ಐಟಿ ದಾಳಿ ಕುರಿತು ಪತ್ರಕರ್ತರ ಪ್ರಶ್ನೆಗಳು: ಪುನೀತ್ ರಾಜ್ಕುಮಾರ್ ವಿನಯಪೂರ್ವಕ ಉತ್ತರಗಳು
ಬೆಂಗಳೂರು, ಜನವರಿ 05: ಐಟಿ ದಾಳಿ ಬಗ್ಗೆ ಮೊದಲ ಬಾರಿಗೆ ನಟ ಪುನೀತ್ ರಾಜ್ಕುಮಾರ್ ಅವರು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ, ನಮ್ಮ ಕುಟುಂಬವೂ ಸಹ ಸಹಕಾರ ನೀಡಿದೆ ಎಂದು ಹೇಳಿದ್ದಾರೆ.
ಐಟಿ ದಾಳಿ ಆಗಿರುವ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದ ಪುನೀತ್, ಈ ರೀತಿಯ ದಾಳಿಗಳು ನಡೆದಾಗ ನಾಗರೀಕನಾಗಿ ಸಹಕಾರ ತೋರಬೇಕಿರುವುದು ನನ್ನ ಧರ್ಮ ಅಂತೆಯೇ ತೋರಿದ್ದೇವೆ, ಅಧಿಕಾರಿಗಳು ಸಹ ಸೌಮ್ಯದಿಂದಲೇ ವರ್ತಿಸಿದ್ದಾರೆ ಎಂದರು.
ನಗು-ನಗುತ್ತಲೇ ಮಾಧ್ಯಮದವರೊಟ್ಟಿಗೆ ಮಾತನಾಡಿದ ಪುನೀತ್, ದೂರು ಬಂದ ಕಾರಣಕ್ಕೆ ಅಥವಾ ಸ್ವ ಅನುಮಾನದ ಮೇಲೆ ವ್ಯಾಪಾರಿಗಳು, ಕಲಾವಿದರ ಮೇಲೆ ದಾಳಿಗಳನ್ನು ಮಾಡುವುದು ಐಟಿ ಅಧಿಕಾರಿಗಳಿಗೆ ಸಾಮಾನ್ಯ, ಹಾಗೆಯೇ ಇದು ಸಹ ಸಾಮಾನ್ಯ ದಾಳಿಯಷ್ಟೆ ಎಂದು ಅವರು ಹೇಳಿದರು.
ಬಿಗ್ ಬಜೆಟ್ ಚಿತ್ರಗಳಲ್ಲಿ ತೊಡಗಿಕೊಂಡವರ ಮೇಲಷ್ಟೆ ದಾಳಿಗಳಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಹಾಗೇನೂ ಇಲ್ಲ ಎಂದೆನಿಸುತ್ತದೆ. ಐಟಿ ಅಧಿಕಾರಿಗಳು ಆ ಉದ್ದೇಶದಿಂದ ದಾಳಿ ಮಾಡಿಲ್ಲ ಎಂದಷ್ಟೆ ಉತ್ತರಿಸಿದರು.

ಐಟಿ ದಾಳಿ ಇದು ಮೊದಲೇನಲ್ಲ
ನಮ್ಮ ಮನೆಯ ಮೇಲೆ ಐಟಿ ದಾಳಿ ಇದು ಮೊದಲೇನಲ್ಲ, ಈ ಮೊದಲು 1984 ರಲ್ಲಿ ನಮ್ಮ ಚೆನ್ನೈನ ಮನೆಯ ಮೇಲೆ ಐಟಿ ದಾಳಿ ಆಗಿತ್ತು, ಬೆಂಗಳೂರಿನ ಕಚೇರಿ, ಫಾರ್ಮ್ ಹೌಸ್ ಮೇಲೂ ದಾಳಿಗಳಾಗಿತ್ತು. ಆಗಲೂ ಸಹ ನಾವು ಸರಿಯಾಗಿ ತೆರಿಗೆ ಪಾವತಿಸಿದ್ದೆವು ಎಂದು ಪುನೀತ್ ಹೇಳಿದರು.

ಪತ್ರಕರ್ತನ ಉದ್ಧಟತನದ ಪ್ರಶ್ನೆ
ಪುನೀತ್ ರಾಜ್ಕುಮಾರ್ ಅವರು ಎರಡು ವರ್ಷದಿದ ಐಟಿ ರಿಟರ್ನ್ಸ್ ಸಲ್ಲಿಸಿಲ್ಲವೆಂದು ಐಟಿ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ ಇದು ನಿಜವೇ? ಎಂಬ ಪತ್ರಕರ್ತನೋರ್ವನ ಉದ್ಧಟತನದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಪುನೀತ್, ಹಾಗೊಂದು ವೇಳೆ ನಿಮಗೆ ಮಾಹಿತಿ ಇದ್ದರೆ ಕೇಸು ದರ್ಜು ಮಾಡಿ, ಅಥವಾ ನಿಮ್ಮ ವಾಹಿನಿಯಲ್ಲಿ ಪ್ರೋಗ್ರಾಮ್ ಸಹ ಮಾಡಬಹುದು ಎಂದರು.

ನಟಸಾರ್ವಭೌಮ ಆಡಿಯೋ ಬಿಡುಗಡೆಗೆ ಹಾಜರು
ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ನಟಸಾರ್ವಭೌಮ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ. ಐಟಿ ದಾಳಿ ಪೂರ್ಣವಾಗಿದ್ದು, ಅವರು ನೊಟೀಸ್ ನೀಡಿದಾಗ ನಾನು ಮತ್ತು ಕುಟುಂಬದವರು ಹೋಗಿ ಹೇಳಿಕೆ ನೀಡುತ್ತೇವೆ ಎಂದು ಅವರು ಹೇಳಿದರು.

ಹಲವು ನಟರ ಮನೆ ಮೇಲೆ ದಾಳಿ
ಗುರುವಾರ ಬೆಳಿಗ್ಗೆ ಪುನೀತ್ ರಾಜ್ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜ ನಟರು ಹಾಗೂ ನಿರ್ಮಾಪಕರುಗಳ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಪುನೀತ್ ಅವರ ಮನೆಯನ್ನು ಸತತ 48 ಗಂಟೆಗಳ ಕಾಲ ತಪಾಸಣೆ ನಡೆಸಲಾಯಿತು.












Click it and Unblock the Notifications