ಬಿಜೆಪಿಯವರೋ ಬೇರೆಯವರೋ ಏನು ಮಾಡ್ತಾರೆ ನನಗೆ ಸಂಬಂಧಿಸಿಲ್ಲ: ಎಚ್ ಡಿಕೆ
ಬೆಂಗಳೂರು, ಜುಲೈ 8: ಬಿಜೆಪಿಯವರು ಏನು ಮಾಡ್ತಾರೆ, ಬೇರೆಯವರು ಏನು ಮಾಡ್ತಾರೆ ಅನ್ನೋದು ನನಗೆ ಏನೂ ಸಂಬಂಧ ಇಲ್ಲದ ವಿಚಾರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಮಾಧ್ಯಮದವರಿಗೆ ಉತ್ತರಿಸಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಉತ್ತರ ನೀಡಿದ ಬಗೆ ಇದು.
ಅಮೆರಿಕದಿಂದ ಹಿಂತಿರುಗಿದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಆಗಿ ನನ್ನ ಜವಾಬ್ದಾರಿಗಳು ಏನಿವೆ, ಅವುಗಳನ್ನು ನಿರ್ವಹಿಸಿಕೊಂಡು ಹೋಗುತ್ತೇನೆ. ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಉತ್ತರಿಸಿದ್ದಾರೆ.
ಅಲ್ಪಮತಕ್ಕೆ ಕುಸಿದ ಎಚ್ಡಿಕೆ ಸರ್ಕಾರ, ವಿಧಾನಸಭೆ ಸಂಖ್ಯಾಬಲ?
ಶನಿವಾರದಂದು ಕಾಂಗ್ರೆಸ್ ನ ಒಂಬತ್ತು ಹಾಗೂ ಜೆಡಿಎಸ್ ನ ಮೂವರು ರಾಜೀನಾಮೆ ನೀಡಿದ್ದಾರೆ. ಇನ್ನು ಸೋಮವಾರದಂದು ಮುಳಬಾಗಲಿನ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಎಲ್ಲ ರಾಜಕೀಯ ಬೆಳವಣಿಗೆಗಳಿಂದ ರಾಜ್ಯ ಸರಕಾರ ಪತನದ ಅಂಚಿನಲ್ಲಿದೆ. ಆದರೂ ಈ ಯಾವ ಬೆಳವಣಿಗೆಯೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ.