ಜೈಲು ಅವ್ಯವಹಾರ ಬಯಲಿಗೆಳೆದ ರೂಪಾಗೆ ರಾಷ್ಟ್ರಪತಿ ಪದಕ
ಬೆಂಗಳೂರು, ಸೆಪ್ಟೆಂಬರ್ 20: ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾಗೆ ರಾಜಾತಿಥ್ಯ ದೊರೆಯುತ್ತಿದ್ದದ್ದು ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರಗಳನ್ನು ವರದಿ ಮಾಡಿದ್ದ ಡಿ.ರೂಪಾ ಮೌದ್ಗಿಲ್ ಅವರಿಗೆ ಇತ್ತೀಚೆಗೆ ರಾಜ್ಯಪಾಲ ವಿ.ಆರ್.ವಾಲಾ ರಾಷ್ತ್ರಪತಿ ಪದಕ ವಿತರಿಸಿದರು.
ಅನ್ಯಾಯ ಬಗ್ಗೆ ಟ್ವೀಟ್ ಮಾಡಿದ ಡಿ ರೂಪಾಗೆ ಭಾರಿ ಬೆಂಬಲ
ರೂಪಾ ಮೌದ್ಗಿಲ್ ಅವರ ಸೇವೆ ಪರಿಗಣಿಸಿ ಈ ಪದಕ ನೀಡಲಾಗಿದ್ದು, ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪದಕ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಹ ಉಪಸ್ಥಿತರಿದ್ದರು.
ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರಪತಿ ಪದಕದ ಗೌರವಕ್ಕೆ ಭಾಜನರಾದ ಇತರ ಪೊಲೀಸ್ ಅಧಿಕಾರಿಗಳಿಗೂ ವಿತರಿಸಲಾಯಿತು. ಕಳೆದ ಜುಲೈನಲ್ಲಿ ಆಗ ಕಾರಾಗೃಹ ಡಿಐಜಿ ಆಗಿದ್ದ ರೂಪಾ ಮೌದ್ಗಿಲ್ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಿದ್ದರು. ನಾಲ್ಕು ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾಗೆ ರಾಜಾತಿಥ್ಯ ದೊರೆಯುತ್ತಿದೆ. ಇದಕ್ಕಾಗಿ ಕೋಟ್ಯಂತರ ರುಪಾಯಿ ಹಣ ನೀಡಲಾಗಿದೆ ಎಂದು ಆರೋಪಿಸಿದ್ದರು.
ಆ ನಂತರ ರೂಪಾ ಅವರನ್ನು ಸಂಚಾರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಎಐಎಡಿಎಂಕೆಯಿಂದ ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಲಾಗಿತ್ತು.