ಅರ್ಧ ವರ್ಷ ಕಳೆದರೂ ಬರ ಪರಿಹಾರ ಕೊಡದೇ ಕಾಲಹರಣ: ತ್ರಿಶಂಕು ಸ್ಥಿತಿಯಲ್ಲಿ ರೈತ: ಬಿಜೆಪಿ
ಬೆಂಗಳೂರು, ಜನವರಿ 20: ಕರ್ನಾಟಕ ರೈತರಿಗೆ ಬರ ಪರಿಹಾರ ನೀಡದ ಈ ರಾಜ್ಯ ಸರ್ಕಾರದ ಫ್ರೂಟ್ಸ್ ಡಾಟಾಬೇಸ್ ನಲ್ಲಿ ರೈತರ ಮಾಹಿತಿ ಹಾಕುವುದು ಇನ್ನು ಬಾಕಿ ಇದೆ. ಅರ್ಧ ವರ್ಷ ಕಳೆದರೂ ಪರಿಹಾರ ನೀಡದೇ ಬರಿ ಹೇಳಿಕೆಗಳಲ್ಲಿಯೇ ಕಾಲಹರಣ ಮಾಡಲಾಗುತ್ತದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಅವರು ದೂರಿದರು.
ಬರ ಪರಿಹಾರ ಕುರಿತು ರಾಜ್ಯ ಸರ್ಕಾರದ ವಿರುದ್ಧ ಶನಿವಾರ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಬರಗಾಲ ಎದುರಾಗಿ 7 ತಿಂಗಳು ಆಯಿತು. ಆರು ತಿಂಗಳಿನಿಂದ ಮೀನ ಮೇಷ ಎಣಿಸಿ ಬರ ಪರಿಹಾರ ಕೊಡಲೂ ಬೇಡವೋ ಅಂತ ಅರೆ ಮನಸ್ಸಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ನವೆಂಬರ್ ನಲ್ಲಿ ಪ್ರತಿ ಎಕರೆಗೆ 2,000 ರೂಪಾಯಿ ಬರ ಪರಿಹಾರ ಘೋಷಣೆ ಮಾಡಿದರು. ಈಗ ಘೋಷಣೆ ಮಾಡಿ 2 ತಿಂಗಳಾದರೂ ಇನ್ನೂ ಒಂದು ಬಿಡಿಗಾಸು ರೈತರಿಗೆ ತಲುಪಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಡಾಟಾಬೇಸ್ನಲ್ಲಿ ರೈತರ ಮಾಹಿತಿ ಅಳವಡಿಕೆ ಬಾಕಿ
ಪರಿಹಾರ ಪಡೆಯಲು ಸರ್ಕಾರದ ಫ್ರೂಟ್ಸ್ ಡಾಟಾಬೇಸ್ ನಲ್ಲಿ ರೈತರ ಮಾಹಿತಿ ದಾಖಲು ಮಾಡಬೇಕಿದ್ದು ಇನ್ನೂ ಶೇಕಡಾ 25ರಷ್ಟು ರೈತರ ಮಾಹಿತಿ ದಾಖಲು ಮಾಡಬೇಕಿದೆ. ವಾರಕ್ಕೊಮ್ಮೆ ಸಭೆ ನಡೆಸುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇನ್ನೊಂದು ವಾರದೊಳಗೆ ಮೊದಲ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಬರೀ ಹೇಳಿಕೆಗಳಲ್ಲೇ ಕಾಲಾಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರೆಂಟಿಗಳಿಂದ ಭೊಕ್ಕಸ ಖಾಲಿ
ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗಿದೆ ಎಂದು ಆರೋಪಿಸಿದ ಆರ್. ಅಶೋಕ್ ಅವರು, ಸರ್ಕಾರ ರೈತರ ವಿಷಯದಲ್ಲಿ ಚೆಲ್ಲಾಟ ಆಡುತ್ತಾ ಸತಾಯಿಸುತ್ತಿದೆ ಎಂಬ ಅನುಮಾನ ಬರುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ ಬೆಳೆ ಸಮೀಕ್ಷೆ ಅನುಮೋದನೆ ಆಗಿಲ್ಲದ್ದರಿಂದ ಅತ್ತ ಬರ ಪರಿಹಾರವೂ ಸಿಗದೆ ಇತ್ತ ಬೆಂಬಲ ಬೆಲೆಗೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಲೂ ಆಗದ ಪರಿಸ್ಥಿತಿಯಲ್ಲಿ ನೂರಾರು ರೈತರು ಸಿಲುಕಿದ್ದಾರೆ ಎಂದು ವಿವರಿಸಿದರು.

ಸರ್ಕಾರದ ಸೌಲಭ್ಯ ಪಡೆಯಲು ಪಹಣಿಯಲ್ಲಿ ಬೆಳೆ ನಮೂದಾಗಿರಬೇಕು. ಲಕ್ಷಾಂತರ ರೈತರು ತಾವಾಗಿಯೇ ಅಪ್ಲೋಡ್ ಮಾಡಿರುವ ಮಾಹಿತಿಯನ್ನು ಸೂಪರ್ವೈಸರ್ ಗಳು ಅನುಮೋದನೆ ಮಾಡಿಲ್ಲ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ತ್ರಿಶಂಕು ಸ್ಥಿತಿಯಲ್ಲಿ ರೈತರು: ಬಿಜೆಪಿ
ಸರ್ಕಾರದ ಈ ಬೇಜವಾಬ್ದಾರಿ, ಗೊಂದಲಕಾರಿ ನೀತಿಗಳಿಂದ ಸಂಕಷ್ಟದಲ್ಲಿರುವ ರೈತರು ತ್ರಿಶಂಕು ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗೊಂದಲ ನಿವಾರಿಸಿ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಬೆಂಬಲ ಬೆಲೆ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆರ್ ಅಶೊಕ್ ಅವರು ಆಗ್ರಹಿಸಿದರು.












Click it and Unblock the Notifications