ಪಿಎಸ್ಐ ಹಗರಣ: ಸಿಐಡಿಯಿಂದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಬಂಧನ
ಬೆಂಗಳೂರು, ಮೇ12: ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳಿಂದ ಡಿವೈಎಸ್ಪಿಯ ಬಂಧನವಾಗಿದೆ. ನೇಮಕಾತಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ವರ್ಗಾವಣೆಗೊಂಡಿದ್ದ ಶಾಂತಕುಮಾರ್ನನ್ನು ಸಿಐಡಿ ತನಿಖಾಧಿಕಾರಿಗಳು ಬಂಧಿಸಲಾಗಿದೆ.
ಪಿಎಸ್ಐ ನೇಮಕಾತಿ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಾಂತಕುಮಾರ್ಗೆ ನೊಟೀಸ್ ಜಾರಿ ಮಾಡಿತ್ತು. ಅಂದರಂತೆ ಹಾಜರಾದ ಡಿವೈಎಸ್ಪಿಯನ್ನು ಬಂಧಿಸಲಾಗಿದ್ದು ಡಿವೈಎಸ್ಪಿ ಬಳಸುತ್ತಿದ್ದ ಮೊಬೈಲ್ ಗಳನ್ನ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಎರಡು ದಿನಗಳಿಂದ ಹಿಂದೆ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿತ್ತು. ಇವರುಗಳ ವಿಚಾರಣೆ ವೇಳೆ ನೀಡಿದ ಹೇಳಿಕೆ ಆಧರಿಸಿ ಡಿವೈಎಸ್ಪಿ ಶಾಂತಕುಮಾರ್ನನ್ನು ಬಂಧಿಸಲಾಗಿದೆ. ಇದರಿಂದ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ನೇಮಕಾತಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಇದೀಗ ವರ್ಗಾವಣೆಯಾಗಿರುವ ಅಮೃತ್ ಪೌಲ್ ಅವರಿಗೂ ವಿಚಾರಣೆ ಬಿಸಿ ತಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಶಾಂತಕುಮಾರ್ ಹಿನ್ನೆಲೆ ಏನು..?
ಡಿವೈಎಸ್ಪಿ ಶಾಂತಕುಮಾರ್ ವರ್ಗಾವಣೆಗೂ ಮುನ್ನ ಒಒಡಿ ಮೇಲೆ ನೇಮಕಾತಿ ವಿಭಾಗದಲ್ಲೇ ಕರ್ತವ್ಯವನ್ನು ಕಾರ್ಯನಿರ್ವಹಿಸುತ್ತಿದ್ದರು. 1996ನೇ ಬ್ಯಾಚ್ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕಾನ್ಸ್ಟೆಬಲ್ ಆಗಿ ಪೊಲೀಸ್ ಸೇವೆಗೆ ಸೇರಿದ್ದರು. 2006 ರಲ್ಲಿ ಆರ್ಎಸ್ಐ ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಿದ್ದರು. ಒಂದು ವರ್ಷ ಕಲಬುರಗಿಯಲ್ಲಿ ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ಹಿಂದೆ ಡಿವೈಎಸ್ಪಿಯಾಗಿ ಮುಂಬಡ್ತಿ ಪಡೆದಿದ್ದ ಶಾಂತಕುಮಾರ್ ಹಲವು ವರ್ಷಗಳ ನೇಮಕಾತಿ ವಿಭಾಗದಲ್ಲಿ ಠಿಕಾಣಿ ಹೂಡಿದ್ದರು.

ಓಎಂಆರ್ ತಿದ್ದುಪಡಿ ಮಾಡಲು ನೆರವಾಗಿದ್ದ
ಪಿಎಸ್ಐ ಪರೀಕ್ಷೆಯನ್ನು ಬರೆದ ಬಳಿಕ ಓಎಂಆರ್ ಅನ್ನು ಸ್ಟ್ರಾಂಗ್ ರೂಮ್ನಲ್ಲಿ ಭದ್ರ ಪಡಿಸಲಾಗಿರುತ್ತೆ. ಕೆಲವರ ಕೈಚಳಕ ನಡೆದಿರೋದು ಸಹ ಇಲ್ಲೇ. ಸ್ಟ್ರಾಂಗ್ ರೂಮ್ನಲ್ಲಿ ಓಎಂಆರ್ ನಲ್ಲಿ ತಿದ್ದುಪಡಿ ಮಾಡಲು ಶಾಂತಕುಮಾರ್ ನೆರವಾಗಿದ್ದರು ಎನ್ನಲಾಗುತ್ತಿದ್ದು. ಅಕ್ರಮದ ವಾಸನೆ ಕೇಳಿಬಂದ ಹಿನ್ನೆಲೆಯಲ್ಲಿ ಬಂಧಿಸಿ ಸಿಐಡಿ ಪೊಲೀಸರು ಶಾಂತಕುಮಾರ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಮಧುಕರ್ ಶೆಟ್ಟಿ ಅವಧಿಯಲ್ಲಿ ಶಾಂತಕುಮಾರ್ ಎತ್ತಂಗಡಿ..
ಹಿರಿಯ ಐಪಿಎಸ್ ಅಧಿಕಾರಿ ದಿವಂಗತ ಮಧಕರ್ ಶೆಟ್ಟಿಯವರು ನೇಮಕಾತಿ ವಿಭಾಗದ ಎಡಿಜಿಪಿಯಗಿದ್ದ ವೇಳೆ ಶಾಂತಕುಮಾರ್ ಸೇರಿದಂತೆ ಅದೆಷ್ಟೋ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ನೇಮಕಾತಿ ವಿಭಾಗವನ್ನು ಕ್ಲೀನ್ ಮಾಡಿದ್ದರು. ಮಧುಕರ್ ಶೆಟ್ಟಿ ಅಲ್ಲಿಂದ ವರ್ಗವಾಗುತ್ತಲೇ ಶಾಂತಕುಮಾರ್ ಸೇರಿದಂತೆ ನೇಮಕಾತಿ ವಿಭಾಗದಿಂದ ವರ್ಗವಾಗಿದ್ದವರು ಮರಳಿ ಗೂಡಿಗೆ ವಾಪಸ್ಸಾಗಿದ್ದರು. ಇದರಿಂದಾಗಿ ಪರೀಕ್ಷೆಗಳ ಅಕ್ರಮ ಇಂದು ನಿನ್ನೆಯದಲ್ಲ ಸಾಕಷ್ಟು ವರ್ಷಗಳಿಂದಲೂ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ. ಇನ್ನು ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಣ್ಣ ಮೀನುಗಳು ಮಾತ್ರ ಸಿಕ್ಕಿಬಿದ್ದಿರೋದು ದೊಡ್ಡ ದೊಡ್ಡ ತಿಮಿಂಗಿಲಗಳು ಬಾಕಿ ಇವೆ ಎನ್ನಲಾಗುತ್ತಿದೆ.

ಜಾಲ ಜಾಲಾಡುತ್ತಿರುವ ಸಿಐಡಿ
ಪಿಎಸ್ಐ ಅಕ್ರಮದಲ್ಲಿ ಡಿವೈಎಸ್ಪಿ ಶಾಂತಕುಮಾರ್ ಜೊತೆ ಹಲವು ಅಧಿಕಾರಿಗಳು, ಅಭ್ಯರ್ಥಿಗಳು, ರಾಜಕಾರಣಿಗಳು, ನಂಟನ್ನು ಹೊಂದಿರುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಿರುವ ಸಿಐಡಿ ಅಧಿಕಾರಿಗಳು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಶಾಂತಕುಮಾರ್ ಇದೇ ಮೊಬೈಲ್ ನಲ್ಲಿ ಡೀಲ್ ಮಾಡಿಲ್ಲ ಎಂಬ ಅನುಮಾನವೂ ಇದೆ. ಪರೀಕ್ಷಾ ಡೀಲ್ ಗಾಗಿ ಹಲವು ಅಭ್ಯರ್ಥಿಗಳು ಬೇರೆ ಫೋನ್, ಸಿಮ್ ಬಳಸಿರೋದು, ಮೊಬೈಲ್ ಗಳನ್ನು ಫ್ಲಾಷ್ ಮಾಡಿರುವಾಗ ಡಿವೈಎಸ್ಪಿ ಹಾಗೆಯೇ ಮೊಬೈಲ್ ತಂದುಕೊಡಲು ಸಾಧ್ಯವೇ..? ಇನ್ನು ಶಾಂತಕುಮಾರ್ ಬಂಧನವಾಗಿರುವ ಕಾರಣದಿಂದಾಗಿ ಕೆಲವು ಅಧಿಕಾರಿಗಳಲ್ಲಿ ನಡುಕ ಪ್ರಾರಂಭವಾಗಿದೆ.












Click it and Unblock the Notifications