ಬೆಂಗಳೂರಿನ ಬೀದಿಗಳಲ್ಲಿ ಕಾಣಿಸಿಕೊಂಡ ರಾಹುಲ್: ಬಿಎಂಟಿಸಿ ಬಸ್ ಏರಿ ಜನರೊಂದಿಗೆ ಮಾತುಕತೆ ನಡೆಸಿದ 'ಕೈ' ನಾಯಕ
ಬೆಂಗಳೂರು, ಮೇ 08: ಕರ್ನಾಟಕ ಚುನಾವಣೆಗೆ ಬಹಿರಂಗ ಪ್ರಚಾರ ಇಂದು (ಮೇ 8) ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಬೀದಿಗಳಲ್ಲಿ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಸೋಮವಾರ ಬೆಳಗ್ಗೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಔಟ್ ಲೆಟ್ಗೆ ಭೇಟಿ ನೀಡಿದ ರಾಹುಲ್ ಗಾಂಧಿ ಗ್ರಾಹಕರೊಂದಿಗೆ ಮಾತನಾಡಿದರು.
ನಂತರ ಬಿಎಂಟಿಸಿ ಬಸ್ ಹತ್ತಿದ ರಾಹುಲ್ ಗಾಂಧಿ ಕನ್ನಿಂಗ್ ಹ್ಯಾಮ್ ರಸ್ತೆಯಿಂದ ಲಿಂಗರಾಜಪುರಂಗೆ ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿದ್ದ ಕೆಲವು ವಿದ್ಯಾರ್ಥಿಗಳೊಂದಿಗೆ ಕಾಂಗ್ರೆಸ್ ನಾಯಕ ಮಾತನಾಡುತ್ತಿರುವುದು ಕಂಡುಬಂದಿತು.

ನಿನ್ನೆ ಬೆಂಗಳೂರಿಗೆ ಆಗಮಿಸಿದ ರಾಹುಲ್ ಅವರು ಡೆಲಿವರಿ ಏಜೆಂಟ್ನ ಸ್ಕೂಟರ್ ಅನ್ನು ಹತ್ತಿಕೊಂಡು ರೈಡ್ ಮಾಡಿದರು.
ಡೆಲಿವರಿ ನೌಕರರ ಗುಂಪನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಅವರ ಸ್ಕೂಟರ್ನಲ್ಲಿ ಸವಾರಿ ಮಾಡುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
'ರಾಹುಲ್ ಗಾಂಧಿ ಜಿ ಅವರು ಇಂದು ಬೆಂಗಳೂರಿನ ಐಕಾನಿಕ್ ಏರ್ಲೈನ್ಸ್ ಹೋಟೆಲ್ನಲ್ಲಿ ಡೆಲೆವರಿ ನೌಕರರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿ ಕಂಪನಿಗಳ ವಿತರಣಾ ಪಾಲುದಾರರೊಂದಿಗೆ ಸಂಭಾಷಣೆ ನಡೆಸಿದರು' ಎಂದು ಟ್ವೀಟ್ ಓದಿದೆ.
.@RahulGandhi ji had a candid conversation with gig workers and delivery partners of Dunzo, Swiggy, Zomato, Blinkit etc at the iconic Airlines Hotel in Bengaluru, today.
— Congress (@INCIndia) May 7, 2023
Over a cup of coffee and masala dosa, they discussed the lives of delivery workers, lack of stable employment… pic.twitter.com/qYjY7L03sh
ರಾಹುಲ್ ಗಾಂಧಿಯವರು ಕಾಫಿ ಮತ್ತು ಮಸಾಲಾ ದೋಸೆಯ ಸೇವಿಸುವ ಮೂಲಕ ಕೆಲಸಗಾರರ ಜೊತೆ ಸಂವಾದ ನಡೆಸಿದರು. ಏಜೆಂಟರ ಕೆಲಸದ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದ ಅವರು ವಿತರಣಾ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವಾಗ ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿದರು.
ನಂತರ ನೀಲಿ ಹೆಲ್ಮೆಟ್ ಧರಿಸಿ ಸ್ಕೂಟರ್ನಲ್ಲಿ ಡೆಲಿವರಿ ಏಜೆಂಟ್ ಹಿಂದೆ ಕುಳಿತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ರಾಹುಲ್ ಗಾಂಧಿ ಅವರು ಹೋಟೆಲ್ ತಲುಪಲು ಸುಮಾರು ಎರಡು ಕಿಮೀ ಸ್ಕೂಟರ್ ಸವಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ತಿಂಗಳು, ರಾಹುಲ್ ಗಾಂಧಿ ಅವರು ದೆಹಲಿ ಮಾರುಕಟ್ಟೆಗೆ ಭೇಟಿ ರಂಜಾನ್ ಸಮಯದಲ್ಲಿನ ಜನಪ್ರಿಯ ಭಕ್ಷ್ಯಗಳನ್ನು ಸೇವಿಸಿದರು. ಶುಕ್ರವಾರ, ದೆಹಲಿ ವಿಶ್ವವಿದ್ಯಾಲಯದ ಪುರುಷರ ಹಾಸ್ಟೆಲ್ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಸಿ ಅಲ್ಲಿಯೇ ಊಟ ಮಾಡಿದ್ದಾರೆ.

ಬಿಜೆಪಿ ವಿರುದ್ಧ ರಾಹುಲ್ ಆಕ್ರೋಶ
ನಿನ್ನೆ ಆನೆಕಲ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
'ಎಲ್ಲಿ ನೋಡಿದರೂ ಹಗರಣಗಳು, ಶಾಸಕರ ಮಗ 8 ಕೋಟಿ ರೂಪಾಯಿಯೊಂದಿಗೆ ಸಿಕ್ಕಿಬಿದ್ದಿದ್ದಾರೆ. 2500 ಕೋಟಿಗೆ ಸಿಎಂ ಕುರ್ಚಿ ಖರೀದಿಸಬಹುದು ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರ 6 ವರ್ಷದ ಮಗುವಿಗೆ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದರು.
'ಕಳೆದ 3 ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರವಿದೆ. ಪ್ರಧಾನಿ ಮೋದಿಯವರಿಗೂ ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ತಿಳಿದಿದೆ. ಡಬಲ್ ಇಂಜಿನ್ ಸರ್ಕಾರವಿದೆ ಎಂದು ನೀವು ಹೇಳಿದ್ದೀರಿ. ಆದ್ದರಿಂದ ಮೋದಿ ಜೀ, ಶೇ 40 ರಲ್ಲಿ ಯಾವ ಎಂಜಿನ್ ಎಷ್ಟು ಬಂದಿದೆ ಎಂದು ಹೇಳಿ?' ಎಂದು ಪ್ರಶ್ನಿಸಿದರು.

ಮಣಿಪುರ ಉರಿಯುತ್ತಿದೆ ಮತ್ತು ಜನರು ಸಾಯುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದು ದ್ವೇಷ ರಾಜಕಾರಣದ ಫಲಿತಾಂಶ ಎಂದು ರಾಹುಲ್ ಆರೋಪಿಸಿದರು.
ಇಂದು ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಅದಕ್ಕೆ ದ್ವೇಷ ರಾಜಕಾರಣವೇ ಕಾರಣ. ಈ ದ್ವೇಷ ರಾಜಕಾರಣದ ವಿರುದ್ಧ ನಾವು 'ಭಾರತ್ ಜೋಡೋ ಯಾತ್ರೆ' ಕೈಗೊಂಡಿದ್ದೇವೆ. ಇದು ನಮ್ಮ ಸಿದ್ಧಾಂತವಾಗಿದೆ ಎಂದು ಬೆಂಗಳೂರಿನ ಹೊರವಲಯದ ಆನೇಕಲ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ರಾಹುಲ್ ಹೇಳಿದರು.












Click it and Unblock the Notifications