Bengaluru-Mysuru Expressway: ಪಿಎಂ ಮೋದಿ ಉದ್ಘಾಟಿಸಿದ ಹೈವೇ ಮತ್ತೆ ಬೇಡವಾದ ಕಾರಣಕ್ಕೆ ಸುದ್ದಿಯಲ್ಲಿ!
ಇದೇ ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಮಂಡ್ಯದಲ್ಲಿ ಈ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಿದ್ದರು. ಮಳೆ ಬಂದಾಗಲೆಲ್ಲಾ ಇಲ್ಲಿ ನೀರು ನಿಲ್ಲುತ್ತಿರುವುದು ಇಲ್ಲಿ ಸಹಜ ಘಟನೆಯಂತೆ ಆಗಿದೆ.
ಬೆಂಗಳೂರು, ಮಾರ್ಚ್ 18: ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಕಳೆದ ವಾರದ ಹಿಂದೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ನೀರು ನಿಂತು ಕೆರೆಯಂತೆ ಕಂಡು ಬಂದಿತು. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಇದೇ ಮಾರ್ಚ್ 12ರಂದು ಪ್ರಧಾನಿ ಮೋದಿ ಅವರು ಮಂಡ್ಯದಲ್ಲಿ ಈ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಿದ್ದರು. ಮಳೆ ಬಂದಾಗಲೆಲ್ಲಾ ಇಲ್ಲಿ ನೀರು ನಿಲ್ಲುತ್ತಿರುವುದು ಇಲ್ಲಿ ಸಹಜ ಘಟನೆಯಂತೆ ಆಗಿದೆ. ಇದರಿಂದ ರಸ್ತೆಯಲ್ಲಿ ಸರಣಿ ಅಪಘಾತಗಳು ನಡೆಯುತ್ತಿವೆ. ಜೊತೆಗೆ ಈ ಎಕ್ಸ್ಪ್ರೆಸ್ವೇನಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದ್ದು, ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.
ಕಳೆದ ಒಂದು ತಿಂಗಳಿಂದ ತಾಪಮಾನ ಅಧಿಕವಾಗಿತ್ತು, ಇದರಿಂದ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಮಳೆ ಬರುತ್ತಿದೆ. ಇನ್ನೂ ಎರಡು ದಿನ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಬರುವ ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿ ನೀರು ನಿಂತು ಹೆದ್ದಾರಿ ಸಂಪೂರ್ಣ ನೀರುಮಯವಾಗಿತ್ತು, ಇದರಿಂದ ಕೆಲವು ವಾಹನಗಳ ಸವಾರರು ತೊಂದರೆಗೆ ಸಿಲುಕಿದ್ದರು.
ಕಳೆದ ವರ್ಷ ಮಳೆಗಾಲದಲ್ಲಿ ಮಳೆ ಬಂದಾಗ ಇದೆ ಅವಾಂತರ ಸೃಷ್ಟಿಯಾಗಿ ರಾಷ್ಟ್ರೀಯ ಸುದ್ದಿಯಾಗಿತ್ತು. ಈಗ ಉದ್ಘಾಟನೆಯಾದ 7 ದಿನ ಕಳೆಯುವ ಮುನ್ನವೇ ಹೆದ್ದಾರಿಯಲ್ಲಿ ನೀರು ನಿಂತಿದೆ. ರಸ್ತೆ ಉದ್ಘಾಟನೆಯಾದ ಬಳಿಕ ಟೋಲ್ ದುಬಾರಿಯಾಗಿರುವುದರ ಬಗ್ಗೆ ಹಲವು ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಜನರು ಟೋಲ್ ಕಟ್ಟುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಎಕ್ಸ್ಪ್ರೆಸ್ವೇ ಒಂದೆಡೆ ರಸ್ತೆ ಆಗಲೇ ಕಿತ್ತು ಬಂದಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.

ಇದುವರೆಗೂ 300ಕ್ಕೂ ಅಧಿಕ ಅಪಘಾತ
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಇದುವರೆಗೂ 300ಕ್ಕೂ ಅಧಿಕ ಅಪಘಾತ ಘಟನೆಗಳು ವರದಿಯಾಗಿವೆ. ಇನ್ನೂ ಕೆಲವೆಡೆ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಅಪೂರ್ಣಗೊಂಡ ರಸ್ತೆಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿರುವುದರ ಕುರಿತು ಜನರು ಹಾಗೂ ಹಲವು ಸಂಘಟನೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದವು. ಮಳೆ ನೀರು ನಿಂತು ಟ್ರಾಫಿಕ್ ಜಾಂ ಉಂಟಾಗುತ್ತಿದೆ, ಸರ್ವೀಸ್ ರಸ್ತೆಯೇ ನಿರ್ಮಾಣವಾಗಿಲ್ಲ.
ಇದರಿಂದ ವಾಹನ ಸವಾರರು ತೊಂದರೆಗೆ ಸಿಲಿಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಳೆಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಉದ್ಘಾಟನೆಯಾದ 6 ದಿನಕ್ಕೆ ಮಳೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಷ್ಟೇಲ್ಲಾ ಸಮಸ್ಯೆಯಾಗಿದ್ದರು. ಹೆದ್ದಾರಿ ಪ್ರಾಧಿಕಾರದವರು ಇಲ್ಲವೇ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರಿರಲಿ ಸ್ಥಳಕ್ಕೂ ಬಂದು ಪರಿಶೀಲನೆ ಮಾಡುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ
ಶುಕ್ರವಾರವಷ್ಟೇ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ರಾಮನಗರ ತಾಲೂಕಿನ ಬಸವನಪುರದ ಬಳಿ ಮೇಲ್ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್ ಲಾರಿ ಹಾಗೂ ಕಾರು ಚಾಲಕರು ಪ್ರಾಣಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ರಾಮನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಈವರೆಗೂ 41 ಜನರು ಮೃತ
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲೇ ಅಪಘಾತಗಳ ಸಂಖ್ಯೆ ಶತಕ ಬಾರಿಸಿದೆ. ಇಲ್ಲಿ ಇಲ್ಲಿ ಈವರೆಗೂ 41 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸಂಭವಿಸಿದ 225 ಅಪಘಾತದಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್ ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ ಸಂಭವಿಸಿದ 30 ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ಇದುವರೆಗೂ ಶೇಕಡ 80ರಷ್ಟು ಕಾಮಗಾರಿ
ಬೆಂಗಳೂರಿನಿಂದ ಮೈಸೂರುವರೆಗಿನ 118 ಕಿಮೀ ಎಕ್ಸ್ಪ್ರೆಸ್ವೇ ಇದುವರೆಗೂ ಶೇಕಡ 80ರಷ್ಟು ಕಾಮಗಾರಿ ನಡೆದಿದೆ. ಆದರೆ ಇನ್ನೂ 20ರಷ್ಟು ಕಾಮಗಾರಿ ಬಾಕಿ ಇದೆ. ಬೆಂಗಳೂರಿನಿಂದ ಮಂಡ್ಯವರೆಗೂ ಕಾಮಗಾರಿ ಮುಗಿದಿದ್ದು, ಬೆಂಗಳೂರಿನಿಂದ 90 ನಿಮಿಷದಲ್ಲಿ ಕ್ರಮಿಸಬಹುದಾದ ಹೆದ್ದಾರಿ ಇದಾಗಿದೆ.
ಇಲ್ಲಿ ವಾಹನಗಳ ವೇಗ ನಾಗಲೋಟ ತಲುಪುತ್ತದೆ, ಇದರಿಂದಲೇ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಅಲ್ಲದೆ ಈ ರಸ್ತೆಯಲ್ಲಿ ಸಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಆಗುತ್ತಿರುವ ಅಪಘಾತಗಳ ಬಗ್ಗೆ ವಿರೋಧಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಅಪೂರ್ಣ ಕಾಮಗಾರಿಯೇ ಇದಕ್ಕೆಲ್ಲಾ ಕಾರಣ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications