ಬಿಡಿಎ ಹುನ್ನಾರ ತಪ್ಪಿಸಿ, ಇಂದಿರಾನಗರದ ಮರಗಳನ್ನು ಉಳಿಸಿ!
ಬೆಂಗಳೂರು, ಆಗಸ್ಟ್ 10 : ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶವನ್ನು ಧಿಕ್ಕರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿರುವುದನ್ನು ವಿರೋಧಿಸಿ ಯುನೈಟೆಡ್ ಬೆಂಗಳೂರು ಸಂಸ್ಥೆ ಆಗಸ್ಟ್ 11, ಶನಿವಾರದಂದು ಭಾರೀ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ನೂರಾರು ನಾಗರಿಕರು ಕೂಡ ಭಾಗವಹಿಸುತ್ತಿದ್ದು, ವಾಣಿಜ್ಯ ಸಂಕೀರ್ಣದ ನಿರ್ಮಾಣಕ್ಕಾಗಿ 171 ಮರಗಳನ್ನು ಕತ್ತರಿಸಿ, ಪರಿಸರವನ್ನು ಹಾಳುಗೆಡವಲು ಬಿಡಿಎ ಯತ್ನಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯುನೈಟೆಡ್ ಬೆಂಗಳೂರು ಮತ್ತು ಐ ಚೇಂಜ್ ಇಂದಿರಾನಗರ ಜಂಟಿಯಾಗಿ ಈ ಪ್ರತಿಭಟನೆಯನ್ನು ಆಯೋಜಿಸಿವೆ.
ಎನ್ ಜಿ ಟಿಯ ಬಫರ್ ಜೋನ್ ಆದೇಶವನ್ನು ಬಿಡಿಎ ಉಲ್ಲಂಘಿಸಿದ್ದಲ್ಲದೆ, ಬಿನ್ನಮಗಲ ಕೆರೆ ಅಂಚಿನಲ್ಲಿರುವ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಪುನರ್ ಅಭಿವೃದ್ಧಿ ಯೋಜನೆ ಕೈಗೊಂಡಿರುವುದನ್ನು ಜನರು ವಿರೋಧಿಸುತ್ತಿದ್ದಾರೆ. ಜೋನಲ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬುದು ನಾಗರಿಕರ ವಾದ.

ಶನಿವಾರ ಸಂಜೆ 5 ಗಂಟೆಗೆ, ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಹೋರಾಟಗಾರರು ಜಮಾಯಿಸಲಿದ್ದಾರೆ. ಈ ವಾಣಿಜ್ಯ ಸಂಕೀರ್ಣದ ಪುನರ್ ನಿರ್ಮಾಣದಿಂದಾಗಿ, ಕಾಂಪ್ಲೆಕ್ಸ್ ನಿಂದ ಕೇವಲ 75 ಮೀಟರ್ ದೂರದಲ್ಲಿರುವ ಬಿನ್ನಮಂಗಲ ಕೆರೆ ಕೂಡ ಹಾಳಾಗಲಿದೆ ಎಂಬುದು ಪರಿಸರವಾದಿಗಳ ಅಳಲು.
ಈ ಹೋರಾಟದಲ್ಲಿ ಸಂಸದ ರಾಜೀವ್ ಚಂದ್ರಶೇಖರ, ಪರಿಸರವಾದಿ ಮತ್ತು 'ಡಾಕ್ಟರ್ ಟ್ರೀ' ಎಂದು ಖ್ಯಾತರಾಗಿರುವ ವಿಜಯ್ ನಿಶಾಂತ್ ಮುಂತಾದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಕೆ 'ಇಂದಿರಾನಗರದ ಮರಗಳನ್ನು ಉಳಿಸಿ' ಎಂಬ ಆನ್ ಲೈನ್ ಅಭಿಯಾನವನ್ನೂ ಆರಂಭಿಸಲಾಗಿದೆ.
ಬಿಡಿಎ ನಿರ್ಮಿಸುತ್ತಿರುವ ಈ ಕಟ್ಟಡದ ಆವರಣದಲ್ಲಿ ಆಲದಮರ, ಸಿಲ್ವರ್ ಓಕ್, ಆರ್ಕಿಡ್, ಚೆರ್ರಿ, ಚಂಪಕ್, ಜಾವಾ ಪ್ಲಮ್, ಮಾವಿನಮರ, ಬೇವಿನಮರ, ಕಸ್ಟರ್ಡ್ ಆಪಲ್, ತೆಂಗು ಮುಂತಾದ ವೈವಿಧ್ಯಮಯ ಮರಗಳಿದ್ದು, ಕಟ್ಟಡ ನಿರ್ಮಾಣವಾದರೆ ಇವೆಲ್ಲ ನಿರ್ನಾಮವಾಗಲಿವೆ.
ಎನ್.ಜಿ.ಟಿ. ಯ ಬಫರ್ ಜೋನ್ ಆದೇಶವನ್ನು ಉಲ್ಲಂಘಿಸುತ್ತಿರುವ & 171 #ಮರಗಳನ್ನು ಕಡಿಯಲು ಉದ್ದೇಶಿಸಿರುವ ಬಿನ್ನಮಂಗಲ ಕೆರೆ ಅಂಚಿನಲ್ಲಿರುವ #ಇಂದಿರಾನಗರ ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಪುನರ್ ಅಭಿವೃದ್ಧಿ ಯೋಜನೆಯ ವಿರುದ್ಧ #ಪ್ರತಿಭಟನೆ. 11/08/18ರಂದು ಸಂಜೆ 5ಕ್ಕೆ, ನಮ್ಮ ಜೊತೆ ಪಾಲ್ಗೊಳ್ಳಿ#BengaluruDemands#SaveBengaluruLakes pic.twitter.com/QdeikxjcTC
— United Bengaluru (@unitedbengaluru) August 9, 2018
ಈ ಎಲ್ಲ ಮರಗಳಿಂದಾಗಿ ಈ ಪ್ರದೇಶದಲ್ಲಿ ಸ್ವಲ್ಪವಾದರೂ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ. ಈ ಮರಗಳ ಮಾರಣಹೋಮದಿಂದ ವಾಯುಮಾಲಿನ್ಯ ಹೆಚ್ಚುವುದಲ್ಲದೆ, ಕಟ್ಟಡ ನಿರ್ಮಾಣದ ಧೂಳಿನಿಂದ ವಾಯು ಇನ್ನಷ್ಟು ಹದಗೆಡಲಿದೆ ಎಂಬುದು ಕೂಡ ಪರಿಸರವಾದಿಗಳ ಆರೋಪ.
ಹಿಂದೆ ಕೂಡ ಇಂಥ ಅಭಿಯಾನದಿಂದ, ಹೋರಾಟದಿಂದ ನೂರಾರು ಮರಗಳನ್ನು ಉಳಿಸಿದ್ದೇವೆ. ನಾವೆಲ್ಲ ಒಗ್ಗೂಡಿದರೆ ಈ ಮರಗಳನ್ನು ಉಳಿಸುವುದು ದೊಡ್ಡದಲ್ಲ ಎಂಬುದು ಹೋರಾಟಗಾರರ ಅನಿಸಿಕೆ. ಈ ಮರಗಳು ಅಕ್ರಮ ಕಟ್ಟಡ ನಿರ್ಮಾಣದಿಂದಾಗಿ ಸಾವಿಗೀಡಾಗದಿರಲಿ.












Click it and Unblock the Notifications