Breaking; ಬೆಂಗಳೂರು ಮಳೆ, 62 ಜನರನ್ನು ರಕ್ಷಿಸಿದ ಎನ್ಡಿಆರ್ಎಫ್
ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರು ನಗರದಲ್ಲಿ ಮಳೆ ಅವಾಂತರಗಳು ನಿಂತಿಲ್ಲ. ವಿವಿಧ ಬಡಾವಣೆಗಳಲ್ಲಿ ಮಳೆ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಜನರ ರಕ್ಷಣಾ ಕಾರ್ಯಕ್ಕಾಗಿ ಎನ್ಡಿಆರ್ಎಫ್ ಪಡೆ ನಿಯೋಜನೆ ಮಾಡಲಾಗಿದೆ.
ಮಂಗಳವಾರ ನಗರದಲ್ಲಿ ಜನರ ರಕ್ಷಣೆಗಾಗಿ ಎರಡು ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಎಸ್ಡಿಆರ್ಎಫ್, ಅಗ್ನಿಶಾಮಕದಳಗಳು ಸಹ ಕಾರ್ಯಾಚರಣೆ ನಡೆಸುತ್ತಿವೆ.
ಎನ್ಡಿಆರ್ಎಫ್ ತಂಡ ಇದುವರೆಗೂ 25 ಮಕ್ಕಳು, ಇಬ್ಬರು ಹಿರಿಯ ನಾಗರಿಕರು ಸೇರಿ 62 ಜನರನ್ನು ರಕ್ಷಣೆ ಮಾಡಿವೆ. ಬುಧವಾರವೂ ಸಹ ಮಳೆ ನೀರು ನುಗ್ಗಿರುವ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ನಡೆಸಲಿದೆ.

ಅಸಿಸ್ಟೆಂಟ್ ಕಮಾಂಡೆಂಟ್ ಜೆ. ಸೆಂಥಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, "ನಾವು ಎರಡು ತಂಡಗಳನ್ನು ಜನರ ರಕ್ಷಣೆಗೆ ನಿಯೋಜನೆ ಮಾಡಿದ್ದೇವೆ. ಎಸ್ಡಿಆರ್ಎಫ್, ಅಗ್ನಿಶಾಮಕದಳ ಮತ್ತು ಬಿಬಿಎಂಪಿ ತಂಡಗಳು ಕಾರ್ಯಾಚರಣೆ ಮಾಡುತ್ತಿವೆ" ಎಂದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಬಿಬಿಎಂಪಿ ಟ್ರಾಕ್ಟರ್ಗಳನ್ನು ಬಳಕೆ ಮಾಡುತ್ತಿದೆ. ಜಲಾವೃತಗೊಂಡ ಮನೆಗಳಲ್ಲಿರುವ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

ಮಂಗಳವಾರ ಸಂಜೆಯೂ ಬೆಂಗಳೂರು ನಗರದಲ್ಲಿ ಮಳೆಯಾಗಿದೆ. ಆದರೆ ಶನಿವಾರ, ಭಾನುವಾರದಂತೆ ಧಾರಾಕಾರ ಮಳೆಯಾಗಿಲ್ಲ. ಭಾರತೀಯ ಹವಾಮಾನ ಇಲಾಖೆ ನಗರದಲ್ಲಿ ಇನ್ನೂ 2 ರಿಂದ 3 ದಿನ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
40 ಜನರ ರಕ್ಷಣೆ; ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಿರುಮಲಶೆಟ್ಟಿ ಗ್ರಾಮದ ಪಾಲಿಹೌಸ್ ಹಾಗೂ ಆನಂದ್ ಫಾರ್ಮ್ ಹೌಸ್ನಲ್ಲಿ ಮಳೆ ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ಎನ್ಡಿಆರ್ಎಫ್, ಎಂಇಜಿ ಹಾಗೂ ಯುವಕರ ಅಡ್ವೆಂಚರ್ ತಂಡವು ರಕ್ಷಣೆ ಮಾಡಿದೆ.
ಜನರು ಸಿಲುಕಿರುವ ಬಗ್ಗೆ ಹೊಸಕೋಟೆ ತಾಲೂಕು ಆಡಳಿತಕ್ಕೆ ಮಾಹಿತಿ ಬಂದಿತ್ತು. ತಾಲ್ಲೂಕು ವಿಪತ್ತು ನಿರ್ವಹಣಾ ತಂಡದೊಂದಿಗೆ ಎನ್ಡಿಆರ್ಎಫ್, ಎಂಇಜಿ ಹಾಗೂ ಯುವಕರ ಅಡ್ವೆಂಚರ್ ತಂಡ ಒಟ್ಟು 40 ಜನರನ್ನು ರಕ್ಷಿಸಿತು.












Click it and Unblock the Notifications