ಬಜೆಟ್ನಲ್ಲಿ ಹೊಸ ಪೊಲೀಸ್ ಠಾಣೆಗಳ ಘೋಷಣೆ: ಪರಮೇಶ್ವರ್
ಬೆಂಗಳೂರು, ಜೂನ್ 26: ಬಜೆಟ್ನಲ್ಲಿ ಇರುವ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ನೂತನ ಠಾಣೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ನೂತನ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಆದರೆ ಬಜೆಟ್ನಲ್ಲಿ ಆರ್ಥಿಕ ಇತಿಮಿತಿಗಳನ್ನು ಆಧರಿಸಿ ಠಾಣೆಗಳನ್ನು ನಿರ್ಮಿಸುವ ಕುರಿತು ಆಲೋಚಿಸಬೇಕಿದೆ ಎಂದರು.
ಬಜೆಟ್ ಬಗ್ಗೆ ಸಿದ್ದರಾಮಯ್ಯಗೆ ಸ್ವಂತ ಅಭಿಪ್ರಾಯ ಇರಬಹುದು: ಪರಮೇಶ್ವರ್
ರಾಜ್ಯದಲ್ಲಿ ಒಟ್ಟು 12 ಖಾಯಂ ಹಾಗೂ 22 ತಾತ್ಕಾಲಿಕ ತರಬೇತಿ ಕೇಂದ್ರಗಳಿವೆ. ತಾತ್ಕಾಲಿಕ ತರಬೇತಿ ಕೇಂದ್ರಗಳಿಗೆ ಬೋಧಕ ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ನೇಮಕಾತಿ ಹೊಂದಿದವರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವಂತೆ ಕೇಂದ್ರಗಳನ್ನು ಸಜ್ಜುಗೊಳಿಸಲಾಗುವುದು ಎಂದರು.
ಪ್ರತಿ ವರ್ಷ 5 ಸಾವಿರ ಪೊಲೀಸರನ್ನು ನೇಮಕ ಮಾಡಲು ಬೇಕಾದ ಅಗತ್ಯ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತದೆ. ನಿವೃತ್ತಿ ಸೇರಿದಂತೆ ವಿವಿಧ ರೀತಿಯಲ್ಲಿ ತೆರವಾಗುವ ಹುದ್ದೆಗಳಿಗೆ ಕಾಲಕಕ್ಕೆ ಭರ್ತಿ ಮಾಡಿಕೊಳ್ಳಬೇಕು. ಅದಕ್ಕೆ ಸೂಕ್ತ ತಿದ್ದುಪಡಿ ತರಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ತರಬೇತಿ ನೀಡಲು ಬೇಕಾದ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.