ಬಿಬಿಎಂಪಿ: ರಾಜಕಾಲುವೆ ಮೇಲಿನ ಕಾಂಪೌಂಡ್ ತೆರವು
ಬೆಂಗಳೂರು, ಅಕ್ಟೋಬರ್ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಮಹದೇವಪುರ ವಿಭಾಗದ ಶೀಲವಂತನಕೆರೆ ಹಾಗೂ ಕೆ.ಆರ್.ಪುರ ವಿಭಾಗದ ಎಸ್.ಆರ್ ಲೇಔಟ್ ನಲ್ಲಿ ರಾಜಕಾಲುವೆ ಮೇಲಿನ ಒತ್ತುವರಿ ತೆರವು ಮಾಡಲಾಯಿತು.
ಮಹದೇವಪುರ ವಿಭಾಗದ ಶೀಲವಂತನ ಕೆರೆಯ ಅಸೆಂಟ್ ಗಾರ್ಡೇನಿಯ ಹಿಂಭಾಗ ಸುಮಾರು 130 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಕೆ.ಆರ್.ಪುರ ವಿಭಾಗದ ಬಸವನಪುರ ವಾರ್ಡ್ ಎಸ್.ಆರ್ ಲೇಔಟ್ ನಲ್ಲಿ ಸಹ ಒತ್ತುವರಿ ತೆರವು ನಡೆಯಿತು.

ರಾಜಕಾಲುವೆ ಮೇಲೆ ಸುಮಾರು 80 ಮೀಟರ್ ಉದ್ದದ ಮಳೆ ನೀರುಗಾಲುವೆ ಒತ್ತುವರಿ, ಮಳೆ ನೀರುಗಾಲುವೆಗೆ ಹೊಂದಿಕೊಂಡಂತೆ 6 ಆರ್.ಸಿ.ಸಿ ಮನೆ ಹಾಗೂ ಒಂದು ಶೀಟಿನ ಮನೆಗಳು ಇವೆ. ಈ ಪೈಕಿ 2 ಮನೆಯ ಕಾಂಪೌಂಡ್ ಗೋಡೆ ಹಾಗೂ ಮೆಟ್ಟಿಲುಗಳ ಭಾಗವನ್ನು ತೆರವುಗೊಳಿದಲಾಗಿದೆ. ನಂತರ ಎರಡು ಅಂತಸ್ತಿನ ಕಟ್ಟಡವನ್ನು ಮಳೆ ನೀರುಗಾಲುವೆಯ ಮೇಲೆ ನಿರ್ಮಾಣ ಮಾಡಲಾಗಿದೆ. ಮಾರ್ಕಿಂಗ್ ಮಾಡಿರುವ ಭಾಗದವರೆಗೆ ಗೋಡೆ ತೆರವು ಮಾಡಲು ಮುಂದಾದಾಗ ಮನೆಯ ಮಾಲಿಕರೇ ಸ್ವತಹ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಕೂಡಲೇ ತೆರವು ಮಾಡುವಂತೆ ಮನೆಯ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದರು.

ಮತ್ತೊಂದು ಪ್ರತ್ಯೇಕ ಸ್ಥಳದಲ್ಲಿ ಒಂದು ಮನೆಯ ಗೋಡೆ ಭಾಗ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ. ಶೆಡ್ ನ ಒಂದು ಗೋಡೆ, ಮಳೆ ನೀರುಗಾಲುವೆ ಮೇಲೆ ನಿರ್ಮಿಸಿದ್ದ ಮನೆಯ ಎರಡು ಗೋಡೆ ಭಾಗ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications