ಶಾಸಕ ಬಸವರಾಜ ದಢೇಸೂಗೂರು ಲಂಚದ ವಿಡಿಯೋ ಬಹಿರಂಗ ಮಾಡಿದ ಕಾಂಗ್ರೆಸ್
ಬೆಂಗಳೂರು, ಸೆಪ್ಟೆಂಬರ್ 12: ತನ್ನ ಮಗನನ್ನು ಪಿಎಸ್ಐ ಮಾಡಲು ಪರಸಪ್ಪ ಎಂಬುವವರು ಶಾಸಕ ಬಸವರಾಜ ದಢೇಸೂಗೂರು ಅವರಿಗೆ 15 ಲಕ್ಷ ನೀಡಿದ್ದರ ಬಗ್ಗೆ ಆರೋಪಗಳು ಕೇಳಿಬಂದಿದ್ದವರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಪರಸಪ್ಪ ಮಾತನಾಡಿದ್ದು ಪರಸಪ್ಪ ಶಾಸಕರ ಮೇಲೆ ಆರೋಪಿಸಿದ್ದಾರೆ.
ಪರಸಪ್ಪ ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್ ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ. ವ್ಯವಹಾರ ಮಾಡಿ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.
ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರ ಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದಿದ್ದಾರೆ.
ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರುಗಳು ಸಚಿವರುಗಳಿಗೆ ಬ್ರೋಕರ್ ಗಳಾಗಿದ್ದಾರೆ. ಬಿಜೆಪಿ ಭಾರತೀಯ ಜನತಾ ಪಕ್ಷದಿಂದ ಭ್ರಷ್ಟ ಜನತಾ ಪಕ್ಷವಾಗಿತ್ತು. ಈಗ ಶಾಸಕರು ಬ್ರೋಕರ್ ಜನತಾ ಪಕ್ಷವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಇಷ್ಟೆಲ್ಲಾ ಆದರೂ ಶಾಸಕರಿಗೆ ನೋಟೀಸ್ ಹೋಗಿಲ್ಲ. ಸುಮೋಟೋ ಪ್ರಕರಣ ದಾಖಲಾಗಿಲ್ಲ. ಮುಖ್ಯಮಂತ್ರಿಗಳು ಶಾಸಕರನ್ನು ಕರೆದು ಪ್ರಶ್ನೆ ಮಾಡಿಲ್ಲ ಯಾಕೆ? ಆಗ ಗೃಹಮಂತ್ರಿಯಾಗಿದ್ದವರು ಬೊಮ್ಮಾಯಿ ಅವರೇ ಅಲ್ಲವೇ? ಬೊಮ್ಮಾಯಿ ಅವರು ದೊಡ್ಡಬಳ್ಳಾಪುರದಲ್ಲಿ ಧೈರ್ಯ, ತಾಕತ್ತು, ಧಮ್ಮಿನ ವಿಚಾರವಾಗಿ ಮಾತನಾಡಿದರು. ನಿಮಗೆ ಧಮ್ಮಿದ್ದರೆ ಶಾಸಕರನ್ನು ಕರೆಸಿ, ಪರೀಕ್ಷೆ ಬರೆದ ಯುವಕರು, ನಿರುದ್ಯೋಗಿ ಯುವಕರ ಮುಂದೆ ಈ ವಿಚಾರ ಪ್ರಸ್ತಾಪಿಸಿ. ಶಾಸಕರು ಯಾಕೆ 15 ಲಕ್ಷ ಪಡೆದರು? ಸರ್ಕಾರಿ ಹುದ್ದೆಗಳನ್ನು ಯಾಕೆ ಮಾರಾಟ ಮಾಡಿದ್ದಾರೆ ಎಂದು ಯುವಕರ ಮುಂದೆ ಹೇಳಿ. ನಿಮ್ಮ ಯೋಗ್ಯತೆಗೆ ಒಬ್ಬರಿಗೆ ಕೆಲಸ ನೀಡಲು ಆಗಿಲ್ಲ, ನೀವು ಧಮ್ಮು ತಾಕತ್ತು ಬಗ್ಗೆ ಮಾತನಾಡುತ್ತೀರಾ? ಯಾವ ಜನಸ್ಪಂದನ ನಿಮ್ಮದು, ನೀವು ಕೇವಲ ಭ್ರಷ್ಟಾಚಾರಕ್ಕೆ ಸ್ಪಂದಿಸುತ್ತೀರ ಎಂದು ಶಾಸಕ ಪ್ರಿಯಾಂಕ ಖರ್ಗೆ ಗುಡುಗಿದ್ದಾರೆ.

ನ್ಯಾಯಾಂಗ ತನಿಖೆ ನೀಡಿ
ಸುಮೋಟೋ ಪ್ರಕರಣ ಯಾಕೆ ದಾಖಲಿಸಿಲ್ಲ? ಸರ್ಕಾರ ಈ ವಿಚಾರವಾಗಿ ಸದನದಲ್ಲಿ ಉತ್ತರಿಸಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಐಪಿಎಸ್ ಜೈಲಿಗೆ ಹೋಗಿರುವುದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದೀರಿ? ಹಣ ಕೊಟ್ಟವರು ಹಾಗೂ ತೆಗೆದುಕೊಂಡವರು ಸತ್ಯಾಂಶ ಒಪ್ಪಿಕೊಂಡರೂ ಅವರಿಗೆ ನೊಟೀಸ್ ಯಾಕೆ ನೀಡಿಲ್ಲ? ನಾನು ಸಾರ್ವಜನಿಕ ವಲಯದಲ್ಲಿದ್ದ ಸಾಕ್ಷಿ ಮುಂದಿಟ್ಟರೆ ನನಗೆ ನೊಟೀಸ್ ನೀಡುತ್ತೀರಿ. ಇವರಿಗೆ ನೊಟೀಸ್ ನೀಡಲು ಆಗುವುದಿಲ್ಲವೇ? ಈ ಇಬ್ಬರೂ ತಪ್ಪು ಒಪ್ಪಿಕೊಂಡಿದ್ದು, ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿ. ಎಡಿಜಿಪಿ ಹಲವು ದಿನಗಳಿಂದ ನಾನು ಎಲ್ಲವನ್ನು ನ್ಯಾಯಾಧೀಶರ ಮುಂದೆ ಹೇಳಲು ಸಿದ್ಧ ಎಂದು ಹೇಳುತ್ತಿದ್ದರೂ ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ ಯಾಕೆ? ಕಾಂಗ್ರೆಸ್ ಹೆಸರು ಬರುತ್ತದೆ ಎಂದು ಹೇಳುತ್ತಿದ್ದೀರಿ. ಬರಲಿ ಬಿಡಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ. ನಿಮ್ಮ ಶಾಸಕರುಗಳು 10 ಅಭ್ಯರ್ಥಿಗಳನ್ನು ಬುಕ್ ಮಾಡಿದ್ದಾರಂತೆ. ಒಬ್ಬ ಅಭ್ಯರ್ಥಿ ಬಂಧನವಾದಾಗ ನಿಮ್ಮ ಸಚಿವರು ಆತನನ್ನು ಬಿಡುಗಡೆ ಮಾಡಿಸಿದ್ದು ಯಾಕೆ? ನ್ಯಾಯಾಂಗ ತನಿಖೆ ನೀಡಿ ಎಂದು ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.

ನ್ಯಾಯಯುತವಾಗಿ ಪರೀಕ್ಷೆ ಬರೆದವರ ಹೋರಾಟ
ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರು ನಮ್ಮ ಬಳಿ ವಿಧಿವಿಜ್ಞಾನ ಅತ್ಯಧುನಿಕ ತಂತ್ರಜ್ಞಾನ ಇದ್ದು ಯಾರು ಪ್ರಾಮಾಣಿಕರು, ಯಾರು ಅಲ್ಲ ಎಂದು ನಮಗೆ ತಿಳಿಯುತ್ತದೆ. ಪ್ರಾಮಾಣಿಕರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಆನಂತರ ಮರು ಪರೀಕ್ಷೆ ಎಂದು ಹೇಳಿ ಅವರನ್ನು ಗೊಂದಲಕ್ಕೆ ಸಿಲುಕಿಸಿದ್ದೀರಿ. ಹೀಗಾಗಿ ನ್ಯಾಯಯುತವಾಗಿ ಪರೀಕ್ಷೆ ಬರೆದವರು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರ ಏನು ಮಾಡುತ್ತಿದೆ? ನಿಮ್ಮ ಧಮ್ಮು ತಾಕತ್ತು ಈ ಯುವಕರ ಮುಂದೆ ತೋರಿಸಿ ಎಂದು ಆಗ್ರಹಿಸುತ್ತೇವೆ. ಶಾಸಕರು ಈಗ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲಿ ಎಂದು ಹೇಳುತ್ತಿದ್ದು, ಆರಂಭದಲ್ಲಿ ಇದು ನಂದೇ ಧ್ವನಿ ಎಂದು ಒಪ್ಪಿಕೊಂಡಿದ್ದು ಯಾಕೆ? ನಂತರ ಆಡಿಯೋದಲ್ಲಿ ನೀವು ಹಣ ಯಾರಿಗೆ ಕೊಟ್ಟಿರಿ ಎಂದು ಕೇಳಿದಾಗ ಅದನ್ನೆಲ್ಲ ಹೇಳಲು ಸಾಧ್ಯವೇ ಎಂದು ಉತ್ತರಿಸಿದ್ದರು. ಆಗಲೇ ಈ ಆಡಿಯೋ, ವಿಡಿಯೋ ನಕಲಿ ಎನ್ನಬುದಾಗಿತ್ತಲ್ಲವೇ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಶಿವರಾಜ್ ತಂಗಡಗಿಯಿಂದ ವಾಗ್ದಾಳಿ
ಕಳೆದ ಒಂದು ವಾರದಿಂದ ನಮ್ಮ ಜಿಲ್ಲೆಯ ಶಾಸಕರೊಬ್ಬರ ಆಡಿಯೋ ವಿಚಾರ ಬಹಳ ಸುದ್ದಿ ಮಾಡುತ್ತಿದೆ. ಸೆ.5ರಂದು ಶಾಸಕರಾದ ಬಸವರಾಜ ದಡೇಸೂರು ಹಾಗೂ ಕುಸ್ಗಿಯ ನಿವೃತ್ತಿ ಕಾನ್ಸ್ಟೇಬಲ್ ಪರಸಪ್ಪ ನಡುವಣ ಸಂಭಾಷಣೆ ವೈರಲ್ ಆಗಿದೆ. ಸೆ.6ರಂದು ಮತ್ತೊಂದು ಆಡಿಯೋ ಬಿಡುಗಡೆ ಆಗಿದ್ದು, ಪರಸಪ್ಪ ಅವರು ಪಿಎಸ್ಐ ನೇಮಕಾತಿಗೆ 15 ಲಕ್ಷ ನೀಡಿರುವುದಾಗಿ ಹೇಳಿದರು. ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಶಾಸಕರು ಒಪ್ಪಿಕೊಂಡರು. ಈಗ ಒಂದು ವಾರ ಆದರೂ ಯಾವುದೇ ತನಿಖೆ ಇಲ್ಲ.ಪರಸಪ್ಪ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡರಿಗೆ ದೂರು ನೀಡಿದರು. ನಂತರ ಅಧ್ಯಕ್ಷರು ಈ ವಿಚಾರವಾಗಿ ಪಕ್ಷ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು. ಇಷ್ಟಾದರೂ ಇಲ್ಲಿಯವರೆಗೂ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಗೃಹ ಸಚಿವರು ಮಾತನಾಡುತ್ತಿಲ್ಲ. ಇದು ಅಕ್ರಮದಲ್ಲಿ ಸರ್ಕಾರದ ಭಾಗಿಗೆ ಸಾಕ್ಷಿ ಆಗಿದ್ದಾರೆ. ನಂತರ ಪರಸಪ್ಪ ಮಾಧ್ಯಮಗೋಷ್ಠಿ ಮಾಡಿ ಈ ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ. ನನ್ನ ಮಗ ದೈಹಿಕ ಪರೀಕ್ಷೆ ಪಾಸಾಗಿಲ್ಲ ಎಂದು ಹೇಳಿದರು.

ಕನಕಗಿರಿಯಲ್ಲಿ15 ಮಂದಿ ಯುವಕರು ನೇಮಕಾತಿಗಾಗಿ ಹಣ
ಈಗ ಶಾಸಕರು ವಿಧಾನಸಭೆ ಮುಂದೆ ಮಾತನಾಡಿ ವಿಡಿಯೋಗಳನ್ನು ಕಟ್ ಪೇಸ್ಟ್ ಮಾಡಿ ತೋರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಪರಸಪ್ಪ ಖುದ್ದಾಗಿ ಮಾತನಾಡಿದ್ದಾರೆ. ಈ ಹಿಂದೆ ಮಹಿಳೆ ವಿಚಾರವಾಗಿ ಆಡಿಯೋ, ವಿಡಿಯೋ ಮಾಧ್ಯಮಗಳಲ್ಲಿ ಬಂದಿತ್ತು. ಆಗ ಮಾಧ್ಯಮಗಳು ನನ್ನ ಪ್ರತಿಕ್ರಿಯೆ ಕೇಳಿದಾಗ ನಾನು ಜಿಲ್ಲಾ ಅಧ್ಯಕ್ಷನಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದೆ. ಕಾರಣ, ಯಾರು ಅನ್ಯಾಯಕ್ಕೆ ಒಳಗಾಗಿದ್ದಾರೋ ಅವರು ನನ್ನ ಬಳಿ ಬಂದು ಮಾತನಾಡಿದರೆ ಅವರಿಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ ಎಂದು ಹೇಳಿದ್ದೆ. ಆದರೆ ಈ ವಿಡಿಯೋದಲ್ಲಿ ನಾನು ಸುಮ್ಮನಿರಲು ಆಗುವುದಿಲ್ಲ. ನನ್ನ ಕನಕಗಿರಿ ಕ್ಷೇತ್ರದಲ್ಲಿ 15 ಮಂದಿ ಯುವಕರು ನೇಮಕಾತಿಗಾಗಿ ಹಣ ನೀಡಿದ್ದಾರೆ ಎಂಬ ಚರ್ಚೆ ಆಗುತ್ತಿದೆ. ಅವರು ಬಡವರಾಗಿದ್ದು, ಮಾಧ್ಯಮಗಳ ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ. ಹೀಗಾಗಿ ಇದು ಪೂರ್ಣ ಪ್ರಮಾಣದ ತನಿಖೆ ಆಗಬೇಕು. ರಾಜ್ಯದಲ್ಲಿ ನೂರಾರು ಮಂದಿ ಈ ವಿಚಾರವವನ್ನು ಹೇಳಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ 40% ಕಮಿಷನ್ ಮುರಿದುಕೊಂಡು ಉಳಿದ ಮೊತ್ತವನ್ನಾದರೂ ನೀಡಿ ಎಂದು ಮನವಿ ಮಾಡುತ್ತೇನೆ.

ರಾಜ್ಯದಲ್ಲಿ ಭ್ರಷ್ಚಾಚಾರ ನಿಗ್ರಹ ಕಾನೂನು ಇದೆ
ರಾಜ್ಯದಲ್ಲಿ ಭ್ರಷ್ಚಾಚಾರ ನಿಗ್ರಹ ಕಾನೂನು ಇದೆ. ಈ ಕಾನೂನು ಪ್ರಕಾರ ಸ್ವಯಂ ಒಫ್ಪಿಗೆ ಮಾತುಗಳು ಸೆಕ್ಷನ್ 7A ಹಾಗು 8ರ ಅಡಿಯಲ್ಲಿ ಬರುತ್ತದೆ. ಸಾರ್ವಜನಿಕ ಪ್ರತಿನಿಧಿ ಅಲ್ಲದಿದ್ದರೂ ಯಾವುದೇ ವ್ಯಕ್ತಿ ಕೆಲಸ ಮಾಡಿಸಿಕೊಡುವುದಾಗಿ ಹಣ ಪಡೆದರೆ ಅದು ಅಪರಾಧವಾಗುತ್ತದೆ. ಹೀಗಾಗಿ ಈ ಆಡಿಯೋ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು. ಈ ಕಾನೂನು ಅಡಿಯಲ್ಲಿ 3 ವರ್ಷದಿಂದ 7 ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಹೀಗಾಗಿ ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೀಗಾಗಿ ಲೋಕಯುಕ್ತ ಸಂಸ್ಥೆ ಹಾಗೂ ಸರ್ಕಾರ ಗಮನಿಸಬೇಕು. ಜತೆಗೆ ಲೋಕಪಾಲ ಮಟ್ಟದಲ್ಲಿ ಈ ವಿಚಾರವನ್ನು ತೆಗೆದುಕೊಂಡು ಶಾಸಕರನ್ನು ಅನರ್ಹಗೊಳಿಸಲು ಮುಂದಾಗಬೇಕು.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications