ಸಿದ್ದರಾಮಯ್ಯ ಹಿಂದೂ ಧರ್ಮ ಒಡೆದ ಭಸ್ಮಾಸುರ: ಆರ್.ಅಶೋಕ್ ಟೀಕೆ
ಬೆಂಗಳೂರು, ಮೇ 5: ಸಿದ್ದರಾಮಯ್ಯ ಅವರು ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತಿ ಅವರನ್ನು ಬೇರೆ ಮಾಡಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಒಂದು ರೀತಿಯಲ್ಲಿ ಭಸ್ಮಾಸುರ ಇದ್ದ ಹಾಗೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದರು.
ಶನಿವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಮಾತು ಮಂಥನ ಸಂವಾದದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗಾಗಲೇ ಜನತಾದಳವನ್ನು ಮುಳುಗಿಸಿ ಕಾಂಗ್ರೆಸ್ಗೆ ಸೇರಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ನೋಡಿದರೆ ಕಾಂಗ್ರೆಸ್ ನಿದ್ದೆ ಮಾಡುತ್ತಲೇ ಇದೆ ಇನ್ನು ಅಭಿವೃದ್ಧಿ ಎಲ್ಲಿಂದಾಗಬೇಕು. ರಾಜಕೀಯ ಕೊಲೆಗಳು, ರೈತರ ಆತ್ಮಹತ್ಯೆ ಮಿತಿ ಮೀರಿದೆ. ಆದರೆ ಯಡಿಯೂರಪ್ಪ ಸರ್ಕಾರ ಬಂದರೆ ಇದೆಲ್ಲವೂ ಅಭಿವೃದ್ಧಿಯಾಗುತ್ತದೆ.
ಕ್ಷೇತ್ರ ಪರಿಚಯ: ಪದ್ಮನಾಭನಗರಕ್ಕೆ ಮತ್ತೆ ಅಶೋಕ್ ಸಾಮ್ರಾಟ್ ಆಗುತ್ತಾರಾ?
ಮಹದಾಯಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿ, ಇಲ್ಲಿರುವುದು ಕಾಂಗ್ರೆಸ್ ಸರ್ಕಾರ. ಈ ಸಮಸ್ಯೆಯನ್ನು ಈ ಸರ್ಕಾರವೇ ಬಗೆ ಹರಿಸಬೇಕು. ಅವರು ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಈಗಾಗಲೇ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅದರಂತೆ ನಮ್ಮ ಸರ್ಕಾರ ಬಂದ ಮೇಲೆ ಈ ಸಮಸ್ಯೆ ಬಗ್ಗೆ ಖಂಡಿತವಾಗಿಯೂ ಬಗೆ ಹರಿಸುತ್ತೇವೆ ಎಂದರು.
ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಎದುರಿಟ್ಟುಕೊಂಡು ಚುನಾವಣಾ ಕಣದಲ್ಲಿ ಇಳಿದಿದ್ದೇವೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಮಾಡುತ್ತೇವೆ, ಕೇಂದ್ರ ಸರ್ಕಾರ ಒಂದೇ ರಾಜ್ಯಕ್ಕೆ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಸರ್ಕಾರ ಇರುವ ರಾಜ್ಯದಲ್ಲಿ ಸಾಲ ಮನ್ನಾ ಮಾಡಲಾಗಿದೆ ಎಂದರು.