದ ಅಮಿಷೆ ಒಡ್ಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಹೇಳಿಕೆ ನೀಡಿದರೂ ಅದು ರಮೇಶ್ ಜಾರಕಿಹೊಳಿ ಗೆ ಕಂಟಕವಾಗಬಹುದು. ಜಾಮೀನು ರಹಿತ ಅಪರಾಧ ಹಿನ್ನೆಲೆ ಹೊಂದಿರುವ ಕಾರಣ ಜಾರಕಿಹೊಳಿ ಬಂಧನಕ್ಕೆ ಒಳಗಾಗಬಹುದಾದ ಸಂದರ್ಭ ಎದುರಾಗಬಹುದು ಎಂದು ಹಿರಿಯ ವಕೀಲ ಸಿದ್ದೇಶ್ವರ ಬಿ. ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಇದೊಂದು ರಾಜಕೀಯ ಷಡ್ಯಂತ್ರ, ಹನಿ ಟ್ರ್ಯಾಪ್ ಮಾಡಲಾಗಿದೆ. ಇದರಲ್ಲಿ ರಾಜಕೀಯ ನಾಯಕರ ಕೈವಾಡವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸು ಕೂಡ ದಾಖಲಿಸಿದ್ದಾರೆ. ಇನ್ನೂ ನನ್ನ ಬಳಿ ಹಲವು ಮಹತ್ವದ ಸಾಕ್ಷಿಗಳು ಇವೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಅದಾಗಲೇ ಸಂತ್ರಸ್ತೆ ಎನ್ನಲಾದ ಯುವತಿ ಮಾತನಾಡಿರುವ ಅಡಿಯೋದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಹೆಸರು ಉಲ್ಲೇಖವಾಗಿದೆ. ಇವೆಲ್ಲವೂ ಮಹತ್ವದ ಸಾಕ್ಷಿಗಳೇ ಆಗಿದ್ದರೂ, ಈ ಹಂತದಲ್ಲಿ ಇವನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ. ತನಿಖೆ ಕಾಲದಲ್ಲಿ ಅವು ಜಾರಕಿಹೊಳಿಗೆ ನೆರವಾಗಬಹುದು. ಇಲ್ಲವೇ ಈ ಪ್ರಕರಣದ ತನಿಖೆ ಮುಗಿದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ವೇಳೆ ಜಾರಕಿಹೊಳಿ ಸಾಬೀತು ಮಾಡಬಹುದು.
ಈಗಿನ ಬೆಳವಣಿಗೆ ನೋಡಿದರೆ, ಜಾರಕಿ ಹೊಳಿ ಬಳಿ ಇರುವ ಸಾಕ್ಷಿಗಳು ಅವರು ಆರೋಪ ಮುಕ್ತರಾಗಲು ನೆರವಾಗುವಂತದ್ದೇ ವಿನಃ, ಅವನ್ನೇ ಮುಂದಿಟ್ಟುಕೊಂಡು ಸಂತ್ರಸ್ತ ಯುವತಿ ವಿರುದ್ಧ ಪ್ರಕರಣ ದಾಖಲಿಸಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳನ್ನು ಕಾನೂನು ತಜ್ಞರು ಹಂಚಿಕೊಂಡಿದ್ದಾರೆ.
ಇನ್ನು ನನ್ನ ಮಗಳು ಒತ್ತಡದಲ್ಲಿದ್ದಾರೆ. ಆಕೆಯನ್ನು ಕೆಲವು ರಾಜಕೀಯ ನಾಯಕರು ತಮ್ಮ ಒತ್ತೆಯಾಳನ್ನಾಗಿ ಮಾಡಿಕೊಂಡು ಆಕೆಯಿಂದ ಹೇಳಿಕೆ ಬಿಡುಗಡೆ ಮಾಡಿಸುತ್ತಿದ್ದಾರೆ. ಆಕೆಯನ್ನು ನಾಲ್ಕು ದಿನ ನಮ್ಮ ಕಸ್ಟಡಿಗೆ ನೀಡಿ. ಆಕೆ ಒತ್ತಡದಿಂದ ಮುಕ್ತವಾದ ಬಳಿಕ ನಿಷ್ಪಕ್ಷಪಾತ ಹೇಳಿಕೆ ದಾಖಲಿಸಲಿದ್ದಾಳೆ. ಇದನ್ನು ಮಾನ್ಯ ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ, ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಡಿಮೆ. ಯಾಕೆಂದರೆ ಸಂತ್ರಸ್ತ ಯುವತಿ ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವಳು. ಸಂತ್ರಸ್ತೆಯ ಹೇಳಿಕೆ ಮುಖ್ಯವಾಗುತ್ತದೆ ಹೊರತೂ ಪೋಷಕರ ಮನವಿಯನ್ನು ನ್ಯಾಯಾಲಯ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ. ಆಕೆ ಸ್ವ ಇಚ್ಛಾ ಹೇಳಿಕೆ ನೀಡುವಾಗ ನ್ಯಾಯಾಧೀಶರು ಪ್ರಶ್ನೆ ಮಾಡುತ್ತಾರೆ. ಒತ್ತಡವಾಗಿರುವ ಬಗ್ಗೆ, ಪಿತೂರಿ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಯುವತಿ ತಾನು ಒತ್ತಡದಲ್ಲಿದ್ದೇನೆ ಎಂದು ಹೇಳಿಕೆ ನೀಡಿದಲ್ಲಿ ನಾಲ್ಕೈದು ದಿನ ಕಾಲಾವಕಾಶ ನೀಡಬಹುದು. ಆಗಲೂ ಯುವತಿ ಎಲ್ಲಿರಬೇಕು ಎಂಬುದರ ಬಗ್ಗೆ ನ್ಯಾಯಾಧೀಶರು ನಿರ್ದೇಶನ ನೀಡಬಹುದು. ಒಮ್ಮೆ ಯುವತಿ ಸ್ವ ಇಚ್ಛಾ ಹೇಳಿಕೆ ದಾಖಲಿಸಿದ ಬಳಿಕ ಅದಕ್ಕೆ ಆಕೆ ಬದ್ಧವಾಗಿರಬೇಕಾಗುತ್ತದೆ.