ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಶೀಘ್ರದಲ್ಲೇ ಆರಂಭ
ಬೆಂಗಳೂರು, ಡಿಸೆಂಬರ್ 29 : 'ಪೀಣ್ಯದಲ್ಲಿರುವ ಕೆಎಸ್ಆರ್ಟಿಸಿಯ ಬಸವೇಶ್ವರ ಬಸ್ ನಿಲ್ದಾಣ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ' ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಗುರುವಾರ ಸಚಿವ ಎಚ್.ಎಂ.ರೇವಣ್ಣ ಅವರು ಕೆಎಸ್ಆರ್ಟಿಸಿ, ಬಿಎಂಟಿಸಿ, ಬಿಎಂಆರ್ಸಿಎಲ್ ಅಧಿಕಾರಿಗಳ ಜೊತೆ ಬಸವೇಶ್ವರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ನಿಲ್ದಾಣದಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣ ಪುನಃ ಆರಂಭಿಸಲು ಅಗತ್ಯ ವ್ಯವಸ್ಥೆಗಳಿವೆಯೇ? ಎಂದು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, 'ಬೆಂಗಳೂರು ನಗರದಿಂದ 17 ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಸಂಚಾರ ನಡೆಸುವ ಬಸ್ಸುಗಳು ಈ ನಿಲ್ದಾಣದಿಂದಲೇ ಕಾರ್ಯಾಚರಣೆ ನಡೆಸುವಂತೆ ಮಾಡಲು ಚಿಂತನೆ ನಡೆಸಲಾಗಿದೆ' ಎಂದರು.
ಸುಮಾರು 75 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಸವೇಶ್ವರ ಬಸ್ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. 2014ರ ಸೆಪ್ಟೆಂಬರ್ 10ರಂದು ಬಸ್ ನಿಲ್ದಾಣ ಲೋಕಾರ್ಪಣೆಯಾಗಿತ್ತು. ನಂತರ ನಷ್ಟದ ನೆಪ ಹೇಳಿ 2015ರ ಫೆ.28ಕ್ಕೆ ಬಸ್ ನಿಲ್ದಾಣವನ್ನು ಮೆಜೆಸ್ಟಿಕ್ಗೆ ಸ್ಥಳಾಂತರ ಮಾಡಲಾಗಿತ್ತು.

ಬಿಎಂಟಿಸಿ ಮತ್ತು ಮೆಟ್ರೋ ಸಹಕಾರ
'ಸುಮಾರು 75 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣ ಉತ್ತಮವಾದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಕಾರಣಾಂತರದಿಂದ ಇದು ಬಳಕೆಯಾಗುತ್ತಿಲ್ಲ. ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಸಹಕಾರ ಲಭಿಸಿದರೆ, ಈ ನಿಲ್ದಾಣ ದೇಶದಲ್ಲೇ ಅತಿ ದೊಡ್ಡ ಸಾರಿಗೆ ಕೇಂದ್ರ ಎನಿಸಿಕೊಳ್ಳಲಿದೆ' ಎಂದು ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಬಿಎಂಟಿಸಿ ಮತ್ತು ಮೆಟ್ರೋ ಸೇವೆ
'ಬಿಎಂಟಿಸಿ ಬಸವೇಶ್ವರ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಪ್ರದೇಶಗಳಿಗೆ ಬಸ್ಸುಗಳನ್ನು ಓಡಿಸುತ್ತಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸುತ್ತಿದೆ. ಹತ್ತಿರದ ಮೆಟ್ರೋ ನಿಲ್ದಾಣಕ್ಕೂ ಸೇವೆ ಒದಗಿಸಲು ಆರಂಭಿಸಿದರೆ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಪರ್ಕ ಹೆಚ್ಚಲಿದೆ' ಎಂದು ಸಚಿವರು ಹೇಳಿದರು.

ಖಾಸಗಿ ಬಸ್ ನಿಲ್ದಾಣ ಆರಂಭ
'ಈ ನಿಲ್ದಾಣದ ಸಮೀಪದಲ್ಲಿಯೇ ಖಾಸಗಿ ಬಸ್ ನಿಲ್ದಾಣ ಆರಂಭಿಸಲು ಎರಡೂವರೆ ಎಕರೆ ಜಾಗ ಗುರುತಿಸಲಾಗಿದೆ. ಇದಕ್ಕೂ ಕೆಎಸ್ಆರ್ಟಿಸಿಯಿಂದ ಮೂಲ ಸೌಕರ್ಯ ಒದಗಿಸಲಾಗುತ್ತದೆ. ನಿಲ್ದಾಣ ಆರಂಭವಾದ ಬಳಿಕ ಖಾಸಗಿ ಬಸ್ಸುಗಳನ್ನು ನಗರ ಪ್ರವೇಶಿಸದಂತೆ ತಡೆಯಲಾಗುತ್ತದೆ' ಎಂದು ಸಚಿವರು ತಿಳಿಸಿದರು.

ಸಂಚಾರ ದಟ್ಟಣೆ ಕಡಿಮೆಯಾಗಲಿದೆ
'ಕೆಎಸ್ಆರ್ಟಿಸಿ ಬಸ್ಸುಗಳು ಈ ನಿಲ್ದಾಣಕ್ಕೆ ಬಂದು ನೋಂದಣಿ ಮಾಡಿಸಿಕೊಂಡು ಮೆಜೆಸ್ಟಿಕ್ಗೆ ತಲುಪುತ್ತಿವೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಪೀಣ್ಯ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಈ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಲಿದೆ' ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ನಷ್ಟದ ನೆಪ ಹೇಳಿ ನಿಲ್ದಣ ಮುಚ್ಚಲಾಗಿತ್ತು
ನಷ್ಟದ ನೆಪ ಹೇಳಿದ ಸಾರಿಗೆ ಸಂಸ್ಥೆಗಳು ಬಸ್ ನಿಲ್ದಾಣವನ್ನು ಮುಚ್ಚುವಂತೆ ಮಾಡಿದ್ದವು. ಮೊದಲು ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಬಸ್ ನಿಲ್ದಾಣವನ್ನು ಮೊದಲಿನಂತೆ ಮೆಜೆಸ್ಟಿಕ್ಗೆ ಸ್ಥಳಾಂತರ ಮಾಡಬೇಕು ಎಂದು ಸಾರಿಗೆ ಸಚಿವರಿಗೆ ಮನವಿ ಮಾಡಿದವು. ಮನವಿಗೆ ಸ್ಪಂದಿಸಿ ನಿಲ್ದಣವನ್ನು ಸ್ಥಳಾಂತರ ಮಾಡಲಾಯಿತು.












Click it and Unblock the Notifications