ಕೆಟ್ಟ ಮೇಲೆ ಬುದ್ಧಿ ಬಂತು, ತೆರಿಗೆ ಪಾವತಿಸಿದ ಹೋಟೆಲ್
ಬೆಂಗಳೂರು, ಆಗಸ್ಟ್ 11: ಇಂಟೆಲ್ ಕಂಪನಿ ನಂತರ ಬಿಬಿಎಂಪಿ ಕಸದ ಲಾರಿ ಗುರುವಾರ ಬೆಳಗ್ಗೆ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಮುಂದೆ ನಿಲ್ಲಿಸಲಾಗಿತ್ತು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹೋಟೆಲ್ ನಲ್ಲಿದ್ದ ಪೀಠೋಪಕರಣಗಳನ್ನು ಬಿಬಿಎಂಪಿ ಅಧಿಕಾರಿಗಳು ಜಪ್ತಿ ಮಾಡಿದರು. ನಂತರ ಎಚ್ಚೆತ್ತುಕೊಂಡ ಹೋಟೆಲ್ ಆಡಳಿತ ಮಂಡಳಿ ಚೆಕ್, ಡಿಡಿ ಮೂಲಕ 5.59 ಕೋಟಿ ರು ಪಾವತಿಸಿದೆ.
2012-13ನೇ ಸಾಲಿನಿಂದ 5.59 ಕೋಟಿ ರು ಬಾಕಿ ಉಳಿಸಿಕೊಂಡಿದ್ದ ಮ್ಯಾರಿಯೆಟ್ ಹೋಟೆಲ್ ಈ ಮುಂಚೆ 1.49 ಕೋಟಿ ರು ಗೆ ಚೆಕ್ ನೀಡಿತ್ತು. ಆದರೆ, ಚೆಕ್ ಬೌನ್ಸ್ ಆದ ಕಾರಣ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿದ್ದರು.
[ಬಾಕಿ ಉಳಿಸಿಕೊಂಡಿರುವ ಟಾಪ್ 10 ಕಂಪನಿಗಳು]

ಪೂರ್ವ ವಲಯ ಜಂಟಿ ಆಯುಕ್ತ ಯತೀಶ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಹೋಟೆಲ್ ಆವರಣದಲ್ಲಿರುವ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಹೋಟೆಲ್ ನಲ್ಲಿದ್ದ ಟಿಪಾಯಿ, ಎರಡು ಸೋಫಾ ಸೆಟ್, ನಾಲ್ಕು ಸೋಫಾ ಚೇರ್, ಎರಡು ಲೆದರ್ ಸೋಫಾಸೆಟ್ ನಾಲ್ಕು ಲೆದರ್ ಸೋಫಾ ಚೇರ್ ಜಪ್ತಿ ಮಾಡಲಾಯಿತು.
ತೆರಿಗೆ ಹಣ ಕೂಡಲೇ ಪಾವತಿಸದಿದ್ದರೆ ಕಸದ ಲಾರಿಯಲ್ಲಿರುವ ಕಸವನ್ನು ಹೋಟೆಲ್ ಆವರಣದಲ್ಲಿ ಸುರಿಯುವುದಾಗಿ ಎಚ್ಚರಿಕೆ ನೀಡಲಾಯಿತು.

ಈ ಬಗ್ಗೆ ಮಾತನಾಡಿದ ಜಂಟಿ ಆಯುಕ್ತ ಯತೀಶ್ ಕುಮಾರ್, 2013 ರಿಂದ 2016 ವರೆಗೂ ತೆರಿಗೆ ಉಳಿಸಿಕೊಂಡಿದ್ರು. ಈ ಮೊದಲು ಎರಡು ಮೂರು ಸಲ ನೋಟೀಸ್ ಕೊಟ್ಟಿದ್ದೆವು. ಹೋಟೆಲ್ ನವರು ಅರ್ಧ ಹಣ ಕೊಡಲು ಮುಂದಾಗಿದ್ರು, ನಾವು ಪೂರ್ತಿ ಹಣ ಕೊಟ್ಟರೆ ಮಾತ್ರ ದಾಳಿ ನಿಲ್ಲಿಸುತ್ತೇವೆ. ಇದು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ನಡೆಸಲಾದ ರೇಡ್ ಎಂದರು.

ಈ ಹೋಟೆಲ್ ನಲ್ಲಿ ಪ್ರತಿ ದಿನ ರೂಮೊಂದರ ಬಾಡಿಗೆ ಸರಿ ಸುಮಾರು 12 ರಿಂದ 20 ಸಾವಿರ ರು ನಷ್ಟಿದೆ. ಆದರೆ, ತೆರಿಗೆ ಬಾಕಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೆಎಂಸಿ ಕಾಯ್ದೆಯ ಸೆಕ್ಷನ್ 14, ನಿಯಮ 26 ಹಾಗೂ 27ರ ಪ್ರಕಾರ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಯತೀಶ್ ಹೇಳಿದರು.












Click it and Unblock the Notifications