'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!
Recommended Video
ಬೆಂಗಳೂರು, ನವೆಂಬರ್ 12 : ಯಶವಂತಪುರ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು?. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವ ನಾಯಕರ ಬಳಿಯೂ ಈ ಪ್ರಶ್ನೆಗೆ ಉತ್ತರವಿಲ್ಲ. ನಾಮಪತ್ರ ಸಲ್ಲಿಸಲು 5 ದಿನಗಳು ಮಾತ್ರ ಬಾಕಿ ಇದೆ.
ಕಾಂಗ್ರೆಸ್ ಶಾಸಕ ಎಸ್. ಟಿ. ಸೋಮಶೇಖರ್ ಅನರ್ಹಗೊಂಡಿದ್ದಾರೆ. ಆದ್ದರಿಂದ, ಯಶವಂತಪುರ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರಾಗಿದ್ದ ಸೋಮಶೇಖರ್ ಸೋಲಿಸಲು ಪಣ ತೊಟ್ಟಿದ್ದಾರೆ.
ಯಶವಂತಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. ಸಿದ್ದರಾಮಯ್ಯ ಹಣೆದಿದ್ದ ತಂತ್ರಗಳು 'ಕೈ' ಕೊಟ್ಟಿವೆ. ಸುಪ್ರೀಂಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ ಎಸ್. ಟಿ. ಸೋಮಶೇಖರ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.
ಜೆಡಿಎಸ್ ಪಕ್ಷವೂ ಪ್ರಭಾವ ಹೊಂದಿರುವ ಕ್ಷೇತ್ರ ಯಶವಂತಪುರ. 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಟಿ. ಎನ್. ಜವರಾಯಿ ಗೌಡ 104562 ಮತಗಳನ್ನು ಪಡೆದು ಎಸ್. ಟಿ. ಸೋಮಶೇಖರ್ ವಿರುದ್ಧ ಸೋಲು ಕಂಡಿದ್ದರು.

'ಕೈ' ಕೊಟ್ಟ ಪಕ್ಷದ ತಂತ್ರ
ಗೋವಿಂದರಾಜನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯ ಕೃಷ್ಣ ಕಣಕ್ಕಿಳಿಸಲು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಕಾಂಗ್ರೆಸ್ನ ಈ ತಂತ್ರ 'ಕೈ' ಕೊಟ್ಟಿದೆ. ಉಪ ಚುನಾವಣೆ ಟಿಕೆಟ್ ಬೇಡ ಎಂದು ಪ್ರಿಯ ಕೃಷ್ಣ ಹೇಳಿದ್ದಾರೆ.

ಕ್ಷೇತ್ರಕ್ಕೂ ನನಗೂ ಸಂಬಂಧವಿಲ್ಲ
ಯಶವಂತಪುರ ಕ್ಷೇತ್ರಕ್ಕೂ ನನಗೂ ಏನು ಸಂಬಂಧ. ದೊಡ್ಡ ಕ್ಷೇತ್ರವಾದ ಅದು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಕೂಡಿದೆ. ಎಲ್ಲಾ ಕಡೆ ಓಡಾಡಿ ಪ್ರಚಾರ ಮಾಡುವುದುಕಷ್ಟ. ಗೋವಿಂದರಾಜ ನಗರ ಬಿಟ್ಟು ನಾನು ಹೋಗುವುದಿಲ್ಲ ಎಂದು ಪ್ರಿಯ ಕೃಷ್ಣ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ತಂತ್ರವೂ ವಿಫಲ
ಮಾಜಿ ಸಿಎಂ ಸಿದ್ದರಾಮಯ್ಯ ಯಶವಂತಪುರ ಕ್ಷೇತ್ರದ ಜೆಡಿಎಸ್ ನಾಯಕ ಟಿ. ಎನ್. ಜವರಾಯಿ ಗೌಡರನ್ನು ಪಕ್ಷಕ್ಕೆ ಸೆಳೆದು ಟಿಕೆಟ್ ನೀಡಲು ಮುಂದಾಗಿದ್ದರು. ಆದರೆ, "ಕಷ್ಟ ಕಾಲದಲ್ಲಿ ಪಕ್ಷ ಮತ್ತು ಕಾರ್ಯಕರ್ತರು ಜೊತೆಗಿದ್ದಾರೆ. ಜೆಡಿಎಸ್ನಿಂದ ರಾಜಕಾರಣ ಮಾಡಿದ್ದೇನೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟಿ. ಎನ್. ಜವರಾಯಿ ಗೌಡ ಕಣಕ್ಕೆ
2013ರಲ್ಲಿ 91,280, 2018ರಲ್ಲಿ 104562 ಮತಗಳನ್ನು ಪಡೆದು ಸೋಲು ಕಂಡಿರುವ ಟಿ. ಎನ್. ಜವರಾಯಿ ಗೌಡ ಉಪ ಚುನಾವಣೆಯಲ್ಲಿ ಜೆಡಿಎಸ್ನಿಂದ ಕಣಕ್ಕಿಳಿಯಲಿದ್ದಾರೆ. ಎಸ್. ಟಿ. ಸೋಮಶೇಖರ್ ಬಿಜೆಪಿಯಿಂದ ಹುರಿಯಾಳು ಆಗುವ ನಿರೀಕ್ಷೆ ಇದೆ. ಆದರೆ. ಕಾಂಗ್ರೆಸ್ನಿಂದ ಯಾರು?.












Click it and Unblock the Notifications