ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎ.ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದೇಕೆ?
ಬೆಂಗಳೂರು, ಜೂನ್ 16: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಅವರು ಸರ್ಕಾರದ ಭರವಸೆಗಳನ್ನು ಈಡೇರಿಸಲು ಇರುವ ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಭೂ ಕಬಳಿಕೆಯನ್ನು ಹತ್ತಿಕ್ಕಲು ಸರ್ಕಾರ ಮುಂದಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರತಿಭಟನೆ ರೂಪದಲ್ಲಿ ರಾಜೀನಾಮೆ ನೀಡಿದ್ದಾರೆ.
ಎಚ್ ಕೆ ಕುಮಾರಸ್ವಾಮಿ, ಎಟಿ ರಾಮಸ್ವಾಮಿಗೆ ಸಚಿವ ಸ್ಥಾನ ಕೊಡಿ!
ಒಂದೆಡೆ, ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡಲು ಸರ್ಕಾರ ನಿರ್ಧರಿಸಿರುವುದು ಭಾರಿ ಪ್ರತಿಭಟನೆ ರೂಪ ಪಡೆದಿದೆ. ಇನ್ನೊಂದೆಡೆ ಬೆಂಗಳೂರಿನ ಸುತ್ತಾ ಮುತ್ತಾ ಭೂ ಕಬಳಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ.
ರಾಜೀನಾಮೆಗೆ ಕಾರಣವೇನು? : ಬೆಂಗಳೂರಿನಲ್ಲಿ 310 ಎಕರೆ 18 ಗುಂಟೆ ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ಕಡಿಮೆ ದರದಲ್ಲಿ ಪರಭಾರೆ ಮಾಡಲಾಗಿದೆ. ಈ ಕುರಿತಂತೆ ಡಿಸೆಂಬರ್ 13ರಂದು ಬೆಳಗಾವಿ ಅಧಿವೇಶನದಲ್ಲಿ ಎ.ಟಿ ರಾಮಸ್ವಾಮಿ ಅವರು ಪ್ರಸ್ತಾಪಿಸಿ, ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸಂಬಂಧಪಟ್ಟ ಜಿಲ್ಲಾಧಿಕಾರಿ ಮೇಲೆ ಕ್ರಮ ಕೈಗೊಂಡಿಲ್ಲ, ಸರ್ಕಾರಿ ಜಮೀನು ತೆರವುಗೊಳಿಸಿಲ್ಲ. ಒಂದು ಎಕರೆಗೆ ಲಕ್ಷಾಂತರ ರುಪಾಯಿ ಬೆಲೆ ಇದೆ ಆದರೆ, ಈ ಬಗ್ಗೆ ಗಮನ ಹರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಸರ್ಕಾರದ ಯೋಜನೆಗಳನ್ನು ಈಡೇರಿಸಲು ಇರುವ ಭರವಸೆ ಸಮಿತಿ ಅಧ್ಯಕ್ಷರ ಮನವಿಗೆ ಇಲ್ಲಿ ಬೆಲೆ ಇಲ್ಲದ್ದಂತಾಗಿದೆ, ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎ. ಟಿ ರಾಮಸ್ವಾಮಿ ಅವರು 6 ಪುಟಗಳ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.