ಡಿಕೆಶಿ ಅವರೇ, ನೈತಿಕತೆಯಿದ್ರೆ ರಾಜೀನಾಮೆ ನೀಡಿ: ಬಿಜೆಪಿ ಟ್ವೀಟ್
ಬೆಂಗಳೂರು, ಮಾರ್ಚ್ 27: ಸಿಡಿ ಪ್ರಕರಣದಲ್ಲಿ ಮಹಾನಾಯಕ ಎಂದು ಗುರುತಿಸಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಭಾರತೀಯ ಜನತಾ ಪಕ್ಷ ಆಗ್ರಹಿಸಿದೆ.
"ಎಲ್ಲವನ್ನೂ ತಾನೇ ಮುಂದೆ ನಿಂತು ಮಾಡಿಸುತ್ತಾರೆ, ಸದನದಲ್ಲಿ ಬೊಬ್ಬಿರಿಯುತ್ತಾರೆ, ಸುಭಗನಂತೆ ನಟಿಸುತ್ತಾರೆ. ಮಹಾನಾಯಕ ಡಿ ಕೆ ಶಿವಕುಮಾರ್ ಅವರೇ, ನಿಮಗೆ ಸ್ವಲ್ಪವಾದರೂ ನೈತಿಕತೆ ಇದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟುಬಿಡಿ. ಒತ್ತೆಯಲ್ಲಿಟ್ಟುಕೊಂಡಿರುವ ಸಂತ್ರಸ್ತೆಯನ್ನು ಬಿಟ್ಟುಬಿಡಿ, ತನಿಖೆಗೆ ಸಹಕರಿಸಿ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

"ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಮಾನ್ಯ ಡಿ ಕೆ ಶಿವಕುಮಾರ್ ಅವರೇ!?. ನೇರವಾಗಿ ಆರೋಪ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ. ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ? ತಕ್ಷಣವೇ ರಾಜೀನಾಮೆ ನೀಡಿ" ಎಂದು ಬಿಜೆಪಿ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ತೆ ಒತ್ತೆಯಾಳು:
ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡು ರಾಜಕೀಯ ಆಟ ಆಡುತ್ತಿರುವ ಮಾನ್ಯ ಡಿಕೆ ಶಿವಕುಮಾರ್ ಅವರೇ, ನಿಮ್ಮದೆಂತಹ ಕುತ್ಸಿತ ಮನೋಸ್ಥಿತಿ ಇರಬಹುದು?. ಕೆಪಿಸಿಸಿ ಕಚೇರಿಯಲ್ಲೇ ಸಂತ್ರಸ್ಥೆಯನ್ನು ಒತ್ತೆಯಾಗಿಟ್ಟುಕೊಂಡಿದ್ದೀರಾ?. ಸಂತ್ರಸ್ಥೆಯ ಕುರಿತು ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ನಾಯಕರು ಈಗೆಲ್ಲಿದ್ದಾರೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯರಿಗೆ ಬಿಜೆಪಿ ಸೆಕ್ಷನ್ ಪ್ರಶ್ನೆ:
"ಸಂತ್ರಸ್ಥೆಯನ್ನು ಕೂಡಿಹಾಕುವ ಪೂರ್ವ ತಯಾರಿ ಕೆಪಿಸಿಸಿ ಕಚೇರಿಯಲ್ಲೇ ನಡೆದಿದ್ದಾ?. ಸಂತ್ರಸ್ಥೆಯ ಪೋಷಕರು ನೇರವಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದ್ದಾರೆ. ಸೆಕ್ಷನ್ ಸ್ಪೆಷಲಿಸ್ಟ್ ಸಿದ್ದರಾಮಯ್ಯ ಅವರೇ, ರಾಜಕೀಯ ಆಟಕ್ಕೆ ಸಂತ್ರಸ್ಥೆಯನ್ನು ಬಳಸಿಕೊಂಡದ್ದು ಯಾವ ಸೆಕ್ಷನ್ನಲ್ಲಿ ಅಪರಾಧ ಎಂದು ಬಿಡಿಸಿ ಹೇಳುವಿರಾ?" ಎಂದು ಬಿಜೆಪಿ ಪ್ರಶ್ನೆ ಮಾಡಿದೆ.












Click it and Unblock the Notifications