ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ರಸ್ತೆ ಕಿತ್ತು ಬಂದಿಲ್ಲ ಎಂದು ಹಳೆಯ ಫೋಟೋ ಹಂಚಿಕೊಂಡರಾ ಪ್ರತಾಪ್ ಸಿಂಹ?
ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಪ್ಪು, ಬಿಳಿ ಬಣ್ಣದ ಡಿವೈಡರ್ ಇದ್ದರೇ, ಇವರು ಹಂಚಿಕೊಂಡು ಮಾರ್ಕ್ ಮಾಡಿರುವ ಚಿತ್ರದಲ್ಲಿ ಕಪ್ಪು ಹಳದಿ ಬಣ್ಣದ ಪಟ್ಟಿಗಳಿವೆ.
ಬೆಂಗಳೂರು, ಮಾರ್ಚ್ 15: ಹೊಸದಾಗಿ ಆರಂಭವಾಗಿರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಬಿಡದಿ ಬಳಿಯ ಮೇಲ್ಸೇತುವೆಯಲ್ಲಿ ಹಾಳಾಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು ರಸ್ತೆ ಕಿತ್ತು ಬಂದಿಲ್ಲ ಎಕ್ಸ್ಟೆನ್ಷನ್ ಜಾಯಿಂಟ್ ಬಳಿ ಸಣ್ಣ ನ್ಯೂನ್ಯತೆ ಎಂದಿದ್ದಾರೆ.
ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ. pic.twitter.com/MqoCSJYlDt
— Pratap Simha (@mepratap) March 15, 2023
"ಮಾಧ್ಯಮಗಳೇ, ರಸ್ತೆ ಕಿತ್ತು ಬಂದಿಲ್ಲ, Expansion joint ಬಳಿ ಇದ್ದ ಸಣ್ಣ ನ್ಯೂನ್ಯತೆಯನ್ನು ಅನ್ನು ಸರಿಪಡಿಸಲಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಂಚಿಕೊಂಡಿರುವ ಫೋಟೋ ಮಾತ್ರ ಭಾರೀ ವೈರಲ್ ಆಗುತ್ತಿದೆ. ಪ್ರತಾಪ್ ಸಿಂಹ ಹಂಚಿಕೊಂಡಿರುವ ಫೋಟೋಗಳಲ್ಲಿ ವ್ಯತ್ಯಾಸಗಳಿವೆ. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಪ್ಪು, ಬಿಳಿ ಬಣ್ಣದ ಡಿವೈಡರ್ ಇದ್ದರೇ, ಇವರು ಹಂಚಿಕೊಂಡು ಮಾರ್ಕ್ ಮಾಡಿರುವ ಚಿತ್ರದಲ್ಲಿ ಕಪ್ಪು ಹಳದಿ ಬಣ್ಣದ ಪಟ್ಟಿಗಳಿವೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.

"ನಿಮ್ಮ ಚಿತ್ರದಲ್ಲಿ ರಸ್ತೆಯ ಬಿಳಿ ಪಟ್ಟಿನೇ ಕಾಣಿಸ್ತಾ ಇಲ್ವಲ್ಲ ಸರ್. ಬೇರೆ ಚಿತ್ರ ತಪ್ಪಾಗಿ ಹಾಕಿರಬಹುದಾ!.. ಹೆದ್ದಾರಿಯಲ್ಲಿರುವುದು ಕಪ್ಪು ಬಿಳಿ ಬಣ್ಣ. ನಿಮ್ಮದು ಕಪ್ಪು ಹಳದಿ ಬಣ್ಣ..?" ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, "ಎರಡು ಫೋಟೋಗಳು ಯಾಕೆ ವ್ಯತ್ಯಾಸವಿದೆ..? ಬದಿಯ ತಡೆಗೋಡೆ ಗಮನಿಸಿ, ಬಿಡದಿ ಬ್ರಿಡ್ಜ್ ಬಳಿ ಇರೋದು ಕಪ್ಪು, ಬಿಳಿ.. ಎರಡನೇ ಫೋಟೋದ ಡಿವೈಡರ್ ಇದ್ದು ಅದರ ಬಣ್ಣ ಹಳದಿ, ಕಪ್ಪು.. ಯಾಕೀ ವ್ಯತ್ಯಾಸ..!? " ಎಂದು ವ್ಯಂಗ್ಯವಾಡಿದ್ದಾರೆ.
ಬರಹಗಾರ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರು ಈ ಫೋಟೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 2017ರ ಅಕ್ಟೋಬರ್ 5 ರಂದು ಹಂಚಿಕೊಲ್ಳಲಾಗಿರುವ ಫೋಟೋ ಇದು ಎಂದು ಕಂಡು ಹಿಡಿದಿದ್ದಾರೆ. ಇದೇ ಮಾಹಿತಿಯನ್ನು ಹಲವು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. "ಪ್ರತಾಪೂ ಏನು ಮಾಡಿದಾನೆ .... ಗೂಗಲ್ ಗೆ ಹೋಗಿ ಜಾಯಿಂಟ್ ಅಂತ ಏನೋ ಸರ್ಚ ಮಾಡಿದಾನೆ... ಈ ಪೋಟೋ ಸಿಕ್ಕಿದೆ.... ಈ ಪೋಟೋ ಎತ್ತಿಕೊಂಡು ಮೈಸೂರು ಬೆಂಗಳೂರು ರೋಡ್ ರಿಪೇರಿ ಇಸ್ಟೆ ಅಂತ ಬಳಾಂಗ್ ಶುರು ಮಾಡಿದ್ದಾನೆ ಪ್ರೆಂಡ್ಸ..." ಎಂದು ವ್ಯಂಗ್ಯವಾಡಿದ್ದಾರೆ.
ಮೇಲ್ದರ್ಜೆಗೇರಿದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ್ದರು. ಕಳೆದ ವರ್ಷ ಟ್ರಕ್ ಉರುಳಿಬಿದ್ದ ಸ್ಥಳದಲ್ಲಿಯೇ ಮೇಲ್ಸೇತುವೆಯಲ್ಲಿ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಭಾಗದಲ್ಲಿ ಸಂಚರಿಸುವಾಗ ಹಲವಾರು ವಾಹನಗಳು ಸಣ್ಣಪುಟ್ಟ ಅಪಘಾತಗಳನ್ನು ಎದುರಿಸುತ್ತಿವೆ ಎನ್ನಲಾಗಿದೆ. ಇನ್ನು, ಹಾನಿ ಪತ್ತೆಯಾದ ನಂತರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಅಧಿಕಾರಿಗಳು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.

ಇತ್ತ, ಐಆರ್ಸಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಹೆದ್ದಾರಿಯನ್ನು ನಿರ್ಮಿಸಲಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ. ಅನೇಕ ಸ್ಥಳಗಳಲ್ಲಿ ನಿರ್ಮಾಣವು ಅವೈಜ್ಞಾನಿಕ ಮತ್ತು ಬಳಸಿದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದೆ. ರಸ್ತೆ ಯೋಜನೆಯಲ್ಲಿ ಅಸಮರ್ಪಕ ಜೋಡಣೆ ಮತ್ತು ಕಳಪೆ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications