ಸರಗಳ್ಳರ ಬಂಧನಕ್ಕೆ ಪೊಲೀಸ್ ಇಲಾಖೆ ರಣತಂತ್ರ
ಬೆಂಗಳೂರು, ಡಿ. 26: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳರ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರಣತಂತ್ರ ರೂಪಿಸಿದೆ.
ಬೆಂಗಳೂರಿನಲ್ಲಿ ಕೇವಲ ಎರಡು ದಿನಗಳಲ್ಲಿ ಸುಮಾರು 20 ಸರಗಳ್ಳತನ ದೂರು ದಾಖಲಾಗಿದೆ. ವರ್ಷದಿಂದ ವರ್ಷಕ್ಕೆ ಸರಗಳವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಪಿ. ಹರಿಶೇಖರನ್ ಏಳು ವಿಭಾಗಗಳ ಡಿಸಿಪಿಗಳ ಜೊತೆ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದ್ದಾರೆ. ಈ ಕುರಿತು ವಿಶೇಷ ತಂಡ ರಚಿಸಿದ್ದಾರೆ. ಕಾರ್ಯಾಚರಣೆ ಕುರಿತು ವಿವರಿಸಿದ್ದಾರೆ.
ವಿಜಯನಗರ, ಕಾಮಾಕ್ಷಿಪಾಳ್ಯ, ಚಂದ್ರಾಲೇಔಟ್ ಹಾಗೂ ಜ್ಞಾನ ಭಾರತಿ ವ್ಯಾಪ್ತಿಯಲ್ಲಿ ಹೆಚ್ಚು ಸರಗಳವು ನಡೆದಿದೆ. ಆದ್ದರಿಂದ ಇಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಜನವಸತಿ ಪ್ರದೇಶಗಳಲ್ಲಿ ಹೊಯ್ಸಳ ಹಾಗೂ ಚೀತಾ ವಾಹನ ಗಸ್ತು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಉತ್ತರ ಭಾರತ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ತಂಡಗಳು ಬಂದು ಸರಗಳವು ನಡೆಸುತ್ತಿರುವ ಅನುಮಾನವಿದೆ.
ಕದ್ದ ಮಾಲುಗಳನ್ನು ಗಿರವಿ ಅಂಗಡಿಗಳು ಸ್ವೀಕರಿಸುತ್ತಿರುವ ಅನುಮಾನವಿದೆ. ಆದ್ದರಿಂದ ಗಿರವಿ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಇಂತಹ ಆಭರಣ ಸ್ವೀಕರಿಸಿದ್ದು ತಿಳಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.