12 ವರ್ಷಗಳಿಂದ ಕರ್ನಾಟಕಕ್ಕೆ ಅನ್ಯಾಯ: ಜಿಎಸ್ಟಿ, ಮೇಕೆದಾಟು ಬಗ್ಗೆ ಪ್ರಧಾನಿ ಪ್ರಶ್ನಿಸಿದ ರಾಮಲಿಂಗಾ ರೆಡ್ಡಿ
ಬೆಂಗಳೂರು: ಕರ್ನಾಟಕಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ 12 ವರ್ಷಗಳಲ್ಲಿ ತಮ್ಮ ಆಡಳಿತದಿಂದ 6.5 ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ಘೋಷಿತ ಯೋಜನೆಗಳು ಜಾರಿಯಾಗಿಲ್ಲ. ರಾಜ್ಯ ಸರ್ಕಾರ ಸುಮಾರು 1,100 ಎಕರೆ ಭೂಮಿ ನೀಡಿದರೂ ರೈಲ್ವೆ ಕೋಚ್ ಕಾರ್ಖಾನೆ ಏಕಾಗಲಿಲ್ಲ? ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಕೇಂದ್ರದಿಂದ ಜಿಎಸ್ಟಿ ವಿಚಾರದಲ್ಲೂ ಅನ್ಯಾಯವಾಗಿದೆ ಎಂದು ಲೆಕ್ಕ ನೀಡಿದ್ದಾರೆ.
ರಾಜ್ಯ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಚಿವರು ಟೀಕಿಸಿದ್ದಾರೆ. ಕನ್ನಡಿಗರಿಗೆ ಅನ್ಯಾಯವಾಗಿದ್ದರ ಬಗ್ಗೆ ಮಾತನಾಡದೇ ಕೇವಲ "ಕುರ್ಚಿ" ರಾಜಕಾರಣದ ಬಗ್ಗೆ ಮಾತನಾಡಿದ್ದು ದುರದೃಷ್ಟಕರ. ನಮ್ಮ ಆಂತರಿಕ ಪ್ರಜಾಪ್ರಭುತ್ವವನ್ನು ಪ್ರಧಾನಿಗಳು ಟೀಕಿಸುವ ಮೊದಲು ಕನ್ನಡಿಗರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದಿಂದ 4.5 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹ
ಭಾರತದ 2ನೇ ಅತಿದೊಡ್ಡ ಜಿಎಸ್ಟಿ (GST) ಪಾವತಿದಾರ ರಾಜ್ಯವಾದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿದ್ದೇನು?. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಕರ್ನಾಟಕವು ದೇಶದ ಆರ್ಥಿಕತೆಯ ಎಂಜಿನ್ ಆಗಿದೆ. ಅಂತಹ ರಾಜ್ಯಕ್ಕೆ 2025-26ರಲ್ಲಿ 1.58 ಲಕ್ಷ ಕೋಟಿ ರೂ.ಗೂ ಹೆಚ್ಚು ಜಿಎಸ್ಟಿ ಒಳಗೊಂಡಂತೆ ಒಟ್ಟು 4.5 ಲಕ್ಷ ಕೋಟಿ ರೂ. ವಿವಿಧ ರೂಪದಲ್ಲಿ ತೆರಿಗೆ ಸಂಗ್ರಹಿಸಿದೆ. ಆದರೆ ಕೇಂದ್ರದಿಂದ ನಮಗೆ ಮರಳಿ ಬರುತ್ತಿರುವುದು ಕೇವಲ ಬಿಡಿಗಾಸು ಎಂದು ಅವರು ದೂರಿದರು.
ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ 100 ರೂಪಾಯಿಯಲ್ಲಿ ನಮಗೆ ಮರಳಿ ಸಿಗುತ್ತಿರುವುದು 13ಕ್ಕಿಂತ ರೂ.ಗಿಂತಲೂ ಕಡಿಮೆ. ರಾಜ್ಯದ ಜನರ ಶ್ರಮದ ಹಣ ಎಲ್ಲಿ ಹೋಗುತ್ತಿದೆ. 12 ವರ್ಷಗಳ ಸುಳ್ಳು ಭರವಸೆಗಳು ಮತ್ತು ಬಾಕಿ ಉಳಿದಿರುವ ಯೋಜನೆಗಳು ಸಾಕಷ್ಟಿವೆ. 2014 ರಿಂದ ಕರ್ನಾಟಕದ ಜನತೆಯ ಜೀವನಾಡಿ ಯೋಜನೆಗಳು ದೆಹಲಿಯಲ್ಲಿ ಧೂಳು ಹಿಡಿಯುತ್ತಿವೆ. ಕರ್ನಾಟಕದಿಂದ ದಾಖಲೆ ಸಂಖ್ಯೆಯ ಬಿಜೆಪಿ ಸಂಸದರನ್ನು ಕಳುಹಿಸಿದರೂ ನಮಗೆ ಸಿಕ್ಕಿದ್ದು ಶೂನ್ಯ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ, ಜಾರಿ ಆಗದ ಯೋಜನೆಗಳ ಪಟ್ಟಿ
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಈ ಯೋಜನೆಗೆ ವರ್ಷಗಳಿಂದ ಪರಿಸರ ಅನುಮತಿ ನೀಡದೇ ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಕೇಂದ್ರ ಬಜೆಟ್ನಲ್ಲಿ 5,300 ಕೋಟಿ ಘೋಷಿಸಿ "ರಾಷ್ಟ್ರೀಯ ಯೋಜನೆ" ಎಂದು ಬೆನ್ನು ತಟ್ಟಿಕೊಂಡಿದ್ದ ಕೇಂದ್ರ ಸರ್ಕಾರ, ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಕಿಡಿ ಕಾರಿದರು.
* ಇನ್ನೂ ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಮತ್ತು ಅರಣ್ಯ ಅನುಮತಿ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ.
* ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ನಿರಂತರವಾಗಿ ಅನುದಾನದ ಕೊರತೆ ಎದುರಾಗುತ್ತಿದೆ.
* ನಮ್ಮ ರೈತರು ಸಂಕಷ್ಟದಲ್ಲಿದ್ದಾಗ ಮಲತಾಯಿ ಧೋರಣೆ ತೋರಿದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು.
* ಕರ್ನಾಟಕವು ಇತ್ತೀಚೆಗೆ ಭೀಕರ ಬರಗಾಲ ಎದುರಿಸಿದಾಗ ನಾವು 18,000 ಕೋಟಿ ರೂ.ಗೂ ಅಧಿಕ ಎನ್ಡಿಆರ್ಎಫ್ (NDRF) ಪರಿಹಾರ ಕೋರಿದ್ದೆವು. ಆದರೆ ಸುಪ್ರೀಂ ಕೋರ್ಟ್ ಚೀಮಾರಿ ಹಾಕುವವರೆಗೂ ಕೇಂದ್ರವು ಪರಿಹಾರ ಬಿಡುಗಡೆ ಮಾಡಲಿಲ್ಲ.
ಅನ್ನಭಾಗ್ಯಕ್ಕೆ ಅಡ್ಡಿ: ಕರ್ನಾಟಕದಲ್ಲಿ ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ, ಕೇಂದ್ರ ಸರ್ಕಾರವು ಎಫ್ಸಿಐ (FCI) ಮೂಲಕ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡದಂತೆ ತಡೆಹಿಡಿದು ಬಡವರ ಹೊಟ್ಟೆ ಮೇಲೆ ಹೊಡೆಯಿತು.
ಮೂಲಸೌಕರ್ಯ ಯೋಜನೆಗಳು ನೆನೆಗುದಿಗೆ
* ರಾಯಚೂರಿನಲ್ಲಿ ಘೋಷಿತ AIIMS (ಏಮ್ಸ್) ಆಸ್ಪತ್ರೆ ಎಲ್ಲಿದೆ?
* ರಾಜ್ಯ ಸರ್ಕಾರ ಸುಮಾರು 1,100 ಎಕರೆ ಭೂಮಿ ನೀಡಿದರೂ ರೈಲ್ವೆ ಕೋಚ್ ಕಾರ್ಖಾನೆ ಏಕಾಗಲಿಲ್ಲ?.
* ಚುನಾವಣೆ ನಡೆಯುವ ರಾಜ್ಯಗಳಿಗೆ ನೀಡುವ ಆದ್ಯತೆ ನಮ್ಮ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಏಕೆ ಸಿಗುತ್ತಿಲ್ಲ? ಎಂದು ತಿಳಿಸಿದರು.
ನಮ್ಮ ಕುರ್ಚಿ ಭದ್ರ
ರಾಜ್ಯದಲ್ಲಿ ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ. ಆದರೆ ಕರ್ನಾಟಕದ ಬಗ್ಗೆ ನಿಮ್ಮ 'ಉದ್ದೇಶ' ಮಾತ್ರ ಅಲುಗಾಡುತ್ತಿದೆ. ಕೇವಲ ಭಾಷಣ ಮಾಡಲು ಬೆಂಗಳೂರಿಗೆ ಬಂದರೆ ಉಪಯೋಗವಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನ ಮತ್ತು ಯೋಜನೆಗಳ ಅನುಮತಿಯೊಂದಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.














Click it and Unblock the Notifications