ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪೊಲೀಸರಿಂದ 'ಪ್ರತಿಭಟನೆ ರೋಕೋ'
ಬೆಂಗಳೂರು, ಸೆಪ್ಟೆಂಬರ್ 15: ಸಾಲುಗಟ್ಟಿ ನಿಂತಿದ್ದ ಬಸ್ ಗಳು, ಪ್ರಯಾಣಿಕರಿಗಿಂತ ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಿದ್ದ ಪೊಲೀಸರು ಹಾಗೂ ಆರ್ ಎಎಫ್ ಪಡೆ, ಪೊಲೀಸರಿಗಿಂತ ನಿಮಗೆ ಪ್ರತಿಭಟನಾನಿರತರು ಹೆದರ್ತಾರೆ, ನೀವು ಮುಖ-ಮೂತಿ ನೋಡದೆ ಬಾರಿಸ್ತೀರಿ ಎನ್ನುತ್ತಿದ್ದ ವ್ಯಕ್ತಿ. -ಇದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಗುರುವಾರ ಬೆಳಗ್ಗೆ ಕಂಡು ಬಂದ ದೃಶ್ಯಗಳು.
ರೈಲು ರೋಕೋ ಚಳವಳಿಗೆ ಕರೆ ನೀಡಿದ್ದ ಕನ್ನಡ ಪರ ಸಂಘಟನೆಗಳ ಸದಸ್ಯರಿಗಾಗಿ ಅಕ್ಕ-ಪಕ್ಕದ ಹೋಟೆಲ್ ಮುಂಭಾಗ ನಿಂತಿದ್ದ ಜನರು, ಸಿನಿಮಾ ನಟರಿಗಾಗಿ ಕಾಯುತ್ತಿದ್ದರೇನೋ ಎಂಬಂತೆ ನಿಂತಿದ್ದರು. ಬ್ಯಾರಿಕೇಡ್ ಹಾಕಿ ತಯಾರಾಗಿದ್ದ ಪೊಲೀಸರು, ಬರುತ್ತಿದ್ದ ಹಾಗೆ ಒಳಗೆ ಹಾಕಿಬಿಡೋದೆ ಎಂದು ಮಾತನಾಡಿಕೊಳ್ಳುತ್ತಿದ್ದರು.[Live updates : 'ಮತ್ತೊಮ್ಮೆ ಕರ್ನಾಟಕ ಬಂದ್ ಕರೆ ನೀಡಬೇಕಾಗುತ್ತದೆ']

ಮೈಸೂರು ಬ್ಯಾಂಕ್ ಹತ್ತಿರ ಹತ್ತಿಪ್ಪತ್ತು ಜನರಿದ್ದಾರಂತೆ, ಅಲ್ಲೇ ಅವರನ್ನೆಲ್ಲ ಅರೆಸ್ಟ್ ಮಾಡಬಹುದು. ಕರ್ಫ್ಯೂ ಇದೆಯಲ್ಲ ಗುಂಪು ಸೇರಿ ಪ್ರತಿಭಟನೆ ಮಾಡೋ ಹಾಗಿಲ್ಲ ಎಂದು ಅಲ್ಲೇ ಇದ್ದ ಪೊಲೀಸರೊಬ್ಬರು ಮಾಹಿತಿ ನೀಡಿದರು. ಆದರೆ ಹಲವು ಚಾನೆಲ್ ಗಳ ಮೈಕ್ ಗಳು, ಕ್ಯಾಮೆರಾಗಳು ಪೊಲೀಸರನ್ನೇ ಹಾಯ್ ಎಂದವು.

ಎಷ್ಟು ಹೊತ್ತಿಗೆ ಬರಬಹುದು ಪ್ರತಿಭಟನಾಕಾರರು, ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇವೆಯೇ, ನೀವೆಷ್ಟು ಜನರಿದ್ದೀರಿ ಎಂಬ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಾಯಿತು. ಪರಿಸ್ಥಿತಿ ಹತೋಟಿಯಲ್ಲಿದೆ, ಏನೂ ತೊಂದರೆಯಿಲ್ಲ, ನಾವು ಐನೂರು ಜನರಷ್ಟಿದ್ದೀವಿ, ರೈಲು ನಿಲ್ದಾಣದ ಪೂರ್ತಿ ಪಹರೆ ಹಾಕಲಾಗಿದೆ ಎಂಬ ಉತ್ತರವೇ ಪದೇಪದೇ ಕೇಳಿಬಂತು.[ತಮಿಳುನಾಡು ಬಂದ್ : ಕನ್ನಡಿಗರಿಗೆ ರಕ್ಷಣೆ ನೀಡಲು ಸಿದ್ದರಾಮಯ್ಯ ಪತ್ರ]

ಬೆಳಗ್ಗೆ ಹನ್ನೊಂದಾದರೂ ಕನ್ನಡ ಪರ ಸಂಘಟನೆಗಳ ಸದಸ್ಯರು ಕಂಡುಬರಲಿಲ್ಲ. "ಪ್ರತಿಭಟನೆಗೆ ಸೇರಬಹುದಾದ ಜನರ ಹತ್ತಿಪ್ಪತ್ತು ಪಟ್ಟು ಹೆಚ್ಚಿಗೆ ನೀವೇ ಇದೀರಲ್ರೀ" ಎಂಬುದು ಪೊಲೀಸರಿಗೆ ಕೇಳಿದ್ದು ಪ್ರಶ್ನೆಯೋ ವ್ಯಂಗ್ಯವೋ ತಿಳಿಯಲಿಲ್ಲ.












Click it and Unblock the Notifications