ಅಡುಗೆ ಭಟ್ಟನ ಸೋಗಿನಲ್ಲಿದ್ದ ನೇಪಾಳಿ ಮನೆಗಳ್ಳನ ಬಂಧನ
ಬೆಂಗಳೂರು, ಜ, 13: ಆತ ಮೊದಲು ಅಡುಗೆ ಭಟ್ಟನಾಗಿ ಮನೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ, ಮನೆಯವರ ವಿಶ್ವಾಸ ಗಳಿಸುತ್ತಿದ್ದ, ನಂತರ ಅವಕಾಶ ಸಿಕ್ಕಾಗ ಮನೆಯಲ್ಲಿದ್ದ ಹಣ ಮತ್ತು ಆಭರಣ ದೋಚಿ ಪರಾರಿಯಾಗುತ್ತಿದ್ದ.
ನಗರದ ಅನೇಕ ಕಡೆ ಮನೆಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ನೇಪಾಳ ಮೂಲದ ಮಹೇಶ್ (24) ಎಂಬಾತನನ್ನು ಬಂಧಿಸಿರುವ ಪುಲಕೇಶಿನಗರದ ಪೊಲೀಸರು 1 ಕೋಟಿ 50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಸೇರಿದಂತೆ 7.5 ಲಕ್ಷ ರೂ. ನಗದು ವಶ ಪಡಿಸಿಕೊಂಡಿದ್ದಾರೆ.[ಬೆಂಗಳೂರಿನಲ್ಲಿ ಸರಗಳ್ಳನಿಗೆ ಪೊಲೀಸರಿಂದ ಗುಂಡೇಟು]
ಪುಲಕೇಶಿನಗರ ಠಾಣಾ ವ್ಯಾಪ್ತಿಯ ವೇರ್ ರಸ್ತೆ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸರಿರುವ ರಂಜನ್ ಬಿಸ್ವಾಸ್ ಎಂಬುವವರ ಮನೆಯಲ್ಲಿ ಮಹೇಶ್ ಅಡುಗೆ ಕೆಲಸ ಮಾಡಿಕೊಂಡಿದ್ದ. ಸಂದರ್ಭ ನೋಡಿ ಚಿನ್ನ ಮತ್ತು ನಗದು ಕಳ್ಳತನ ಮಾಡಿ ನಾಪತ್ತೆಯಾಗಿದ್ದ. ಈ ಬಗ್ಗೆ ರಂಜನ್ ಬಿಸ್ವಾಸ್ ಪುಲಕೇಶಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಮಾಹಿತಿ ಬೆನ್ನು ಹತ್ತಿ, ಉತ್ತರಾಖಂಡ್, ಉತ್ತರಪ್ರದೇಶ ಹಾಗೂ ನೇಪಾಳಕ್ಕೆ ತೆರಳಿದ್ದರು. ನಂತರ ಆರೋಪಿಯನ್ನು ನಗರದ ಹೊರವಲಯದ ಹೊರಮಾವು ಸಿಗ್ನಲ್ ಬಳಿ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದಾಗ ಅನೇಕ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದವು.[ಬೆಂಗಳೂರು : ಟೆಕ್ಕಿಗೆ ಚಾಕುವಿನಿಂದ ಇರಿದು ದರೋಡೆ]
ಉಪ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುಲಕೇಶಿನಗರ ಉಪ ವಿಭಾಗದ ಎಸಿಪಿ ಬಿ. ನೂರುಲ್ಲಾಷರೀಫ್ ರವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಪುಲಕೇಶಿನಗರ ಇನ್ಸ್ ಪೆಕ್ಟರ್ ಹೆಚ್.ಜೆ.ತಿಪ್ಪೇಸ್ವಾಮಿ, ಜಿ.ನಾರಾಯಣಸ್ವಾಮಿ, ದಯಾನಂದ, ಅಪರಾಧ ಪತ್ತೆ ವಿಭಾಗದ ಎ.ಎಸ್.ಐ. ಬಾಲನಾಯಕ್, ಸುರೇಶ್, ರಾಜಾಸಾಬ್, ಸೈಯ್ಯದ್ ಮೋಯಿನುಲ್ಲಾ, ರಾಜಾನಾಯಕ್, ಸುನೀಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.