ವೃಷಭಾವತಿ ನೀರು: ಪ್ರಮೋದ್ ಲೇಔಟ್ ಜನರ ಸಂಕಷ್ಟಕ್ಕಿಲ್ಲ ಪರಿಹಾರ
ಬೆಂಗಳೂರು, ಸೆಪ್ಟೆಂಬರ್ 11: ಪ್ರತಿ ವರ್ಷ ಮಳೆಗಾಲದಲ್ಲಿಯೂ ಬೆಂಗಳೂರಿಗರು ಪರದಾಡುವ ಸ್ಥಿತಿ ಬದಲಾಗಿಲ್ಲ. ಸೂಕ್ತ ಚರಂಡಿ ಹಾಗೂ ನೀರು ಇಂಗುವ ವ್ಯವಸ್ಥೆ ಇಲ್ಲದೆ ಕಾರಣ ಸಣ್ಣ ಪ್ರಮಾಣದ ಮಳೆ ಬಂದಾಗಲೂ ಅವಾಂತರ ಸೃಷ್ಟಿಯಾಗುತ್ತಿದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾತ್ರ ನಡೆಯುತ್ತಿಲ್ಲ.
ಬುಧವಾರ ಸಂಜೆ ಬೆಂಗಳೂರಿನ ಅನೇಕ ಭಾಗಗಳಲ್ಲಿ ವಿಪರೀತ ಮಳೆ ಸುರಿದಿತ್ತು. ತಡರಾತ್ರಿ 12.30ರ ವೇಳೆಗೆ ರಾಜರಾಜೇಶ್ವರಿ ನಗರದ ಪ್ರಮೋದ್ ಲೇಔಟ್ನ ಮನೆಗಳಿಗೆ ವೃಷಭಾವತಿ ನದಿ ನೀರು, ಕೊಳಚೆ ನೀರು ನುಗ್ಗಿದ್ದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದೆ.
ವೃಷಭಾವತಿ ನದಿಯ ಕೊಳಚೆ ನೀರು ಪ್ರತಿಮಳೆಗಾಲದಲ್ಲಿಯೂ ಜನರ ಮನೆಗಳಿಗೆ ನುಗ್ಗುತ್ತಿದೆ. ರಾಜಕಾಲುವೆ ಒಡೆದು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಜನಪ್ರತಿನಿಧಿಗಳು ಬಿಬಿಎಂಪಿಯ ಶಾಶ್ವತ ಪರಿಹಾರದ ಬಗ್ಗೆ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈ ಸ್ಥಳೀಯ ಸಮಸ್ಯೆ ಇನ್ನೂ ದೂರವಾಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಜೆ 6.30 ರಿಂದ ಗುರುವಾರ ಮುಂಜಾನೆ 4.30 ತನಕವೂ ವಿಪರೀತ ಮಳೆ ಸುರಿದಿತ್ತು. ಇದರಿಂದ ಪ್ರಮೋದ್ ಲೇಔಟ್ನ ತಗ್ಗು ಪ್ರದೇಶದ ಮನೆಗಳಿಗೆ ಸುಮಾರು 6 ಅಡಿ ಎತ್ತರದಷ್ಟು ಕೊಳಚೆ ನೀರು ನುಗ್ಗಿದೆ. ಇದರಿಂದ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಅನೇಕರ ಲ್ಯಾಪ್ಟಾಪ್, ಫ್ರಿಡ್ಜ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗಿವೆ.
'ತಗ್ಗು ಪ್ರದೇಶದಲ್ಲಿರುವ ನಮ್ಮ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ಸಲ ಇದೇ ರೀತಿ ಸಮಸ್ಯೆ ಉಂಟಾದಾಗ ನಾವೇ ಸ್ಥಳೀಯರು ಸೇರಿ ದುಡ್ಡು ಹಾಕಿ ತಡೆಗೋಡೆ ನಿರ್ಮಿಸಿದ್ದೆವು. ಇದಕ್ಕೆ ಶಾಶ್ವತ ಪರಿಹಾರವಾಗಲೇಬೇಕು ಎಂದು ಹಿರಿಯ ನಾಗರಿಕ ಸಿದ್ಧಲಿಂಗಯ್ಯ ಹೇಳಿದರು.
ರಾಜರಾಜೇಶ್ವರಿ ನಗರದ ಸಾಮಾಜಿಕ ಕಾರ್ಯಕರ್ತ, ಜಗದೀಶ್ ಆರ್ ಚಂದ್ರ ಹಾಗೂ ಇತರೆ ಸ್ವಯಂಸೇವಕರ ತಂಡವು ಇಲ್ಲಿಗೆ ತೆರಳಿ ರಾತ್ರಿಯಿಡೀ ಸ್ವಚ್ಛತಾ ಕಾರ್ಯ ನಡೆಸಿದರು.












Click it and Unblock the Notifications