ಬೆಂಗಳೂರಿನಲ್ಲಿ ಸುಗುಣೇಂದ್ರ ತೀರ್ಥರ ಚಾತುರ್ಮಾಸ್ಯ ವ್ರತ
ಬೆಂಗಳೂರು, ಜುಲೈ 27 : ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 42ನೇ ಚಾತುರ್ಮಾಸ್ಯ ವ್ರತಾಚರಣೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 31ರಿಂದ ಆರಂಭಗೊಳ್ಳುವ ಶ್ರೀಗಳ ಚಾತುರ್ಮಾಸ್ಯ ವ್ರತ ಸೆಪ್ಟಂಬರ್ 16ರವರೆಗೆ ನಡೆಯಲಿದೆ.
ಭಾನುವಾರ 31 ಜುಲೈ 2016ರ ಸಂಜೆ 4 ಗಂಟೆಗೆ ಪುತ್ತಿಗೆ ಶ್ರೀಗಳ ಪುರಪ್ರವೇಶ ನಡೆಯಲಿದ್ದು, ವೈಭವೋಪೇತ ಶೋಭಾಯಾತ್ರೆಯೊಂದಿಗೆ ಶ್ರೀಪಾದರನ್ನು ಸ್ವಾಗತಿಸಲಾಗುವುದು. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶ್ರೀಗೋವರ್ಧನ ಕೃಷ್ಣನ ಸನ್ನಿಧಿಯಲ್ಲಿ ಶ್ರೀಗಳು ಚಾತುರ್ಮಾಸ್ಯ ವ್ರತ ದೀಕ್ಷೆ ಕೈಗೊಳ್ಳಲಿದ್ದಾರೆ.
ಸಂಜೆ ನಡೆಯುವ ಶ್ರೀಗಳ ಪುರಪ್ರವೇಶ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ವಿದ್ವಾನ್ ಎ. ಹರಿದಾಸ್ ಭಟ್, ಇಸ್ಕಾನ್ ಮುಖ್ಯಸ್ಥರಾದ ಮಧುಪಂಡಿತ ದಾಸ್, ಹಿರಿಯ ನ್ಯಾಯವಾದಿಗಳಾದ ಬಿ.ವಿ, ಆಚಾರ್ಯ, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಬೆಂಗಳೂರು ಮೇಯರ್ ಮಂಜುನಾಥ ರೆಡ್ಡಿ, ಶಾಸಕರಾದ ರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. [ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ]

ಶ್ರೀಗಳಿಂದ ಈಶಾವಾಸ್ಯೋಪನಿಷದ್ ಭಾಷ್ಯ : ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ 8 ಗಂಟೆವರೆಗೆ ಶ್ರೀಗೋವರ್ಧನ ಕೃಷ್ಣನ ಸನ್ನಿಧಿಯಲ್ಲಿ ಪುತ್ತಿಗೆ ಶ್ರೀಪಾದರು ಭಕ್ತವೃಂದಕ್ಕೆ 'ಈಶಾವಾಸ್ಯೋಪನಿಷದ್ ಭಾಷ್ಯ'ದ ಪಾಠವನ್ನು ನಡೆಸಿಕೊಡಲಿದ್ದಾರೆ.
'ಗೃಹ ಸಂದರ್ಶನ' ಮನೆ-ಮನೆಗೆ ಗೀತಾ ಸಂದೇಶ
ಚಾತುರ್ಮಾಸ್ಯದ ಅವಧಿಯಲ್ಲಿ ಈ ಬಾರಿ ಶ್ರೀಗಳಿಂದ 'ಗೃಹ ಸಂದರ್ಶನ' ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ನಗರದ ಭಕ್ತರ ಮನೆಗೆ ಭೇಟಿ ನೀಡುವ ಶ್ರೀಗಳು, ಆಯ್ದ ಭಗವದ್ಗೀತಾ ಶ್ಲೋಕದ ಭಾವಾರ್ಥ ಮತ್ತು ಅದರ ಭಗವದ್ ಅರ್ಥವನ್ನೂ ವಿವರಿಸಿ ಹೇಳಲಿದ್ದಾರೆ. ಈ ಮೂಲಕ ಭಕ್ತರ ಮನಸ್ಸು ಮತ್ತು ಹೃದಯಲ್ಲಿ ಭಕ್ತಿಯ ಬೀಜವನ್ನು ಬಿತ್ತಲಿದ್ದಾರೆ. ಮನೆ-ಮನದಲ್ಲೂ ಭಗವದ್ಗೀತೆಯ ಸಂದೇಶವನ್ನು ಸಾರಲಿದ್ದಾರೆ. ಜತೆಗೆ ಚಾತುರ್ಮಾಸ್ಯದ ಅವಧಿಯಲ್ಲಿ ನಗರದ ವಿವಿಧ ಮಠಮಂದಿರಗಳಿಗೆ ಶ್ರೀಗಳು ಭೇಟಿ ನೀಡಲಿದ್ದು, ವಿವಿಧ ವಿಚಾರಗಳಿಗೆ ಸಂಬಂಧಿಸಿದ ಉಪನ್ಯಾಸ ಮಾಲಿಕೆಗಳು ಸಂಪನ್ನಗೊಳ್ಳಲಿವೆ. [ನ್ಯೂಜೆರ್ಸಿಯಲ್ಲಿ ಅಯುತ ಶ್ರೀ ವೇದೋಕ್ತ ಧನ್ವಂತರಿ ಯಾಗ]
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ರೀಪತಿ ಉಪಾಧ್ಯಾಯ
ದೂ: 77601 22545
ಕಚೇರಿ: 080-2660 5042












Click it and Unblock the Notifications