'ನಾನು ನಿಜವಾಗಿಯೂ ಅದೃಷ್ಟವಂತೆ': ಪವಿತ್ರಾ ಗೌಡ ಪುತ್ರಿ ಖುಷಿ ಹಿಂಗಂದಿದ್ಯಾಕೆ?
ಬೆಂಗಳೂರು, ಆಗಸ್ಟ್ 13: ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೊತೆ ಆಪ್ತೆ ನಟಿ ಪವಿತ್ರಾ ಗೌಡ ಜೈಲು ಸೇರಿ ಎರಡು ತಿಂಗಳು ಕಳೆಯುತ್ತಿದೆ. ಆದರೆ ದರ್ಶನ್ ಸೇರಿದಂತೆ ನ್ಯಾಯಾಂಗ ಬಂಧನದಲ್ಲಿರುವ ಒಟ್ಟು 17 ಮಂದಿಗೆ ಜಾಮೀನು ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇತ್ತ ದರ್ಶನ್ ಹಾಗೂ ಪವಿತ್ರಾ ಗೌಡ ಕುಟುಂಬಸ್ಥರು ಬಿಡುಗಡೆಗೆ ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸದ್ಯ ಯಾವ ಫಲಗಳು ಕಾಣುತ್ತಿಲ್ಲ.
ಈ ಮಧ್ಯೆ ನಟಿ ಪವಿತ್ರಾ ಗೌಡ ಮಗಳು ಖುಷಿ ಗೌಡ ಅಮ್ಮನನ್ನು ನೆನೆದು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಭಾರೀ ಪವಿತ್ರಾ ಗೌಡ ಮಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಾಯಿ ಜೊತೆಗೆ ಫೋಟೋವೊಂದನ್ನು ಹಂಚಿಕೊಂಡಿರುವ ಖುಷಿ ಗೌಡ, ತಮ್ಮ ತಾಯಿ ಪವಿತ್ರಾ ಗೌಡ ಅವರನ್ನು ಹಾಡಿ ಹೊಗಳಿದ್ದಾರೆ.

'ಅವಳು ನನ್ನ ಪ್ರೇರಣೆ, ಎಂತಹದ್ದೇ ಪರಿಸ್ಥಿತಿ ಬಂದರೂ ಗಟ್ಟಿಯಾಗಿರಬೇಕು ಎಂದು ಆಕೆ ನನಗೆ ಕಲಿಸಿಕೊಟ್ಟಿದ್ದಾಳೆ. ಅವಳು ಯಾವಾಗಲೂ ತುಂಬಾ ಮುಕ್ತವಾಗಿ ಇರುತ್ತಾಳೆ ಹಾಗೂ ಸದಾ ನನಗೆ ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು. ನನ್ನ ತಾಯಿಯಂತೆ ಯಾರೂ ಇಲ್ಲ. ಅವಳಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ಅದೃಷ್ಟವಂತೆ. ಹಾಗೂ ಅವಳ ಮಗಳಾಗಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ' ಎಂದು ಖುಷಿ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಫ್ಯಾಷನ್ ಡಿಸೈನರ್ ಆಗಿರುವ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್ ಕಾರ್ಪೆಟ್ 777 ಶಾಪ್ ಅನ್ನು ಖುಷಿ ಗೌಡ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿರುವ ಈ ರೆಡ್ ಕಾರ್ಪೆಟ್ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಖುಷಿ ಗೌಡ ಮೇಲಿದೆ. ಇನ್ನು ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ ಅವರನ್ನು ಕಾಣಲು ಮಗಳು ಖುಷಿ ತಮ್ಮ ಅಜ್ಜಿಯೊಂದಿಗೆ ಆಗಾಗ ಜೈಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.












Click it and Unblock the Notifications