ನಟ ಉಪೇಂದ್ರರನ್ನು ಭೇಟಿ ಮಾಡಿದ ಪ್ರಮೋದ್ ಮುತಾಲಿಕ್
ಶ್ರೀ ರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಂದ ನಟ ಉಪೇಂದ್ರ ಭೇಟಿ. ಕತ್ರಿಗುಪ್ಪೆಯ ಉಪೇಂದ್ರ ನಿವಾಸದಲ್ಲಿ ಇಬ್ಬರ ಭೇಟಿ ಹಾಗೂ ಮಾತುಕತೆ.
ಬೆಂಗಳೂರು, ಆಗಸ್ಟ್ 21: ಕುತೂಹಲದ ಸನ್ನಿವೇಶವೊಂದರಲ್ಲಿ ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಚಿತ್ರ ನಟ ಉಪೇಂದ್ರ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಸೋಮವಾರ ಸಂಜೆ, ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ನಿವಾಸಕ್ಕೆ ಬಂದ ಮುತಾಲಿಕ್, ಸುಮಾರು ಹೊತ್ತು ಉಪೇಂದ್ರ ಅವರ ಜತೆಗಿದ್ದು ಕೆಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರೆಂದು ಉಪೇಂದ್ರ ಅವರ ಆಪ್ತ ಮೂಲಗಳು ತಿಳಿಸಿವೆ.

ಉಪೇಂದ್ರ, ಮುತಾಲಿಕ್ ಅವರ ಭೇಟಿಯ ಸಂಪೂರ್ಣ ಮಾತುಕತೆಯ ಸಂಪೂರ್ಣ ವಿವರ ಲಭ್ಯವಾಗಿಲ್ಲ. ಆದರೂ, ಇತ್ತೀಚೆಗೆ ಉಪೇಂದ್ರ ಅವರು ರಾಜಕೀಯ ಪ್ರವೇಶಕ್ಕೆ ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಅವರಿಗೆ ಮುತಾಲಿಕ್ ಶುಭ ಕೋರಿದ್ದಾರೆಂದು ಹೇಳಲಾಗಿದೆ.
ಉಪೇಂದ್ರ ಅವರು ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೊಸತೊಂದು ರಾಜಕೀಯ ಪಕ್ಷವನ್ನು ಕಟ್ಟುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇದು, ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುತಾಲಿಕ್ ಪ್ರತಿಕ್ರಿಯೆ
ಉಪೇಂದ್ರ ಹಾಗೂ ತಮ್ಮ ನಡುವೆ ನಡೆದ ಮಾತುಕತೆಯ ಬಗ್ಗೆ ಒನ್ ಇಂಡಿಯಾ ದೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಉಪೇಂದ್ರ ಅವರ ದೃಷ್ಟಿಕೋನ ಉತ್ತಮವಾಗಿದ್ದು ಅವರ ಪಕ್ಷಕ್ಕೆ ಸಪೋರ್ಟ್ ಮಾಡುವುದಾಗಿ ತಿಳಿಸಿದರು . ಉಪೇಂದ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದಾರೆ ಅವರಿಗೆ ಶ್ರೀರಾಮ ಸೇನೆ ಬೆಂಬಲಿಸುತ್ತದೆ ಎಂದು ಅವರು ತಿಳಿಸಿದರು .
ಶ್ರೀರಾಮಸೇನೆ ಹಿಂದುತ್ವದ ಬದ್ಧತೆಯೊಂದಿಗೆ ಭ್ರಷ್ಟಾಚಾರ ಮುಕ್ತ ಸಮಾಜದ ಪರಿಕಲ್ಪನೆ ಇಟ್ಟುಕೊಂಡಿದೆ . ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರ ದೃಷ್ಟಿಕೋನ ಹಾಗೂ ಶ್ರೀರಾಮ ಸೇನೆಯ ವಿಚಾರಧಾರೆಗೆ ಸಾಮ್ಯತೆ ಇದೆ ಎಂದು ಅವರು ಹೇಳಿದರು.

ಪ್ರಜೆಗಳೇ ಪ್ರಭುಗಳಾಗಬೇಕು . ರಾಜಕೀಯ ತೊಲಗಿ ಪ್ರಜಾ ನೀತಿ ಬರಬೇಕು. ಹಣಬಲ, ತೋಳ್ಬಲ ,ಜಾತಿ ವರ್ಗಗಳಿಂದ ಸಮಾಜ ಮುಕ್ತವಾಗಬೇಕು ಎನ್ನುವ ಅವರ ರಾಜಕೀಯ ವಿಚಾರಧಾರೆ ಉತ್ತಮವಾಗಿದ್ದು ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿವಾರ್ಯ ಕೂಡ ಎಂದು ಅವರು ಅಭಿಪ್ರಾಯಪಟ್ಟರು ಮುಂದಿನ ದಿನಗಳಲ್ಲಿ ಮತ್ತೆ ಉಪೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಅವರು ತಿಳಿಸಿದರು .












Click it and Unblock the Notifications