ಪ್ರಕಾಶ್ ರೈ ಅಂದು ನಿಜಕ್ಕೂ ಹೇಳಿದ್ದೇನು? ಇಲ್ಲಿದೆ ವಿಡಿಯೋ ಸಮಜಾಯಿಷಿ
ಬೆಂಗಳೂರು, ಅಕ್ಟೋಬರ್ 4: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ, ಐದು ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿರುವ ಪ್ರಕಾಶ್ ರೈ ಅವರು ಕುರಿತು ಕಳೆದೆರಡು ದಿನದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಯಾಗುತ್ತಿದೆ.
ಬೆಂಗಳೂರಿನಲ್ಲಿ, 3 ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ ಐ)ನ 11 ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿದ ಸಂದರ್ಭದಲ್ಲಿ, "ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತಮ ನಟ, ಅವರ ನಟನೆಯನ್ನು ನೋಡಿದರೆ ನನಗೆ ಸಂದ ರಾಷ್ಟ್ರಪ್ರಶಸ್ತಿಯನ್ನೆಲ್ಲ ಅವರಿಗೇ ನೀಡೋಣವೆನ್ನಿಸುತ್ತಿದೆ" ಎಂಬ ಹೇಳಿಕೆಯನ್ನು ಪ್ರಕಾಶ್ ರೈ ನೀಡಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳೂ ಸುದ್ದಿ ಮಾಡಿದ್ದವು.

ಜೊತೆಗೆ ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವ ಪ್ರಧಾನಿ ನರೇಮದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುವಂಥವರೇ ಆಗಿದ್ದರೂ, ಅವರ ವಿರುದ್ಧ ಮೋದಿ ಚಕಾರವೆತ್ತಿಲ್ಲ ಎಂದು ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದಿದ್ದರು ಎಂದು ಮಾಧ್ಯಮಗಳು ವರದಿಮಾಡಿದ್ದವು. ಈ ಕುರಿತು ಹಲವರು ಪ್ರಕಾಶ್ ರೈ ವಿರುದ್ಧ ಮಾತನಾಡಿದ್ದರು. ಸಂಸದ ಪ್ರತಾಪ್ ಸಿಂಹ ಅವರೂ ಪ್ರಕಾಶ್ ರೈ ಅವರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.
ಆದರೆ ಸಭೆಯಲ್ಲಿ ಅಂದು ತಾನು ಮಾತನಾಡದೇ ಇರುವುದನ್ನೆಲ್ಲ ಸೇರಿಸಿ ಹೇಳಲಾಗಿದೆ ಎಂದಿರುವ ಪ್ರಕಾಶ್ ರಾಜ್, ತಾನು ಅಂದು ನಿಜಕ್ಕೂ ಮಾತನಾಡಿದ್ದು ಏನು ಎಂಬ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.
What's said...n what's not said. For all out there .. thank you pic.twitter.com/zIT7rnkFxb
— Prakash Raj (@prakashraaj) October 2, 2017
"ನನಗೆ ಬಂದಿರುವ ರಾಷ್ಟ್ರ ಪ್ರಶಸ್ತಿಗಳನ್ನು ನಾನು ಕಷ್ಟಪಟ್ಟು ಪಡೆದಿದ್ದೇನೆ. ಅವುಗಳ ಬಗ್ಗೆ ನನಗೆ ತುಂಬಾ ಗೌರವವಿದೆ. ಅವುಗಳನ್ನು ನಾನ್ಯಾಕೆ ವಾಪಾಸ್ ಮಾಡಲಿ" ಎಂದು ವಿಡಿಯೋದಲ್ಲಿ ಅವರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ಗೌರಿ ಲಂಕೇಶ್ ನನ್ನ ಆಪ್ತ ಸ್ನೇಹಿತೆ. ಅವರನ್ನು ಹತ್ಯೆ ಮಾಡಿದ್ದು ಯಾರು ಎಂಬುದು ನನಗೆ ಗೊತ್ತಿಲ್ಲ. ಆದರೆ ಆಕೆಯ ಹತ್ಯೆಯನ್ನು ಸಂಭ್ರಮಿಸುತ್ತಿರುವವರು ಯಾರೆಂಬುದು ಗೊತ್ತಿದೆ. ಅವರೆಲ್ಲ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಫಾಲೋವರ್ ಗಳು. ಇಂಥವರ ವಿರುದ್ಧ ಅವರು ಕ್ರಮ ಕೈಗೊಳ್ಳಬೇಕು ಎಂದು ಅಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮಾತನ್ನೇ ಪುನರುಚ್ಚರಿಸಿದ್ದೇನೆ ಎಂದಿದ್ದಾರೆ.












Click it and Unblock the Notifications