ಟೆಕ್ಕಿಗೆ ಹನಿಟ್ರ್ಯಾಪ್: ಓರ್ವ ಮಹಿಳೆ ಸೇರಿ ಮೂವರ ಬಂಧನ
ಬೆಂಗಳೂರು, ಜನವರಿ. 13 : ಸಾಫ್ಟ್ ವೇರ್ ಉದ್ಯೋಗಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಹಣ ದೋಚಿದ್ದ ಓರ್ವ ಮಹಿಳೆ ಸೇರಿ 3 ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದ ಮಾರೇನಹಳ್ಳಿಯ ಮಾಜಿ ಪಾಲಿಕೆ ಸದಸ್ಯ ವಾಗೀಶ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಆಚಾರ್ ಮತ್ತು ರವಿ ಕುಮಾರ್ ಬಂಧಿತರು. ಲೊಕ್ಯಾಂಟೋ ವೆಬ್ ಸೈಟ್ ಮೂಲಕ ಗಿರಾಕಿಗಳನ್ನು ಸೆಳೆದುಕೊಂಡು ಯುವತಿಯರ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದರು.
ಈ ಆರೋಪಿಗಳು ಟೆಕ್ಕಿ ಒಬ್ಬರನ್ನು ಕರೆಸಿ ಹತ್ತು ಸಾವಿರ ರು ದೋಚಿದ್ದರು. ಇವರ ಬ್ಲಾಕ್ ಮೇಲ್ ನಿಂದ ಬೆದರಿದ ಎಂಜಿನಿಯರ್ ನಗರ ಪೊಲೀಸ್ ಆಯುಕ್ತರಿಗೆ ಇಮೇಲ್ ಮೂಲಕ ದೂರು ನೀಡಿದ್ದರು.

ದೂರನ್ನು ದಾಖಲಿಸಿಕೊಂಡ ವಿಜಯನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು. ಇನ್ನು ಈ ದಂಧೆಯಲ್ಲಿ ತೊಡಗಿಕೊಂಡಿರುವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸಿದ್ದಾರೆ.
ಹನಿಟ್ರ್ಯಾಪ್ ಹೇಗೆ?: ಕಳೆದ ಒಂದೂವರೆ ವರ್ಷದಿಂದ ಹನಿಟ್ರ್ಯಾಪ್ ಡೀಲಿಂಗ್ ಮಾಡಿಕೊಂಡು ಬಂದಿರುವ ಈ ತಂಡದಲ್ಲಿ ಒಟ್ಟು ನಾಲ್ಕು ಮಂದಿ ಪುರುಷರು ಮೂವರು ಯುವತಿಯರಿದ್ದಾರೆ.
ವಿಜಯನಗರದ ಮಾರೇನಹಳ್ಳಿಯಲ್ಲಿರುವ ಬಿಬಿಎಂಪಿ ಕಛೇರಿಯ ಮೇಲಿನ ಕೊಠಡಿಯನ್ನು ಇವರು ತಮ್ಮ ಹನಿಟ್ರ್ಯಾಪ್ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ದಂಧೆಗೆ ಅನುಮಾನ ಬಾರದೇ ಇರಲು ಕಚೇರಿ ಮೇಲೆ ಎನ್ಜಿಓ ಟ್ರಸ್ಟ್ ಒಂದರ ಹೆಸರನ್ನು ಹಾಕಿದ್ದರು.
ಇಲ್ಲಿಯವರೆಗೂ 70 ಮಂದಿ ಇವರ ಬಲೆಗೆ ಬಿದ್ದಿದ್ದು, 200 ರೂಪಾಯಿ ನಿಂದ ಆರಂಭಗೊಂಡು 2 ಲಕ್ಷದವರೆಗೆ ಸುಲಿಗೆ ಮಾಡುತ್ತಿದ್ದರು. ದೃಶ್ಯವನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಇವರು ಗಿರಾಕಿಗಳ ಬೆದರಿಸಿ ಹಣ ಕಿತ್ತುಕೊಳ್ಳುತ್ತಿದ್ದರು.
ಗಿರಾಕಿಯ ಆರ್ಥಿಕ ಪರಿಸ್ಥಿತಿ ಗಮನಿಸಿ ವಸೂಲಿ ಮಾಡುತ್ತಿದ್ದ ಇವರು ಈ ವರೆಗೂ ಟ್ಯಾಪ್ ಮಾಡಿರುವ ಗಿರಾಕಿಗಳ ಫೋಟೋವನ್ನು ತೆಗೆದುಕೊಂಡಿದ್ದರು. ದುಡ್ಡು ದೊಡ್ಡ ಪ್ರಮಾಣದಲ್ಲಿ ಸಿಗದಿದ್ದಾಗ ಗಿರಾಕಿಗಳಿಗೆ ಗಂಭೀರ ಹಲ್ಲೆ ನಡೆಸಿ ಹಣವನ್ನು ಕಿತ್ತುಕೊಳ್ಳುತ್ತಿದ್ದರು.
ಹಣವನ್ನು ಡೆಬಿಡ್ ಕ್ರೆಡಿಟ್ ಕಾರ್ಡ್ ಮೂಲಕ ತಮ್ಮ ಖಾತೆಗೆ ವರ್ಗಾಯುಸುತ್ತಿದ್ದರು. ಕಚೇರಿಯ ಕಂಪ್ಯೂಟರ್ ನಲ್ಲಿ ಹಲ್ಲೆ ಮಾಡುತ್ತಿರುವ, ಈವರೆಗೂ ಟ್ರ್ಯಾಪ್ ಗೆ ಒಳಗಾಗಿರುವ ಗಿರಾಕಿಗಳ ಫೋಟೋ ಸೇವ್ ಮಾಡಿದ್ದರು ಎನ್ನುವ ಮಾಹಿತಿ ದೊರೆತಿದೆ.












Click it and Unblock the Notifications