ಬೈಯಪ್ಪನಹಳ್ಳಿ ಮೆಟ್ರೋ ಫ್ಲಾಟ್ ಫಾರಂ ವಿಸ್ತರಣೆ
ಬೆಂಗಳೂರು, ಮಾರ್ಚ್ 05 : ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಮೇಲಿನ ರೈಲುಗಳ ವಿಪರೀತ ಒತ್ತಡ ಕಡಿಮೆ ಮಾಡಲು ಬೈಯಪ್ಪನವಹಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ವಿಸ್ತರಣೆ ಕಾರ್ಯ ಭರದಿಂದ ಸಾಗಿದೆ., ಭವಿಷ್ಯದಲ್ಲಿ ಕೆಲವು ರೈಲುಗಳನ್ನು ಬೈಯಪ್ಪನಹಳ್ಳಿ ನಿಲ್ದಾಣದಲ್ಲೇ ನಿಲ್ಲಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಹೀಗಾಗಿ ಬೈಯಪ್ಪನಹಳ್ಳಿಯಿಂದ ಮೆಜೆಸ್ಟಿಕ್ಗೆ ಮೆಟ್ರೊ ಮೂಲಕ ಸಂಚಾರ ಕಲ್ಪಿಸಲಾಗುತ್ತಿದೆ.
ಸದ್ಯ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ಸೇರಿ ಒಟ್ಟು 12 ರೈಲುಗಳು ನಿತ್ಯ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿವೆ. ಕೇವಲ 19 ಕೋಚ್ ಗಳ ರೈಲು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದಾಗಿದೆ. ಈಗ ನಡಯುತ್ತಿರುವ ವಿಸ್ತರಣೆ ಕಾಮಗಾರಿ ಮುಗಿದರೆ 24 ಕೋಚ್ಗಳ ರೈಲುಗಳು ಕೂಡ ಅಲ್ಲಿ ನಿಲುಗಡೆ ಮಾಡಬಹುದು.
ಹೀಗಾಗಿ ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರು ಅಲ್ಲಿಯೇ ಇಳಿದು ಬೇರೆಡೆಗೆ ತಲುಪಬಹುದು. ಅದರಿಂದ ಬೆಂಗಳೂರು ಕೇಂದ್ರ ನಿಲ್ದಾಣಕ್ಕೆ ಬರುವುದನ್ನು ತಪ್ಪಿಸಬಹುದು. ಆಗ ಜನರಿಗೆ ಸಮಯವೂ ಉಳಿಯುತ್ತದೆ. ಸಂಚಾರ ದಟ್ಟಣೆಯೂ ತಗ್ಗುತ್ತದೆ ಎನ್ನುತ್ತಾರೆ ವಿಭಾಗೀಯ ರೈಲ್ವೆ ಪ್ರಬಂಧಕ ಆರ್.ಎಸ್.ಸಕ್ಸೇನಾ.
ಸದ್ಯ ಬೆಂಗಳೂರು ಕೇಂದ್ರ ಬಸ್ ನಿಲ್ದಾಣ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ದಿನಕ್ಕೆ75 ರೈಲುಗಳ ನಿಲುಗಡೆಗೆ ವೇದಿಕೆಯಾಗಿದೆ. ಇದರಿಂದ ಕೇಂದ್ರ ಬೆಂಗಳೂರು ಪ್ರದೇಶದಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ರೈಲುಗಳ ಆಗಮನ ಮತ್ತು ನಿರ್ಗಮನವೂ ವಿಳಂಬವಾಗುತ್ತಿದೆ. ಹೀಗಾಗಿ ಬೈಯಪ್ಪನಹಳ್ಳಿ ನಿಲ್ದಾಣದ ವಿಸ್ತರಣೆ ಪೂರ್ಣಗೊಂಡರೆ ಕೆಲಮಟ್ಟಿನ ಅನುಕೂಲವಾಗುತ್ತದೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬೈಯಪ್ಪನಹಳ್ಳಿಯಲ್ಲಿ ರೈಲುಗಳ ನಿಲುಗಡೆ ಹೆಚ್ಚಳದಿಂದ ಮೆಟ್ರೊ ಸಂಚಾರದಲ್ಲೂ ಸಾಕಷ್ಟು ಬದಲಾವಣೆ ಆಗಲಿದೆ. ರೈಲು ಪ್ರಯಾಣಿಕರು ರೈಲಿನ ಮೂಲಕ ಮೆಜೆಸ್ಟಿಕ್ ತಲುಪಲು ಕನಿಷ್ಠ 30 ನಿಮಿಷ ಬೇಕು. ಆದರೆ ಮೆಟ್ರೊ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಮೆಜೆಸ್ಟಿಕ್ ತಲುಪಬಹುದಾಗಿದೆ.