ಸರ್ಕಾರಿ ಆದೇಶವಿದ್ದರೂ ಬೆಂಗಳೂರಲ್ಲಿ ಪಬ್, ಬಾರ್ ಓಪನ್
ಬೆಂಗಳೂರು, ಮಾರ್ಚ್ 16 : ಕೊರೊನಾ ಹರಡದಂತೆ ತಡೆಯಲು ಪಬ್, ನೈಟ್ ಕ್ಲಬ್, ಮಾಲ್ಗಳನ್ನು ಮುಚ್ಚುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿತ್ತು. ಆದರೆ, ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಕೆಲವು ಪಬ್, ಬಾರ್ಗಳು ಬಾಗಿಲು ತೆರೆದಿದ್ದವು.
ಪಬ್, ಬಾರ್, ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶ ಗೊಂದಲಕ್ಕೆ ಕಾರಣವಾಗಿತ್ತು. ಶನಿವಾರ ಸಿಎಲ್ - 9 ಲೈಸೆನ್ಸ್ ಹೊಂದಿರುವವರು ಬಾಗಿಲು ತೆರೆಯಬಹುದು ಎಂದು ಹೇಳಿತ್ತು. ಆದರೆ, ಪೊಲೀಸರು ಅವುಗಳ ಬಾಗಿಲು ಹಾಕಿಸಿದರು.
ಅಬಕಾರಿ ನಿಯಮಗಳ ಪ್ರಕಾರ ಪಬ್, ಬಾರ್, ಬಾರ್ ಅಂಡ್ ರೆಸ್ಟೋರೆಂಟ್ಗಳನ್ನು ಹಲವು ವಿಧಗಳಾಗಿ ವಿಂಗಡನೆ ಮಾಡಲಾಗಿದೆ. ಸಿಎಲ್-4 ಲೈಸೆನ್ಸ್ (ಕ್ಲಬ್), ಪಬ್ಗಳನ್ನು ಬಂದ್ ಮಾಡಲಾಗಿದೆ. ಆದರೆ, ಸಿಎಲ್ -7 ಲೈಸೆನ್ಸ್ ಹೊಂದಿರುವ (ಹೋಟೆಲ್&ಬೋರ್ಡಿಂಗ್ ಹೌಸ್) ಮುಚ್ಚಿರಲಿಲ್ಲ.

ಬೆಂಗಳೂರು ನಗರದ ಹಲವು ಕಡೆ ಸಿಎಲ್-9 ಲೈಸೆನ್ಸ್ ಹೊಂದಿರುವ (ಬಾರ್, ರೆಸ್ಟೋರೆಂಟ್) ಶನಿವಾರ ಮತ್ತು ಭಾನುವಾರ ತೆರೆದಿದ್ದವು. ವೀಕೆಂಡ್ ಮೋಜು-ಮಸ್ತಿ ಮಾಡುವ ಜನರು ಬಾರ್ಗಳಿಗೆ ಲಗ್ಗೆ ಇಟ್ಟಿದ್ದರು. ಸರ್ಕಾರದ ಆದೇಶವನ್ನು ಮಾಲೀಕರು ಪಾಲಿಸುವುದಿಲ್ಲವೇ?.
ಕೊರೊನಾ ಸೋಂಕಿಗೆ ಮೊದಲ ಬಲಿ ಕರ್ನಾಟಕದಲ್ಲಿ ಆಗಿತ್ತು. ಕಲಬುರಗಿಯಲ್ಲಿ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದ ಅವರ ನಾಲ್ವರು ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿನ 6 ಪ್ರಕರಣಗಳು ಇದುವರೆಗೂ ದೃಢಪಟ್ಟಿವೆ.
ಕರ್ನಾಟಕ ಸರ್ಕಾರ ಶುಕ್ರವಾರ ಹೊರಡಿಸಿದ ಆದೇಶದಂತೆ ಮಾರ್ಚ್ 14ರ ಶನಿವಾರದಿಂದ ಒಂದು ವಾರಗಳ ಕಾಲ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ, ಪಬ್, ನೈಟ್ ಕ್ಲಬ್ ಮುಚ್ಚಲಾಗಿದೆ. ಜನಸಂದಣಿ ಸೇರುವ ಸಮಾವೇಶ, ವಿವಾಹ, ಜಾತ್ರೆ, ಸಂತೆ ನಡೆಸದಂತೆ ಸೂಚನೆ ನೀಡಲಾಗಿದೆ.
ರಾಜ್ಯಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಗಿದ್ದು, ಸಾರಿಗೆ ಸಂಸ್ಥೆಗಳಿಗೆ, ಟ್ರಕ್ ಮಾಲೀಕರಿಗೆ ಅಪಾರವಾದ ನಷ್ಟ ಉಂಟಾಗುತ್ತಿದೆ.












Click it and Unblock the Notifications