ಸಿಎಂ ಯಾತ್ರೆಗೆ ಜನರೇ ಬರುತ್ತಿಲ್ಲ: ದೇವೇಗೌಡ ಟಾಂಗ್
ಬೆಂಗಳೂರು, ಡಿಸೆಂಬರ್ 30 : ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಜನರು ಬರುತ್ತಿಲ್ಲ. 4 ವರ್ಷಗಳ ಕಾಲ ಸಿಎಂ ಏನು ಮಾಡುತ್ತಿದ್ದರು ಜನರ ವಿಶ್ವಾಸವನ್ನು ಪಡೆದಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಪ್ರಶ್ನಿಸಿದ್ದಾರೆ.
ಮಾತು ಹದ್ದು ಮೀರುತ್ತಿದೆ ಎಂದು ಸಿದ್ದುಗೆ ಗುದ್ದು ನೀಡಿದ ದೇವೇಗೌಡರು
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆ ಪ್ರವಾಸ ಮಾಡುತ್ತಿದ್ದಾರೆ. ಜಿ.ಪರಮೇಶ್ವರ್ ಒಂದು ಕಡೆ ಪ್ರವಾಸ ಮಾಡುತ್ತಿದ್ದಾರೆ ನಮ್ಮದು ಹಾಗಲ್ಲ, ನಾನು, ಕುಮಾರಸ್ವಾಮಿ ಒಟ್ಟಿಗೆ ಪ್ರವಾಸ ಮಾಡುತ್ತೇವೆ ಎಂದರು.
ಸಿಎಂ, ಪರಮೇಶ್ವರ್ ಪ್ರವಾಸಕ್ಕೆ ಎಷ್ಟು ಜನ ಸೇರಿದ್ದಾರೆಂದು ನೋಡಿದ್ದೇನೆ. ಅವರದ್ದು ಸರ್ಕಾರಿ ಕಾರ್ಯಕ್ರಮವೋ, ಪ್ರಚಾರ ಕಾರ್ಯಕ್ರಮವೋ ಎಂದು ತಿಳಿಯುವುದಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿ ನೋಡೋಣ. ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಿಸಲಿ ನೋಡೋಣ ಎಂದು ಸವಾಲೆಸೆದರು.
ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಹಾಗಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ರಾಹುಲ್ಗಾಂಧಿ, ಸೋನಿಯಾ ಗಾಂಧಿ ಬಗ್ಗೆ ಎಲ್ಲಿಯೂ ಲಘುವಾಗಿ ಮಾತನಾಡಿಲ್ಲ. ಮೋದಿಯವರ ಬಗ್ಗೆಯೂ ನಾನು ಮಾತನಾಡಿಲ್ಲ. ನಮ್ಮ ಕೆಲಸ ಬೇರೆ ಇದೆ ಎಂದರು.